ಮೈಸೂರಿನ ಪಿರಿಯಾಪಟ್ಟಣದ ಪುರಾತನ ಕಾಲದ ನಿಧಿ ಪತ್ತೆ
ಮೈಸೂರು, ಫೆಬ್ರವರಿ 11: ಮನೆಯ ಅಡಿಪಾಯ ತೆಗೆಯುವಾಗ ದೊರೆತ ಸುಮಾರು 140 ಬೆಳ್ಳಿ ನಾಣ್ಯಗಳನ್ನು ಕೂಲಿ ಕಾರ್ಮಿಕರು ಹಂಚಿಕೊಂಡ ಘಟನೆ ಪಿರಿಯಾಪಟ್ಟಣ ತಾಲೂಕಿನ ಹರೀನಹಳ್ಳಿಯಲ್ಲಿ ನಡೆದಿದೆ. ನಂತರ ಮಾಹಿತಿ ಪಡೆದ ಪೊಲೀಸರು ಅದನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹರೀನಹಳ್ಳಿ ಗ್ರಾಮದಲ್ಲಿ ಮನೆಯ ಅಡಿಪಾಯಕ್ಕೆ ಭೂಮಿಯನ್ನು ಅಗೆಯುತ್ತಿದ್ದಾಗ ಮಣ್ಣಿನ ಮಡಿಕೆಯೊಂದು ಪತ್ತೆಯಾಗಿತ್ತು. ಇದನ್ನು ಕಂಡ ಕಾರ್ಮಿಕರು ಅದನ್ನು ತೆಗೆದು ನೋಡಿದ್ದಾರೆ. ಈ ಸಂದರ್ಭ ಅದರಲ್ಲಿ 1840ರ ಕಾಲದ್ದು ಎನ್ನಲಾದ ವಿಕ್ಟೋರಿಯಾ ರಾಣಿಯ ಭಾವಚಿತ್ರ ಇರುವ ಸುಮಾರು 140 ನಾಣ್ಯ ಇರುವುದು ಕಂಡು ಬಂದಿದೆ.
ಕೂಡಲೇ ಎಚ್ಚೆತ್ತುಕೊಂಡ ಕಾರ್ಮಿಕರು ಬೇರೆ ಯಾರಿಗೂ ತಿಳಿಯದಂತೆ ತಾವೇ ಹಂಚಿಕೊಳ್ಳುವ ಮೂಲಕ ಮನೆಗೆ ಒಯ್ದಿದ್ದರು. ಈ ವಿಚಾರ ಹೇಗೋ ಹೊರಗೆ ಬಂದಿದ್ದು, ಅದು ಪೊಲೀಸರ ಗಮನಕ್ಕೆ ಬಂದಿದೆ.
ಹೀಗಾಗಿ ಸಂಪೂರ್ಣ ಮಾಹಿತಿ ಕಲೆ ಹಾಕಿದ ಪೊಲೀಸರು ಪಿರಿಯಾಪಟ್ಟಣ ವೃತ್ತನಿರೀಕ್ಷಕರಾದ ಸಿದ್ದಯ್ಯ ಮತ್ತು ಬೆಟ್ಟದಪುರ ಪಿ.ಎಸ್.ಐ ಚಿಕ್ಕಸ್ವಾಮಿ ಹಾಗೂ ಪೋಲಿಸ್ ಸಿಬ್ಬಂದಿ ಹರೀನಹಳ್ಳಿ ಗ್ರಾಮಕ್ಕೆ ತೆರಳಿ, ಸ್ಥಳದ ಮಹಜರು ನಡೆಸಿ ಕಾರ್ಮಿಕರನ್ನು ವಿಚಾರಣೆಗೊಳಪಡಿಸಿದ್ದಾರೆ. ನಂತರ ಕಾರ್ಮಿಕರಿಂದ ಬೆಳ್ಳಿನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಡಿಪಾಯ ತೋಡುವ ವೇಳೆ ನಿಧಿ ಸಿಕ್ಕಿದ ಸ್ಥಳಕ್ಕೆ ಇದೀಗ ಜನ ಕುತೂಹಲದಿಂದ ನೋಡಲು ತೆರಳುತ್ತಿದ್ದಾರೆ. ಬಹುಶಃ ಹಿಂದಿನ ಕಾಲದಲ್ಲಿ ಶತ್ರುಗಳಿಂದ ರಕ್ಷಿಸಿಕೊಳ್ಳಲು ಹೂತು ಹಾಕಿದ ನಾಣ್ಯಗಳು ಇದಾಗಿರಬಹುದೆಂದು ಜನ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮದಲ್ಲಿ ಈ ಹಿಂದೆ ಪ್ರಾಚೀನ ಶಾಸನವೊಂದು ಪತ್ತೆಯಾಗಿದ್ದು ಇದರಲ್ಲಿ ನಿಧಿ ಇರುವ ಬಗ್ಗೆ ಬರೆಯಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ಸದ್ಯ ಗ್ರಾಮದಲ್ಲಿ ಜನ ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಪುರಾತತ್ವ ಇಲಾಖೆ ಇತ್ತ ಗಮನಹರಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.