ಬಿಜೆಪಿ ಚಾಣಕ್ಯನಿಂದ ಸಿದ್ದರಾಮಯ್ಯಗೆ ಓಪನ್ ಚಾಲೆಂಜ್!
ಮೈಸೂರು, ಜವನರಿ 25 : 'ಸಿದ್ದರಾಮಯ್ಯ ಅವರೇ ನಾನು ಚಾಲೆಂಜ್ ಮಾಡುತ್ತೇನೆ ಮುಂದಿನ ಚುನಾವಣೆಯಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಿದ್ದರಾಮಯ್ಯ ತವರು ನೆಲದಲ್ಲಿಯೇ ಚಾಲೆಂಜ್ ಮಾಡಿದ್ದಾರೆ.
ಗುರುವಾರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, 'ಕಾಂಗ್ರೆಸ್ ಸರ್ಕಾರ ಇಂದು ನಡೆಯುತ್ತಿರುವ ಪರಿವರ್ತನಾ ಯಾತ್ರೆಗೆ ತೊಂದರೆ ನೀಡಬೇಕೆಂದು ಬಂದ್ ಮಾಡಿಸಿದೆ' ಎಂದು ದೂರಿದರು.
ಚಿತ್ರಗಳು : ಮೈಸೂರಿನಲ್ಲಿ ಅಮಿತ್ ಶಾ ಮೋಡಿ
'ಕರ್ನಾಟಕ ಬಂದ್ಗೆ ಕರೆ ಕೊಡಲು ಕುಮ್ಮಕ್ಕು ನೀಡಿದ್ದಾರೆ. ಇದೇ ರೀತಿ ಫೆ.4 ರಂದು ಬೆಂಗಳೂರಿನಲ್ಲಿ ಈ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರಲಿದ್ದಾರೆ' ಎಂದರು.
'ನಮಗೆ ವಿಶ್ವಾಸವಿದೆ ಫೆ.4ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ನಾವೇ ಅಧಿಕಾರ ನಡೆಸುತ್ತೇವೆ. ನಾನು ಚಾಲೆಂಜ್ ಮಾಡುತ್ತೇನೆ ಮುಂದಿನಾ ಚುನಾವಣೆಯಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಸಿದ್ದರಾಮಯ್ಯ ಅವರೇ' ಎಂದು ಹೇಳಿದರು.
'ಮೈಸೂರು ಪವಿತ್ರ ಭೂಮಿ. ಮಾತೆ ಚಾಮುಂಡೇಶ್ವರಿ ಮಹಿಷಾಸುರನನ್ನು ಮರ್ದನ ಮಾಡಿದಳು. ಅಸುರರನ್ನು ನಾಶ ಮಾಡಿದಳು ಅಂತಹ ನಾಡಿನಲ್ಲಿ ಅನ್ಯಾಯವಾಗುವುದಕ್ಕೆ ನಾವು ಬಿಡುವುದಿಲ್ಲ. ಭ್ರಷ್ಟಾಚಾರಿ, ದುರಹಂಕಾರಿ ಸರ್ಕಾರವನ್ನು ಎತ್ತಿ ಬಿಸಾಕುವ ಸಮಯ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಅದೆಷ್ಟೋ ಮಹಾನ್ ವ್ಯಕ್ತಿಗಳಿದ್ದಾರೆ ಅವರನ್ನು ಬಿಟ್ಟು ಬರಿ ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಿದೆ ಈ ಸರ್ಕಾರ' ಎಂದು ತಿಳಿಸಿದರು.
ಚಾಮುಂಡಿ ಸನ್ನಿಧಿಯಲ್ಲಿ ಕಾಂಗ್ರೆಸ್ ಮುಕ್ತ ಘೋಷಣೆ ಮಾಡಿದ ಅಮಿತ್ ಶಾ
'ಸಿದ್ದರಾಮಯ್ಯ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಸಿದ್ದರಾಮಯ್ಯ. ಇಲ್ಲಿ 30 ರಿಂದ 35 ಸಾವಿರ ಜನರಿದ್ದೀರಿ. ನಿಮ್ಮ ಬಳಿ 70ಲಕ್ಷ ವಾಚ್ ಇದೇಯಾ?. ಆದರೆ ಸಮಾಜವಾದಿ ಎಂದು ಹೇಳಿಕೊಂಡು ತಿರುಗುವ ಸಿಎಂ ಸಿದ್ದರಾಮಯ್ಯ ಅವರು 70 ಲಕ್ಷ ವಾಚ್ ಹಾಕಿಕೊಂಡು ತಿರುಗುತ್ತಾರೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ' ಎಂದು ದೂರಿದರು.
'ಸಿದ್ದರಾಮಯ್ಯ ಅವರೇ ನಾನು ಉತ್ತರ ಕೊಡಲು ಬಂದಿದ್ದೇನೆ. ಕಿವಿ ಕೊಟ್ಟು ಕೇಳಿ ಕಳೆದ 60 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಕೊಡದ ಹಣವನ್ನು ನಮ್ಮ ಸರ್ಕಾರ ನೀಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ, 13ನೇ ಹಣಕಾಸಿನ ಆಯೋಗದಲ್ಲಿ 80 ಸಾವಿರ ಕೋಟಿ ನೀಡಲಾಗಿತ್ತು. ಆದರೆ 14ನೇ ಹಣಕಾಸಿನ ಆಯೋಗದಲ್ಲಿ ನಮ್ಮ ಸರ್ಕಾರ 2,19,506 ಕೋಟಿ ನೀಡಿದೆ' ಎಂದು ವಿವರಿಸಿದರು.
ಚಾಮುಂಡಿ ಸನ್ನಿಧಿಯಲ್ಲಿ ಕಾಂಗ್ರೆಸ್ ಮುಕ್ತ ಘೋಷಣೆ ಮಾಡಿದ ಅಮಿತ್ ಶಾ
'1ಲಕ್ಷದ 30 ಸಾವಿರ ಕೋಟಿ ಜಾಸ್ತಿಯೇ ಕೊಟ್ಟಿದ್ದೇವೆ. ಆ ಒಂದು ಲಕ್ಷದ 30 ಸಾವಿರ ಕೋಟಿ ಎಲ್ಲಿ ಹೋಯ್ತು? ಸಿದ್ದರಾಮಯ್ಯ ಅವರೇ, ಎಲ್ಲಿ ಹೋಯಿತು ಅಷ್ಟು ದುಡ್ಡು? ಉತ್ತರ ಕೊಡಿ ಎಂದು ಪ್ರಶ್ನೆ ಮಾಡಿದ್ದಾರೆ'
ಕಾರ್ಯಕ್ರಮದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಶೋಭಾ ಕರಂದ್ಲಾಜೆ, ವಿ.ಶ್ರೀನಿವಾಸ್ ಪ್ರಸಾದ್, ಸಂಸದ ಪ್ರತಾಪ್ ಸಿಂಹ ಇತರ ನಾಯಕರು ಉಪಸ್ಥಿತರಿದ್ದರು.