ಮೈಸೂರಿಗರಿಗೂ ಕೋಟಿ ರೂ.ವಂಚಿಸಿದ ಆಂಬಿಡೆಂಟ್ ಕಂಪೆನಿ
ಮೈಸೂರು, ನವೆಂಬರ್. 15: ರಾಜ್ಯಾದ್ಯಂತ ಭಾರೀ ಸದ್ದು ಮಾಡಿರುವ ಬಹುಕೋಟಿ ವಂಚನೆಯ ಆಂಬಿಡೆಂಟ್ ಪ್ರಕರಣ ಮೈಸೂರಿನಲ್ಲಿಯೂ ಧ್ವನಿಸಿದ್ದು, ಹೂಡಿಕೆದಾರರು ಕೋಟ್ಯಂತರ ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ನಗರದ ರಾಜೀವನಗರ ಮೂರನೇ ಕ್ರಾಸ್ ನಂ.836ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಆಂಬಿಡೆಂಟ್ ಮಾರ್ಕೆಟಿಂಗ್ ಕಂಪನಿ ಸಾರ್ವಜನಿಕರಿಂದ 100 ಕೋಟಿ ರೂ.ಗಳಷ್ಟು ಠೇವಣಿಗಳನ್ನು ಪಡೆದು ಮೋಸ ಮಾಡಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು
ಪ್ರಕರಣದ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಅರ್ಜಿದಾರರ ಪರ ವಕೀಲ ಎನ್.ಎಸ್.ಹರೀಶ್ ಕುಮಾರ್ ಮಾತನಾಡಿ, ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬೆಂಗಳೂರಿನ ಸೈಯದ್ ಫರೀದ್, ಇರ್ಫಾನ್ ಮೈಸೂರಿನ ಖಿಜರ್ ಮತ್ತು ಬೆಂಗಳೂರಿನ ರಾಜ್ ಮಲಯಾ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿಸಿದರು.
ಕಳೆದ ವರ್ಷವಷ್ಟೇ ಮೈಸೂರಿನಲ್ಲಿ ಕಚೇರಿ ತೆರೆದ ಅಂಬಿಡೆಂಟ್ ಕಂಪನಿಯವರು ಕೆಲವೇ ತಿಂಗಳುಗಳಲ್ಲಿ ಕೋಟ್ಯಂತರ ರೂ. ಠೇವಣಿಗಳನ್ನು ಪಡೆದಿದ್ದಾರೆ. ಕನಿಷ್ಠ 1 ಲಕ್ಷ ರೂ. ತೊಡಗಿಸಿದರೆ ವಾರಕ್ಕೆ 9ರಿಂದ 11 ಸಾವಿರ ಲಾಭಗಳಿಸಬಹುದು ಎಂದು ನಂಬಿಸಿದ್ದಾರೆ. ಅದರಂತೆ 15 ಲಕ್ಷ ರೂ.ಗಳಿಂದ 45 ಲಕ್ಷದವರೆಗೆ ಹಣ ತೊಡಗಿಸಿದ್ದಾರೆ.
ಜನಾರ್ದನ ರೆಡ್ಡಿ ಪ್ರಕರಣದ ಎಫೆಕ್ಟ್: ಸಿಸಿಬಿಯ ಮೂವರು ಎಸಿಪಿಗಳ ಎತ್ತಂಗಡಿ
ಕೆಲವೇ ತಿಂಗಳಲ್ಲಿ 1500 ಮಂದಿ ಸದಸ್ಯರನ್ನು ಮಾಡಿಕೊಂಡು, ಸುಮಾರು 50 ರಿಂದ 100 ಕೋಟಿ ರೂ.ವರೆಗೂ ಸಂಗ್ರಹಿಸಿ ವಂಚನೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಆರೋಪಿಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಬಿಟ್ ಕಾಯಿನ್ ಗೆ ಹಾಕಿ ಮೋಸ ಮಾಡಿದ್ದಾರೆ. ಅನೇಕರು ತಮ್ಮ ನಿವೃತ್ತಿ ವೇತನವನ್ನೂ ಪಾವತಿಸಿದ್ದಾರೆ.
ಮಕ್ಕಳ ಮದುವೆ ಮಾಡಲು, ಮನೆ ನಿರ್ಮಿಸಲು ಇಟ್ಟಿದ್ದ ಹಣವನ್ನು ಈ ಯೋಜನೆಯಲ್ಲಿ ತೊಡಗಿಸಿ ಮೋಸ ಹೋಗಿದ್ದಾರೆ. ಇವರ ನೆರವಿಗೆ ತನಿಖಾ ಸಂಸ್ಥೆಗಳು ಮುಂದಾಗಬೇಕು. ಬಹುತೇಕ ಮುಸ್ಲಿಂ ಬಡಾವಣೆಗಳನ್ನೇ ಗುರಿಯಾಗಿಸಿ ಬಡವರನ್ನು ವಂಚಿಸಲಾಗಿದೆ.
ಆರೋಪಿ ಫರೀದ್ ಗೆ ಸಂತ್ರಸ್ತರು ನೆಫ್ಟ್ ಮೂಲಕವೇ ಹಣ ವರ್ಗಾವಣೆ ಮಾಡಿದ್ದು, ತನಿಖಾ ಸಂಸ್ಥೆಗಳು ಅವರವರ ಹಣವನ್ನು ಕೂಡಲೇ ಅದೇ ಖಾತೆಗೆ ಹಿಂದಿರುಗಿಸಬೇಕು.
ಮುಸ್ಲಿಂ ಬಡ ಕುಟುಂಬಗಳನ್ನೇ ಗುರಿಯಾಗಿರಿಸಿಕೊಂಡು ಎರಡು ಸಾವಿರ ಮಂದಿಯಿಂದ 50ರಿಂದ ನೂರು ಕೋಟಿ ರೂ.ಗಳವರೆಗೆ ಹಣ ಸಂಗ್ರಹಿಸಿ ವಂಚಿಸಲಾಗಿದೆ. ಈ ನಡುವೆ ತಮ್ಮ ಹೋರಾಟಕ್ಕೆ ನಗರ ಪೊಲೀಸರು ಸಾಕಷ್ಟು ಪೂರಕವಾಗಿ ಸ್ಪಂದಿಸುತ್ತಿದ್ದು, ಸಂಬಂಧಿಸಿದ ಇತರೆ ಇಲಾಖೆಗಳು ಸಂತ್ರಸ್ತರಿಗೆ ಹಣ ವಾಪಸಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ವಕೀಲರು ಮನವಿ ಮಾಡಿದರು.