ಹುಣಸೂರಿನ ಮೂರು ರಸ್ತೆಗಳಲ್ಲಿ ಮೆರವಣಿಗೆ ಬಂದ್
ಮೈಸೂರು,ಜನವರಿ,14: ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಹುಣಸೂರಿನ ಮೂರು ಮುಖ್ಯ ರಸ್ತೆಗಳಲ್ಲಿ ಜಯಂತಿಗಳ ಮೆರವಣಿಗೆ, ಬಂಟಿಂಗ್ಸ್ ಮತ್ತು ಬ್ಯಾನರ್ಸ್ ಅಳವಡಿಸುವುದನ್ನು ಒಂದು ವರ್ಷ ಕಾಲ ನಿಷೇಧ ಹೇರಿ ಮೈಸೂರು ಜಿಲ್ಲಾಧಿಕಾರಿ ಶಿಖಾ ಆದೇಶ ಹೊರಡಿಸಿದ್ದಾರೆ.
ಹುಣಸೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಖಾ ಅವರು, 'ವಿವಿಧ ಜಯಂತಿಗಳ ಆಚರಣೆಯ ಮೆರವಣಿಗೆ ಹುಣಸೂರು ಪಟ್ಟಣದ ಬಜಾರ್ ರಸ್ತೆ, ಜೆಎಲ್ ಬಿ ರಸ್ತೆ ಹಾಗೂ ಟಿಎಪಿಸಿಎಂಎಸ್ ರಸ್ತೆಯಲ್ಲಿ ಸಾಗುವಂತಿಲ್ಲ' ಎಂದು ತಿಳಿಸಿದ್ದಾರೆ.[ಮೈಸೂರಿನಲ್ಲಿ ಮ್ಯಾಗಿಗೆ ಮತ್ತೊಂದು ಪರೀಕ್ಷೆ]
ಬಜಾರ್ ರಸ್ತೆ, ಜೆಎಲ್ ಬಿ ರಸ್ತೆ ಹಾಗೂ ಟಿಎಪಿಸಿಎಂಎಸ್ ಈ ಮೂರು ರಸ್ತೆಗಳು ಜನನಿಬಿಡ, ಹೆಚ್ಚು ವಹಿವಾಟು ನಡೆಯುವ ರಸ್ತೆಗಳು. ಜಯಂತಿ ಆಚರಿಸುವವರು ಫ್ಲೆಕ್ಸ್ ಅಳವಡಿಸಬೇಕಾದಲ್ಲಿ ಪೌರಾಡಳಿತದ ಅನುಮತಿ ಪಡೆದು ನಿಗದಿತ ಸ್ಥಳದಲ್ಲೇ ಅಳವಡಿಸಬಹುದು. ಮೆರವಣಿಗೆಯಲ್ಲಿ ಮಾತ್ರ ಬ್ಯಾನರ್ಸ್ ಹಿಡಿದು ಹೋಗಬಹುದು. ಸಾರ್ವಜನಿಕ ಸ್ಥಳಗಳಲ್ಲಿ, ಬೈಕ್ ಮತ್ತು ಆಟೋಗಳಿಗೆ ಕಟ್ಟುವಂತಿಲ್ಲ. ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.['ದ್ರೌಪದಿ ಸಿರಿಮುಡಿ ಪರಿಕ್ರಮಣ' ವೀರಪ್ಪ ಮೊಯ್ಲಿ ವಿಚಾರ ಸಂಕಿರಣ]
ದಲಿತ ಮುಖಂಡ ಅಪ್ಪಣ್ಣ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್.ರಾಚಪ್ಪ, ವಿ.ಎನ್.ದಾಸ್, ಸುಬ್ಬಣ್ಣ, ಹನಗೋಡು ಮಂಜುನಾಥ್ ಮುಂತಾದವರು ಪಟ್ಟಣದ ಹೃದಯಭಾಗದಲ್ಲೇ ಮೆರವಣಿಗೆ ನಿಷೇಧ ಎಷ್ಟರ ಮಟ್ಟಿಗೆ ಸೂಕ್ತವಾಗಿದೆ ಎಂದು ಪ್ರಶ್ನಿಸಿದ್ದು, ಕೆಲವರು ಮೆರವಣಿಗೆಯನ್ನೇ ನಿಷೇಧಿಸಿಬಿಡಿ ಎಂದು ಪರವಿರೋಧದ ಚರ್ಚೆ ನಡೆಯಿತು.
ಶ್ರೀರಾಮಸೇನೆ ಅಧ್ಯಕ್ಷ ಅನಿಲ್ ಕುಮಾರ್, ಹನುಮಜಯಂತಿ ಯಶಸ್ವಿಯಾಗಿದ್ದು, ನಂತರದ ಘಟನೆಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸಿವೆ. ಮುಂದೆ ಈ ಪರಿಸ್ಥಿತಿ ತಲೆದೋರದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.