64 ವರ್ಷದ ಬಳಿಕ ತೀವ್ರ ಕುಸಿತ ಕಂಡ ಕೆ ಆರ್ ಎಸ್ ನೀರಿನ ಮಟ್ಟ
ಮೈಸೂರು, ಅಕ್ಟೋಬರ್, 28: ಇಲ್ಲಿನ ಕೃಷ್ಣರಾಜ ಸಾಗರ ಜಲಾಶಯ ನೀರಿನ ಮಟ್ಟ ಅಕ್ಟೋಬರ್ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತಕಂಡಿದ್ದು, 64ವರ್ಷದ ಬಳಿಕ ಜಲಾಶಯದ ನೀರಿನ ಪ್ರಮಾಣ ತೀವ್ರ ಇಳಿಮುಖವಾಗಿದೆ.
ಅಂಕಿ ಅಂಶಗಳ ಪ್ರಕಾರ 1952 ಅಕ್ಟೋಬರ್ 27ರಂದು 94.40 ಅಡಿ ನೀರಿನ ಸಂಗ್ರಹವಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಈ ವರ್ಷ ಗುರುವಾರಕ್ಕೆ (ಅ.27) 79 ಅಡಿ ನೀರು ಸಂಗ್ರಹವಾಗಿದೆ. (ಗರಿಷ್ಠ ಮಟ್ಟ 124.80)
ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದಾಗಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಇರುವುದರಿಂದ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿಲ್ಲ.
ಬಿದ್ದ ಅಲ್ಪ ಸ್ವಲ್ಪ ಮಳೆಯಿಂದಾಗಿ ಈ ಬಾರಿ ಜಲಾಶಯದಲ್ಲಿ ನೂರು ಅಡಿ ನೀರು ಸಂಗ್ರವಾಗುವ ನಿರೀಕ್ಷೆ ಇತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಸಂಗ್ರಹವಾದ 99.50 ಅಡಿ ನೀರು ಗರಿಷ್ಠ ಮಟ್ಟವಾಗಿದೆ.
ಇದಲ್ಲದೇ ತಮಿಳುನಾಡಿನ ಸಾಂಬಾ ಬೆಳೆಗೆ ಜಲಾಶಯದಿಂದ ನೀರು ಹರಿಸುವಂತೆ ಸರ್ವೋಚ್ಛ ನ್ಯಾಯಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀರು ಹರಿಸಿದ್ದರಿಂದ ಜಲಶಾಯದ ನೀರಿನ ಮಟ್ಟ ಕಡಿಮೆಯಾಗುವುದಕ್ಕೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಲಭ್ಯವಿರುವ 10.5 ಟಿಎಂಸಿ ನೀರಿನಲ್ಲಿ 2 ಟಿಎಂಸಿ ನೀರು ಮತ್ರ ಬೆಳೆಗೆ ಕೊಡಬಹುದಾಗಿದ್ದು, ಉಳಿದ 8.5ಟಿಎಂಸಿ ನೀರಿನಲ್ಲಿ 4 ಟಿಎಂಸಿ ನೀರನ್ನು ಕುಡಿಯಲು ಬಳಸಬಹುದಾಗಿದೆ.
ಉಳಿದ 4.5ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಸಲು ಸಾಧ್ಯವಿಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಅ.27ರಂದು 105.29 ಅಡಿ ನೀರು ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ 26 ಅಡಿ ಅಂದರೆ 16ಟಿಎಂಸಿ ನೀರು ಕಡಿಮೆಯಾಗಿದೆ.