ಮೈಸೂರು ಚಾಮುಂಡಿ ಬೆಟ್ಟದಲ್ಲಿ ವೈಭವದ ಆಷಾಢ ಶುಕ್ರವಾರ ಆಚರಣೆ
ಮೈಸೂರು, ಜುಲೈ 19 : ಆಷಾಢ ಶುಕ್ರವಾರದ ಹಿನ್ನೆಲೆ ಶುಕ್ರವಾರ (ಜುಲೈ20) ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜಾ ಕೈಂಕರ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. ಸಿಎಂ ಎಚ್.ಡಿ ಕುಮಾರಸ್ವಾಮಿ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲಿದ್ದಾರೆ.
ಹೀಗಾಗಿ ಚಾಮುಂಡಿ ಬೆಟ್ಟದಲ್ಲಿ ಸುಗಮ ಸಂಚಾರ ಹಾಗೂ ಗಣ್ಯ ವ್ಯಕ್ತಿಗಳ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಸಕಲ ಸಿದ್ಧತೆ ನಡೆಸಲಾಗಿದೆ. ಪೊಲೀಸರು ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಇಂದು ದೇವಾಲಯದ ವ್ಯವಸ್ಥಾಪಕ ಆಡಳಿತ ಮಂಡಳಿ ಹಾಗೂ ಆಡಳಿತ ಆಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರು.
ಕೆಆರ್ ಎಸ್, ಹಾರಂಗಿ, ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲಿರುವ ಸಿಎಂ
ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಶುರುವಾಗಲಿದ್ದು, ಮೊದಲ ಆಷಾಢ ಶುಕ್ರವಾರವಾದರಿಂದ ಹೆಚ್ಚಿನ ಭಕ್ತರು ಚಾಮುಂಡಿ ಬೆಟ್ಟಕ್ಕೆ ಹರಿದು ಬರುವ ನಿರೀಕ್ಷೆಯನ್ನು ಆಡಳಿತಮಂಡಳಿ ಇಟ್ಟುಕೊಂಡಿದೆ. ಏಕ ಕಾಲಕ್ಕೆ ಸಾಗರೋಪಾದಿಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಕಳೆದ ಆರು ವರ್ಷಗಳಿಂದ ನಡೆದುಕೊಂಡು ಬಂದಂತೆ ಈ ಬಾರಿಯೂ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸುವುದರೊಂದಿಗೆ ಜನ ಸಾಮಾನ್ಯರು ತೆರಳಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾಧಿಗಳು ತಮ್ಮ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ನಿಲುಗಡೆ ಮಾಡಿ ದೇವಸ್ಥಾನ ಆಡಳಿತ ಮಂಡಳಿ ವ್ಯವಸ್ಥೆ ಮಾಡಿರುವ ಉಚಿತ ಕೆಎಸ್ಆರ್ ಟಿಸಿ ಬಸ್ಗಳಲ್ಲಿ ದೇವಸ್ಥಾನಕ್ಕೆ ತೆರಳಬೇಕಾಗಿರುತ್ತದೆ.
ಉಚಿತ ಬಸ್ ಸೌಲಭ್ಯ ಬೆಳಗಿನ ಜಾವ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಇರಲಿದೆ.
ಹೆಲಿಪ್ಯಾಡ್ ನಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ದೇವಾಲಯಕ್ಕೆ ವಿಶೇಷ ಸಾಲಿನ ಮೂಲಕ ತೆರಳಲು ಟಿಕೆಟ್ ಕೌಂಟರ್ ತೆರೆಯಲಾಗಿದೆ.