ಮೈಸೂರಿನಲ್ಲಿ ಪೌರಕಾರ್ಮಿಕನ ಮ್ಯಾನ್ ಹೋಲಿಗಿಳಿಸಿದ ಗ್ರಾಪಂ ಅಧ್ಯಕ್ಷೆ!
ಮೈಸೂರು, ಜೂನ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಮ್ಯಾನ್ ಹೋಲ್ ಕ್ಲೀನ್ ಮಾಡಲು ಗ್ರಾಪಂ ಅಧ್ಯಕ್ಷೆಯೇ ವ್ಯಕ್ತಿಯೋರ್ವನನ್ನು ಮ್ಯಾನ್ ಹೋಲಿಗೆ ಇಳಿಸಿದ ಹೀನ ಘಟನೆ ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ.
ಚಾಮುಂಡಿ ಬೆಟ್ಟ ಗ್ರಾಪಂ ಅಧ್ಯಕ್ಷೆ ಎಸ್.ಗೀತಾ, ತಮ್ಮ ಮನೆ ಮುಂದೆ ಕಟ್ಟಿಕೊಂಡ ಮ್ಯಾನ್ ಹೋಲ್ ಶುಚಿ ಮಾಡಲು ಪೌರಕಾರ್ಮಿಕನನ್ನು ಕೆಳಗೆ ಇಳಿಯುವಂತೆ ತಿಳಿಸಿದ್ದಲ್ಲದೇ, ಇಳಿಯದಿದ್ದಲ್ಲಿ ಕೆಲಸದಿಂದ ಪೌರ ಕಾರ್ಮಿಕನನ್ನು ವಜಾ ಮಾಡುವ ಬೆದರಿಕೆಯೊಡ್ಡಿದ್ದಾರೆ.[ಮ್ಯಾನ್ ಹೋಲ್ ದುರಂತ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು. ಪರಿಹಾರ]
ಪೌರ ಕಾರ್ಮಿಕರಾದ ಚಾಮುಂಡಿಬೆಟ್ಟದ ಚಲುವರಾಜು ಮತ್ತು ಗಣೇಶ್ ಎಂಬವರು ಬಟ್ಟೆ ಬಿಚ್ಚಿ ಮ್ಯಾನ್ ಹೋಲ್ ಒಳಗೆ ಇಳಿದಿದ್ದಾರೆ. ಆದರೆ ಮ್ಯಾನ್ ಹೋಲ್ ಒಳಗೆ ಉಸಿರುಗಟ್ಟಿದ ಕಾರಣ ಪೌರ ಕಾರ್ಮಿಕರು ತಕ್ಷಣ ಮೇಲೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಯಾವುದೇ ಸುರಕ್ಷತಾ ನಿಮಯಗಳನ್ನು ಅನುಸರಿಸದೆ ಪೌರಕಾರ್ಮಿಕರನ್ನು ಮ್ಯಾನ್ಹೋಲ್ ಒಳಗೆ ಇಳಿಸುವ ಮೂಲಕ ಅವರ ಪ್ರಾಣದೊಂದಿಗೆ ಗೀತಾ ಚೆಲ್ಲಾಟವಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.[ಆಂಜನೇಯ ಮನೆ ಮುಂದಿನ ಮ್ಯಾನ್ ಹೋಲ್ಗೆ ಇಬ್ಬರು ಬಲಿ]
ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಜಾರಿಯಲ್ಲಿರುವ ಪೌರಕಾರ್ಮಿಕರ ಸುರಕ್ಷತಾ ನಿಮಯಗಳಿಗೆ ಇಲ್ಲಿ ತಿಲಾಂಜಲಿಯಿಟ್ಟಿರುವುದು ಸುಸ್ಪಷ್ಟವಾಗಿದೆ, ಕಾನೂನು ಪ್ರಕಾರ ಮ್ಯಾನ್ ಹೋಲ್ ಗೆ ಇಳಿದು ಕ್ಲೀನ್ ಮಾಡುವುದು ಅಪರಾಧ ಎನ್ನುವುದು ತಿಳಿದೂ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಅಧ್ಯಕ್ಷೆ ಗೀತಾ, ಅಮಾನವೀಯತೆ ಮೆರೆದಿದ್ದಾರೆ.
ಈಗಾಗಲೇ ಹಲವೆಡೆ ಮ್ಯಾನ್ ಹೋಳ್ ಗೆ ಇಳಿದು ಉಸಿರುಗಟ್ಟಿ ನೂರಾರು ಮಂದಿ ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ. ಆದರೆ ತಾಯಿ ಚಾಮುಂಡಿ ಒಡಲಿನಲ್ಲಿ ಇಂದಿಗೂ ಈ ಅನಿಷ್ಟ ಪದ್ಧತಿ ಜೀವಂತವಾಗಿದೆ ಎಂಬುದು ನಿಜಕ್ಕೂ ಬೇಸರದ ಸಂಗತಿ.