ಸಾಂಸ್ಕೃತಿಕನಗರಿ ಮೈಸೂರಲ್ಲಿ ಸಮಾಗಮವಾದ ಅರೆಭಾಷೆ ಸಂಸ್ಕೃತಿ
ಮೈಸೂರು, ಜುಲೈ 24: ಸಾಂಸ್ಕೃತಿಕ ನಗರಿ ಮೈಸೂರಿನ ವಿಜಯನಗರ ಕೊಡಗು ಗೌಡ ಸಮಾಜದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಮೈಸೂರು ಕೊಡಗು ಗೌಡ ಸಮಾಜದ ಸಂಯುಕ್ತ ಆಶ್ರಯದಲ್ಲಿ ಜುಲೈ 23ರಂದು ನಡೆದ ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ ಕಾರ್ಯಕ್ರಮ ಹತ್ತು ಹಲವು ವಿಶೇಷತೆಯೊಂದಿಗೆ ಗಮನಸೆಳೆಯಿತು.
ಆಧುನಿಕತೆಯ ಕಾಲಘಟ್ಟದಲ್ಲಿ, ಪ್ರತಿಕ್ಷಣಕ್ಕೂ ಜಗತ್ತು ಬದಲಾವಣೆಯ ತಹತಹಿಕೆಯಲ್ಲಿರುವಾಗ ಯುವ ಪೀಳಿಗೆ ಪದ್ಧತಿ, ಸಂಪ್ರದಾಯಗಳಿಂದ ವಿಮುಖವಾಗುತ್ತಿರುವ ಈ ದಿನಗಳಲ್ಲಿ ಅರೆಭಾಷೆ ಗೌಡ ಜನಾಂಗದವರು ಹುಟ್ಟಿನಿಂದ ಆರಂಭವಾಗಿ ಸಾವಿನವರೆಗೆ ಆಚರಿಸಿಕೊಂಡು ಬಂದಿರುವ ಪದ್ಧತಿಗಳನ್ನು ಯುವ ಪೀಳಿಗೆಗೆ ತಿಳಿಸು ಕೆಲಸ ಇಲ್ಲಿ ನಡೆಯಿತು. ಮುಂದಿನ ತಲೆಮಾರು ಕೂಡ ಅದನ್ನು ಮುಂದುವರೆಸಿಕೊಂಡು ಹೋಗುವಂತೆ ಮಾಡುವಲ್ಲಿ ಆಗಬೇಕಾದ ಕ್ರಮಗಳ ಕುರಿತಂತೆ ವಿವಿಧ ಆಯಾಮಗಳಿಗೆ ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ ಕಾರ್ಯಕ್ರಮದ ವೇದಿಕೆ ಸಾಕ್ಷಿಯಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಮೈಸೂರು: ಮಹಿಳಾ ಕ್ರಿಕೆಟ್ ವಿಶ್ವಕಪ್, ಭಾರತ ಗೆಲುವಿಗಾಗಿ ರ್ಯಾಲಿ
ಜನಾಂಗಬಾಂಧವರಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಮಹಿಳೆಯರು ಮತ್ತು ಪುರುಷರು ಗಮನಸೆಳೆದರು. ಸಭಾಕಾರ್ಯಕ್ರಮದ ಬಳಿಕ ನಡೆದ ವಿಚಾರಗೋಷ್ಠಿ ಮತ್ತು ಸಂವಾದ ವಿಶೇಷತೆಯಿಂದ ಕೂಡಿತ್ತು. ಹಿಂದಿನ ಕಾಲದಲ್ಲಿ ಹಿರಿಯರು ಅನಕ್ಷರಸ್ಥರಾಗಿದ್ದರೂ ಅವರು ಹುಟ್ಟು, ಪ್ರೌಢಾವಸ್ಥೆ, ಮದುವೆ, ಸಾವು ಸೇರಿದಂತೆ ಬದುಕಿನ ಕಾಲಘಟ್ಟದಲ್ಲಿ ಶುಭ, ಅಶುಭಗಳ ಸಂದರ್ಭದಲ್ಲಿ ಆಚರಿಸುತ್ತಿದ್ದ ಅವತ್ತಿನ ಪದ್ಧತಿ ಮತ್ತು ಅದು ವೈಜ್ಞಾನಿಕವಾಗಿಯೂ ಆರೋಗ್ಯದ ದೃಷ್ಟಿಯಿಂದ ಎಷ್ಟೊಂದು ಮಹತ್ವಪೂರ್ಣವಾಗಿತ್ತು ಎನ್ನುವುದನ್ನು ತೆರೆದಿಡುವಲ್ಲಿ ಗೋಷ್ಠಿ ಸಾಕ್ಷಿಯಾಯಿತು.
ವೈಭವೋಪೇತವಾಗಿ ಜರುಗಿದ ಚಾಮುಂಡಿ ವರ್ಧಂತ್ಯೋತ್ಸವ
ಪೋತಂಡ್ರ ತೇಜಪ್ರಸಾದ್ ಮತ್ತು ಕಟ್ಟೆಮನೆ ಸೋನಾಜಿತ್ ಅವರ ನಿರ್ವಹಣೆಯಲ್ಲಿ ನಡೆದ ಗೋಷ್ಠಿಯಲ್ಲಿ ಅರೆಭಾಷಿಕರ ಹುಟ್ಟು ಮತ್ತು ಆಚರಣೆಯ ಬಗ್ಗೆ ಮದೆಮಹೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಬಾರಿಯಂಡ ಜೋಯಪ್ಪ, ಪ್ರೌಢಾವಸ್ಥೆ ಮತ್ತು ಮದುವೆ ಆಚರಣೆ ಕುರಿತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಕೋರನ ಸರಸ್ವತಿಪ್ರಕಾಶ್, ಸಾವು ಮತ್ತು ವಿಧಿ ವಿಧಾನಗಳ ಕುರಿತಂತೆ ಉಪನ್ಯಾಸಕ ಪಟ್ಟಡ ಶಿವಕುಮಾರ್, ಹಬ್ಬ ಹರಿದಿನ ಮತ್ತೆ ಆಚರಣೆ ಬಗ್ಗೆ ವಿಶ್ರಾಂತ ಪ್ರಾಂಶುಪಾಲರಾದ ಡಾ. ಚೆರಿಯಮನೆ ರಾಮಚಂದ್ರ ಅವರು ತಾವು ನೋಡಿದ ಮತ್ತು ಕೇಳಿ ತಿಳಿದ ವಿಚಾರಗಳ ಬಗ್ಗೆ ಸಂಕ್ಷಿಪ್ತವಾಗಿ ತೆರೆದಿಟ್ಟರು.
ಮಗುವಿಗೆ ಹುಟ್ಟು, ತಾಯಿಗೆ ಮರು ಹುಟ್ಟು
ಜೋಯಪ್ಪ ಅವರು ಅರೆಭಾಷಿಕರ ಹುಟ್ಟು ಮತ್ತು ಆಚರಣೆಯ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಮಗುವಿಗೆ ಹುಟ್ಟು ಆದರೆ ಅದು ತಾಯಿಗೆ ಮರು ಹುಟ್ಟು ಎನ್ನುವುದರ ಬಗ್ಗೆ ವಿವರಿಸುತ್ತಾ ಒಬ್ಬ ತಾಯಿ ಒಂದೊಂದು ಮಗುವಿಗೆ ಜನ್ಮ ನೀಡಿದಾಗಲೂ ಆದು ಆಕೆಗೆ ಮರು ಹುಟ್ಟಾಗುತ್ತದೆ. ತನ್ನ ಜೀವವನ್ನೇ ಪಣಕ್ಕಿಟ್ಟು ಮಗುವಿಗೆ ಜನ್ಮ ನೀಡುವ ತಾಯಿಯ ಕುರಿತಂತೆ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಬಸುರಿ, ಹೆರಿಗೆ, ಬಾಣಂತನ ಹೀಗೆ ಎಲ್ಲ ಹಂತಗಳಲ್ಲಿ ಹೇಗೆ ನಿರ್ವಹಣೆ ಮಾಡಲಾಗುತ್ತಿತ್ತು. ತಮ್ಮ ಸುತ್ತಮುತ್ತ ಸಿಗುವ ನಾಟಿ ಔಷಧಿಗಳನ್ನು ನೀಡಿ ಬಾಣಂತನ ಮಾಡಲಾಗುತ್ತಿತ್ತು. ಹಿಂದಿನ ತಲೆಮಾರಿನವರು ಮಾಡುತ್ತಿದ್ದ ಆಚರಣೆಗಳು, ಬದಲಾದ ಕಾಲದಲ್ಲಿನ ಇಂದು ನಾವು ನಡೆದುಕೊಳ್ಳುವ ರೀತಿ ನೀತಿಗಳ ಬಗ್ಗೆಯೂ ಒಂದಷ್ಟು ಹಾಸ್ಯ ಚಟಾಕಿ ಹಾರಿಸುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಗೃಹಿಣಿಯಾಗಲು ತಯಾರಿ
ಇನ್ನು ಪ್ರೌಢಾವಸ್ಥೆ ಮತ್ತು ಮದುವೆ ಆಚರಣೆ ಕುರಿತಂತೆ ಮಾತನಾಡಿದ ಡಾ. ಕೋರನ ಸರಸ್ವತಿಪ್ರಕಾಶ್ ಅವರು ಹೆಣ್ಣುಮಗಳೊಬ್ಬಳು ಪ್ರೌಢಾವಸ್ಥೆ, ಮದುವೆ, ಅದರಾಚೆಗೆ ಆಚರಿಸುತ್ತಿದ್ದ ಪದ್ಧತಿಗಳನ್ನು ವಿವರಿಸಿದರು. ಹೆಣ್ಣುಮಗಳು ಪ್ರೌಢಾವಸ್ಥೆಗೆ ಕಾಲಿಡುವ ಹಂತ ಮೈನೆರೆಯುವಿಕೆ ಸಂದರ್ಭ ಆಚರಿಸುತ್ತಿದ್ದ ಕ್ರಮ, ಮತ್ತು ಆಕೆಗೆ ಮಾಡುತ್ತಿದ್ದ ಆರೈಕೆ. ಅದಾದ ನಂತರ ಆಕೆ ಮುಂದೆ ಗೃಹಿಣಿಯಾಗಿ ಜೀವನ ಸಾಗಿಸಲು ಸಹಕಾರಿಯಾಗುವ ಬಗೆಗೆ ತಯಾರಿ ನಡೆಸುತ್ತಿದ್ದ ರೀತಿ ಮುಂದೆ ಮದುವೆ ಮಾಡುವ ಸಂದರ್ಭ ನಡೆಯುತ್ತಿದ್ದ ಪದ್ಧತಿ, ಆಚರಣೆಗಳ ಬಗ್ಗೆ ಆವತ್ತಿನ ಹಿರಿಯರು ನಡೆಸಿಕೊಂಡು ಬಂದಿದ್ದ ಕ್ರಮಗಳನ್ನು ವಿವರಿಸಿದರು.
ಅಂತ್ಯಸಂಸ್ಕಾರದ ವಿಧಿ ವಿಧಾನ
ಉಪನ್ಯಾಸಕರಾದ ಪಟ್ಟಡ ಶಿವಕುಮಾರ್ ಅವರು ಸಾವು ಮತ್ತು ವಿಧಿ ವಿಧಾನಗಳ ಆಚರಣೆ ಕುರಿತಂತೆ ಮಾತನಾಡಿ, ಸಾವು ಸಂದರ್ಭ ಮಾಹಿತಿ ತಲುಪಿಸಲು ಜೋಡು ಗುಂಡು ಹೊಡೆಯುವುದು, ಬಾಯಿಗೆ ನೀರು ಬಿಡುವುದು, ಅಂತ್ಯಸಂಸ್ಕಾರ, ಶುದ್ಧ, ತಿಥಿ, ಪಿಂಡ ಹಾಕುವುದು ಮೊದಲಾದ ಆಚರಣೆಗಳ ಬಗ್ಗೆ ತಿಳಿಸಿದರು. ಡಾ. ಚೆರಿಯಮನೆ ರಾಮಚಂದ್ರ ಅವರು ಹಿಂದಿನ ಹಿರಿಯರು ಆಚರಣೆಗೆ ತಂದ ಹಬ್ಬಗಳು ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು. ಇವತ್ತು ಹಬ್ಬಗಳ ಆಚರಣೆಯಲ್ಲಿ ವೈಭವೀಕರಣ ಕಾಣುತ್ತಿದ್ದೇವೆ ಹೊರತು ಪದ್ಧತಿ ಕ್ರಮಗಳು ಮರೆಯಾಗುತ್ತಿರುವ ಬಗ್ಗೆಯೂ ವಿಷಾದಿಸಿದರು.
ಮನರಂಜಿಸಿದ ಗೀತಗಾಯನ
ಕಾರ್ಯಕ್ರಮದಲ್ಲಿ ಹಿರಿಯರು, ತಿಳಿದವರು ಜನಾಂಗದ ಪದ್ಧತಿಯ ಉಳಿವಿಗೆ ಅನುಕೂಲವಾಗುವ ಹಲವು ಸಲಹೆಗಳನ್ನು ನೀಡುತ್ತಿದ್ದದ್ದು ಕಂಡು ಬಂತು. ಕಾರ್ಯಕ್ರಮದ ನಡುವೆ ನಡೆದ ಶಶಿಧರ ಮಾವಿನಕಟ್ಟೆ ಮತ್ತು ಬಳಗದವರ ಅರೆಭಾಷೆ ಗೀತೆಗಳ ಗೀತಗಾಯನ ಮನ ರಂಜಿಸಿತು. ಮಾಧವ ಚೆಂಬು ಅವರು ಹಾಡಿದ ಅತ್ತೆ ನಿಮ್ಮ ಮಗಳ ಕೊಟ್ಟರಾ ಅಣ್ಣಂಗೆ.. ಹಾಡು ನೆರೆದವರು ತಲೆದೂಗುವಂತೆ ಮಾಡಿತು.
ಸಂಸ್ಕೃತಿ ಪರಿಪಾಲಕರ ಸಮಾಗಮ ಸಮಾರೋಪ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಕೊಲ್ಯದ ಗಿರೀಶ್, ಕೊಡಗು ಗೌಡ ಯುವವೇದಿಕೆಯ ಅಧ್ಯಕ್ಷ ಪೈಕೇರ ಮೋಹನ್ ಮಾದಪ್ಪ, ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ಕೂಡಕಂಡಿ ಗೋಪಾಲ್, ಕುದುಪಜೆ ಕುಶಾಲಪ್ಪ, ವಿಶ್ರಾಂತ ಪ್ರಾಂಶುಪಾಲ ಕಾನಡ್ಕ ಪದ್ಮಾಜಿ, ಅಕಾಡೆಮಿ ಮತ್ತು ಮೈಸೂರು ಗೌಡ ಸಮಾಜದ ಸದಸ್ಯರು ಉಪಸ್ಥಿತರಿದ್ದರು.