ಮಂಡ್ಯ : ಪ್ರಿಯಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣಾನಾ?
ಮೈಸೂರು, ನವೆಂಬರ್, 09 : ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯು ಸಾವನ್ನಪ್ಪಿದ್ದು, ಈಕೆಯ ಸಂಬಂಧಿಕರು ವೈದ್ಯರ ವಿರುದ್ಧ ಹೋರಾಟ ನಡೆಸಿದ್ದಾರೆ. ವೈದ್ಯರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.
ಎದೆನೋವಿನಿಂದ ಬಳಲುತ್ತಿದ್ದ ಪ್ರಿಯಾ ಎಂಬುವವರು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ದಾಖಲಾದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ವೈದ್ಯರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು.[ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಅಪರ್ಣಾ ಆತ್ಮಕ್ಕೆ ಶಾಂತಿ ಸಿಗದು]
ಘಟನೆ ವಿವರ:
ಐದು ವರ್ಷಗಳ ಹಿಂದೆ ಪುಟ್ಟರಾಜು ಎಂಬುವವರನ್ನು ಮದುವೆಯಾದ ಹುಣಸೂರಿನ ಪ್ರಿಯಾ (24) ಎದೆ ನೋವಿಗೆ ತುತ್ತಾದ ಕಾರಣ, ಆಕೆಯ ಪತಿ ಶುಕ್ರವಾರ ರಾತ್ರಿ ಸುಮಾರು 10ರ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆ ಕರ್ತವ್ಯದಲ್ಲಿದ್ದ ಡಾ. ಸ್ಫೂರ್ತಿ ಹಾಗೂ ಡಾ. ದತ್ ಅವರು ಪರಿಶೀಲನೆ ನಡೆಸಿದ್ದು, ಡಾ. ಸ್ಫೂರ್ತಿ ರೋಗಿಗೆ ಚುಚ್ಚುಮದ್ದು ನೀಡಿದ್ದಾರೆ. ನೀಡಿದ ಸ್ವಲ್ಪ ಸಮಯದಲ್ಲಿಯೇ ಅಂದರೆ ಸುಮಾರು 11ರ ಸಮಯದಲ್ಲಿ ಆಕೆ ತಲೆ ಸುತ್ತುತ್ತಿದೆ, ಕಣ್ಣು ಬಿಡಲಾಗುತ್ತಿಲ್ಲ ಎಂದು ಹೇಳುತ್ತಲೇ ಮೃತಪಟ್ಟಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಂಜಾನೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಿಮ್ಸ್ ಆಸ್ಪತ್ರೆ ಬಳಿ ಜಮಾಯಿಸಿದ ಪ್ರಿಯಾಳ ಸಂಬಂಧಿಕರು ಕರ್ತವ್ಯದಲ್ಲಿದ್ದ ವೈದ್ಯರ ವಿರುದ್ಧ ಹರಿಹಾಯ್ದಿದ್ದಾರೆ. ವೈದ್ಯರ ಬೇಜವಾಬ್ದಾರಿಯಿಂದಾಗಿ ಪ್ರಿಯಾ ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ.[ಲಾರಿ ಹರಿದು ವಿದ್ಯಾರ್ಥಿ ಸಾವು : ಶವವಿಟ್ಟು ಪ್ರತಿಭಟನೆ]
ಈ ವೇಳೆ ರೋಗಿ ಕಡೆಯವರು ಮತ್ತು ವೈದ್ಯರ ವಿರುದ್ಧ ಮಾತಿನ ಚಕಮಕಿ, ವಾಗ್ವಾದ ನಡೆದಿದೆ. ಆಗ ಆಕ್ರೋಶಗೊಂಡ ವೈದ್ಯರು, 'ಗಲಾಟೆಯಲ್ಲಿ ರೋಗಿಯ ಕಡೆಯವರು ವೈದ್ಯರನ್ನು ತಳ್ಳಿದ್ದಾರೆ. ಹಲ್ಲೆ ಮಾಡಲು ಮುಂದಾಗಿದ್ದಾರೆ' ಎಂದು ಆರೋಪಿಸಿ ವೈದ್ಯ ವಿದ್ಯಾರ್ಥಿಗಳು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವೈದ್ಯರು ಹಾಗೂ ಸಂಬಂಧಿಕರ ಹೋರಾಟದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಉದೇಶ್, ಪಿಎಸ್ಐ ಶಿವರುದ್ರ ಮತ್ತು ಸಿಬ್ಬಂದಿ ಭೇಟಿ ನೀಡಿ ರೋಗಿಯ ಕಡೆಯವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಗಂಧದ ಕಡ್ಡಿ ಹಚ್ಚುವ ಮುನ್ನ ಗ್ಯಾಸ್ ಆಫ್ ಇದ್ಯಾ ನೋಡ್ಕೊಳ್ಳಿ]
ಘಟನೆಯ ಕುರಿತಂತೆ ರೋಗಿಯ ಕಡೆಯವರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಸ್ಫೂರ್ತಿ ಮತ್ತಿತರ ವಿರುದ್ಧ ದೂರು ದಾಖಲಿಸಿದ್ದಾರೆ. ವೈದ್ಯರೂ ಸಹ ರೋಗಿಯ ಕಡೆಯವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.