ಪುನಃ ಜೈಲಿಗೆ ಹಾಕಿ ಎನ್ನುವ ಮೈಸೂರು ಮಹಿಳೆ ಗೋಳು ಏನು?
ಮೈಸೂರು, ಜನವರಿ, 28: ನಾನು ನನ್ನೂರಿಗೆ ತೆರಳುತ್ತಿದ್ದೇನೆ, ಅಲ್ಲಿ ನನ್ನದೊಂದು ಮನೆಯಿದೆ, ಊರಿನವರು ನನ್ನನ್ನು ಮಗಳಂತೆ ತಬ್ಬಿ ಖುಷಿ ಪಡುತ್ತಾರೆ. ಮಕ್ಕಳಂತೂ ಅಮ್ಮಾ ಎಂದು ಓಡಿ ಬಂದು ಬಾಚಿ ಅಪ್ಪಿ ಮುದ್ದಾಡುತ್ತಾರೆ..ಹೀಗೆ ಏನೆನೋ ಕನಸುಗಳ ಹೊತ್ತು ಸುಮಾರು ವರ್ಷದ ಬಳಿಕ ಊರಿಗೆ ತೆರಳಿದ ಈಕೆಯ ಕನಸಿನ ಸೌಧ ಒಮ್ಮೆಲೇ ಕುಸಿದು ಬಿತ್ತು. ನೋವಿನ ಕಟ್ಟೆ ಒಡೆದು ಕಣ್ಣೀರು ಧಾರಕಾರವಾಗಿ ಹರಿಯಿತು.
ಹೌದು ಈ ಬೇಸರದ ಮಡುವಿಗೆ ಒಳಗಾಗಿದ್ದು ಮೈಸೂರಿನ ತಾಜ್ ಶಿರಿನ್ ತಾಜ್ (44) ಎಂಬಾಕೆ. ಈಕೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡು 14 ವರ್ಷದ ಬಳಿಕ ಸ್ವಂತ ಊರಿಗೆ ಹೋದಾಗ ಮೇಲಿನ ಎಲ್ಲಾ ಪರಿಸ್ಥಿತಿಗೆ ಕಕ್ಕಾಬಿಕ್ಕಿಯಾಗಿ ನಿರ್ಗತಿಕ ಭಾವ ಅನುಭವಿಸಿದಳು. ಪುನಃ ಅಲ್ಲಿಂದ ಬಂದು ನನ್ನನ್ನು ಪುನಃ ಜೈಲಿಗೆ ಹಾಕಿ ಎಂದು ಕಾರಾಗೃಹ ಅಧಿಕಾರಿಗಳ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾಳೆ.[ಮಾಯಾವಿ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಗಂಡಸರೆಷ್ಟು?]
ಮಹಿಳೆಯ ನೋವಿಗೆ ಕಾರಣ ಏನು?
ತಾಜ್ ಶಿರಿನ್ ತಾಜ್ ಮೂಲತಃ ಶ್ರೀರಂಗಪಟ್ಟಣದವರು. ಈಕೆ ತನ್ನ ಪತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದಳು. ತಾಜ್ ಶಿರಿನ್ ತಾಜ್ ಜೈಲಿಗೆ ಸೇರುವಾಗ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗುವಿತ್ತು.
ಪತಿಯ ಕೊಲೆಯ ಅಪರಾಧದ ಮೇಲೆ ನ್ಯಾಯಾಲಯ ಈಕೆಗೆ 14 ವರ್ಷ ಜೈಲು ಶಿಕ್ಷೆ ನೀಡಿತು. ಅಲ್ಲಿಂದ ಈಕೆ ಮಕ್ಕಳ, ಸಂಬಂಧಿಕರ ಸಂಪರ್ಕದಿಂದ ದೂರಾದಳು. ಆಗ ಹಳೆಯ ನೆನಪುಗಳನ್ನೇ ಮೆಲುಕು ಹಾಕುತ್ತಾ ಜೈಲುವಾಸವನ್ನು ಖುಷಿಯಿಂದಲೇ ಅನುಭವಿಸಿದಳು.[ಭಾರತದ ಹೆಣ್ಣು ಮಕ್ಕಳ ವ್ಯಥೆ ಬಿಚ್ಚಿಡುವ ವರದಿಯಲ್ಲೇನಿದೆ?]
ತಾಜ್ ಶಿರಿನ್ ತಾಜ್ ಉತ್ತಮ ನಡತೆಯನ್ನು ಗುರುತಿಸಿದ ಅಧಿಕಾರಿಗಳು ಈಕೆಗೆ ಗಣರಾಜ್ಯೋತ್ಸವದಂದು ಬಿಡುಗಡೆ ಭಾಗ್ಯ ನೀಡಿದರು. ಆದರೆ ತಾಜ್ ಶಿರಿನ್ ತಾಜ್ ಊರಿಗೆ ಹೋದಾಗ ಆಕೆಯ ಮಕ್ಕಳಿರಲಿಲ್ಲ, ನನ್ನ ಮಕ್ಕಳು ಎಲ್ಲಿ ಹೋಗಿದ್ದಾರೆ ಎಂದು ಕೇಳಲು ಆಕೆಯನ್ನು ಊರಿನವರು ಗುರುತಿಸಲೇ ಇಲ್ಲ.
ಇಡೀ ರಾತ್ರಿ ಊರಿನಲ್ಲಿ ಹೇಗೋ ಕಾಲ ಕಳೆದ ಈಕೆ ಪುನಃ ಮೈಸೂರಿನ ಕಾರಾಗೃಹಕ್ಕೆ ಬಂದು ಅಧಿಕಾರಿಗಳಿಗೆ ನನ್ನವರು ಯಾರು ಇಲ್ಲ, ನನ್ನನ್ನು ಜೈಲಿನೊಳಗೆ ಕಳುಹಿಸಿ. ಇಲ್ಲವಾದರೆ ನನ್ನ ಮಕ್ಕಳನ್ನು ಹುಡುಕಿ ಕೊಡಿ ಎಂದು ಅಳುವ ತಾಯಿಯ ಕರುಳಿನ ನೋವು ಕೇಳಿದವರೇ ಬಲ್ಲರು.[ಹಣೆಯಲಿ ಕುಂಕುಮ ನಗುತಿದೆ ಏನೇನೊ ಕಥೆಯಾ ಹೇಳುತಿದೆ]
ತಾಜ್ ಶಿರಿನ್ ತಾಜ್ ಳ ಅಳುವಿಗೆ ಕಿವಿಗೊಟ್ಟ ಕಾರಾಗೃಹ ಅಧಿಕಾರಿಗಳು ನಿರ್ಗತಿಕ ಮಹಿಳೆಯರ ಆಶ್ರಯತಾಣವಾದ ಶಕ್ತಿಧಾಮಕ್ಕೆ ಸೇರಿಸಿದ್ದು, ತನ್ನ ಮಕ್ಕಳ ಹಾದಿಯನ್ನು ಎದುರು ನೋಡುತ್ತಿದ್ದಾಳೆ.