ಪತ್ನಿಗೆ ಜೀವನಾಂಶ ಕೊಡಲು ಹೆದರಿದ ಪತಿ ಆತ್ಮಹತ್ಯೆ
ಮೈಸೂರು,ಮಾರ್ಚ್,07: ಪತ್ನಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಹಾಗೂ ಆಕೆಗೆ ಜೀವನಾಂಶ ಕೊಡಲು ಹೆದರಿದ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ ಸಂಜೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಅಸ್ವಾಳ್ ಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದಿವಂಗತ ಏಲ್ಲಕಯ್ಯ ಅವರ ಮಗ ಸಣ್ಣಸ್ವಾಮಿ (42) ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಈತನ ಪತ್ನಿ ಮೀನಾಕ್ಷಿಯ ವರ್ತನೆಯಿಂದ ನೊಂದು ಸಾವಿಗೆ ಶರಣಾಗಿದ್ದಾನೆ.[ವಸತಿ ಶಾಲೆ ಅಧ್ಯಕ್ಷನ ಕಿರುಕುಳಕ್ಕೆ ಹೆದರಿ 3 ಅಂಧ ಮಕ್ಕಳು ಆತ್ಮಹತ್ಯೆಗೆ ಯತ್ನ]
ಸಣ್ಣಸ್ವಾಮಿ ಕೆಲವು ವರ್ಷಗಳ ಹಿಂದೆ ಮೀನಾಕ್ಷಿ ಎಂಬಾಕೆಯನ್ನು ವಿವಾಹವಾಗಿದ್ದನು. ಕೆಲವು ವರ್ಷ ಇವರ ಸಂಸಾರ ಸಂತೋಷದಿಂದಲೇ ಕೂಡಿತ್ತು. ಹೀಗಿರುವಾಗ ಮೀನಾಕ್ಷಿಗೆ ಅದೇ ಗ್ರಾಮದ ಸಿದ್ದರಾಜು ಎಂಬಾತನ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ಸಂಬಂಧ ಏರ್ಪಟ್ಟಿತ್ತು.
ಮೀನಾಕ್ಷಿಯು ಸಿದ್ದರಾಜುವಿನೊಂದಿಗೆ ಹೊಂದಿರುವ ವಿಷಯ ಪತಿ ಸಣ್ಣಸ್ವಾಮಿಗೆ ತಿಳಿದು ಸಣ್ಣಪುಟ್ಟ ಜಗಳಗಳು ಸಂಸಾರದಲ್ಲಿ ಆರಂಭವಾದವು. ಆ ನಂತರ ಗಂಡನಿಂದ ದೂರವಿದ್ದ ಮೀನಾಕ್ಷಿ ಆಸ್ತಿಯಲ್ಲಿ ಪಾಲು ಮತ್ತು ಜೀವನಾಂಶ ನೀಡುವಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಳು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆಯುತ್ತಿತ್ತು.[ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]
ಮೀನಾಕ್ಷಿ ಮತ್ತು ಪತಿ ಸಣ್ಣಸ್ವಾಮಿ ಅವರನ್ನು ಒಂದುಗೂಡಿಸಲು ಗ್ರಾಮದ ಮುಖಂಡರು ಪಂಚಾಯಿತಿ ನಡೆಸಿದರೂ ಮೀನಾಕ್ಷಿ ಸಿದ್ದರಾಜುವಿನ ಪ್ರೇಮಪಾಶದಲ್ಲಿ ಬಿದ್ದಿದ್ದರಿಂದ ಗಂಡನೊಂದಿಗೆ ಸಂಸಾರ ನಡೆಸಲು ಒಪ್ಪಿರಲಿಲ್ಲ. ಇದು ಗಂಡ ಸಣ್ಣಸ್ವಾಮಿಗೆ ಬೇಸರ ತಂದಿತ್ತು.
ಅಲ್ಲದೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಜೀವನಾಂಶ ನೀಡಲು ಆದೇಶ ನೀಡಿದರೆ ಹಣವನ್ನು ಎಲ್ಲಿಂದ ತರುವುದು ಎಂಬ ಭಯವೂ ಆರಂಭವಾಗಿತ್ತು. ಈ ಎಲ್ಲಾ ವಿಚಾರಗಳಿಂದ ಬೇಸತ್ತ ಸಣ್ಣಸ್ವಾಮಿ ಶನಿವಾರ ಸಂಜೆ ಹೊರವಲಯದ ಜಮೀನಿನಲ್ಲಿ ಮದ್ಯದೊಂದಿಗೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.[ವ್ಯಭಿಚಾರಿ ಹೆಂಡತಿಗೆ ಜೀವನಾಂಶ ಇಲ್ಲ : ಕೋರ್ಟ್]
ಕತ್ತಲಾದರೂ ಸಣ್ಣಸ್ವಾಮಿ ಮನೆಗೆ ಬರಲಿಲ್ಲವೆಂದು ಆತಂಕಗೊಂಡ ಮನೆಯವರು ಜಮೀನಿನ ಬಳಿ ಆತನನ್ನು ಹುಡುಕಿಕೊಂಡು ಹೋಗಿದ್ದಾರೆ. ಆಗ ಆತ ಜಮೀನಿನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.