ಅಯ್ಯೋ ವಿಧಿಯೆ : ತಂದೆಯನ್ನು ಕೈಲಾಸಕ್ಕೆ ಕಳಿಸಿದ ಮಗನ ಕೈಸಾಲ
ಮೈಸೂರು,ಮಾರ್ಚ್,01: ಕಳೆದ ವಾರದಲ್ಲಿ ದುಶ್ಚಟಗಳಿಗೆ ಬಲಿಯಾದ ಮಗನನ್ನು ಕೊಂದ ತಂದೆಯ ಸುದ್ದಿ ಇನ್ನೂ ಮರೆಯಾಗಿಲ್ಲ. ಇದರ ಬೆನ್ನಲ್ಲೇ ಮಗ ಮಾಡಿದ ಕೈಸಾಲ ತೀರಿಸಲಾಗದ ತಂದೆ ಕೈಲಾಸ ಸೇರಿದ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ಮಂಗಳವಾರ ನಡೆದಿದೆ.
ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯೇ ರಘುನಾಥ್ (57). ಇವರು ಮಗ ಪ್ರಶಾಂತ ಮಾಡಿದ ಸಾಲವನ್ನು ತಾನೇ ತೀರಿಸುವುದಾಗಿ ಸಾಲಗಾರರ ಬಳಿ ಒಪ್ಪಿಕೊಂಡಿದ್ದರು. ಆದರೆ ಅದನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ದುಶ್ಚಟಗಳಿಗೆ ಬಲಿಯಾದ ಮಗನನ್ನು ಕೊಲೆಗೈದ ತಂದೆ!]
ರಘುನಾಥ್ ಅವರು ಮೈಸೂರಿನ ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿರುವ ಬಿಜಿಎಸ್ ವಿದ್ಯಾಪೀಠದ ಆವರಣದಲ್ಲಿ ಬಿಜಿಎಸ್ ಬೇಕರಿ ನಡೆಸುತ್ತಿದ್ದರು. ಇವರ ಮಗ ಪ್ರಶಾಂತ್ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ ವಿಲಾಸಿ ಜೀವನಕ್ಕಾಗಿ ಕೈಸಾಲ ಮಾಡಿಕೊಂಡಿದ್ದನು. ತನಗೆ ಪರಿಚಿತರಿಂದ ಸಾಲ ಪಡೆದಿದ್ದ ಪ್ರಶಾಂತ ಅದನ್ನು ತೀರಿಸಲಾಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದನು.
ಸಾಲಗಾರರು ಮನೆ ಮುಂದೆ ಬಂದು ಗಲಾಟೆ ಮಾಡಿದಾಗ ಮಗ ಮಾಡಿದ ಸಾಲವನ್ನು ನಾನೇ ತೀರಿಸುತ್ತೇನೆ. ನೀವು ಮನೆ ಮುಂದೆ ಬಂದು ಗಲಾಟೆ ಮಾಡಬೇಡಿ ಎಂದು ರಘುನಾಥ್ ವಾಗ್ದಾನ ಮಾಡಿದ್ದರು. ಅದರಂತೆ ತಾವು ನಡೆಸುವ ಬೇಕರಿಯಲ್ಲಿ ಬಂದ ಲಾಭದಲ್ಲಿ ಕಂತಿನಂತೆ ತೀರಿಸುತ್ತಿದ್ದರು.[ಸಾಲದಲ್ಲೇ ಮಾಸಿಹೋಯ್ತು ಮೈಸೂರಿನ ಪೈಂಟರ್ ಬದುಕು]
ಈ ನಡುವೆ ಸಾಲಗಾರರು ಬೇಕರಿಗೆ ಬಂದು ಹಣ ನೀಡುವಂತೆ ಬಲವಂತ ಮಾಡುತ್ತಿದ್ದರಲ್ಲದೆ, ಬೇಕರಿ ಮುಂದೆ ಗದ್ದಲ ಎಬ್ಬಿಸಿದ್ದರು. ಸಾಲಗಾರರು ಬಂದು ಕೂಗಾಡುವ ಮತ್ತು ಕಿರುಚಾಡುವ ವಿಚಾರ ಮಠಕ್ಕೆ ತಲುಪಿತ್ತಲ್ಲದೆ, ಈ ರೀತಿ ಮಾಡುವುದು ಸರಿಯಲ್ಲ. ಆದ್ದರಿಂದ ಮಠಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಬೇಕರಿಯನ್ನು ಖಾಲಿ ಮಾಡಿ ಎಂದು ಮಠಾಧಿಕಾರಿಗಳು ಸೂಚನೆ ನೀಡಿದ್ದರು
ಮೊದಲೇ ಮಗನ ಸಾಲದಿಂದ ಜರ್ಜರಿತರಾಗಿದ್ದ ರಘುನಾಥ್ ಮಠಾಧಿಕಾರಿಗಳ ಮಾತಿನಿಂದ ಬೇರೆ ದಾರಿ ಕಾಣದೆ ವಿದ್ಯಾಪೀಠದ ಆವರಣದ ಶೌಚಾಲಯದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.