ಸಿಎಂ ಸಿದ್ದರಾಮಯ್ಯ ತವರಲ್ಲಿ ನಿಂತಿಲ್ಲ ರೈತರ ಆತ್ಮಹತ್ಯೆ
ಮೈಸೂರು, ಅಕ್ಟೋಬರ್ 23: ರಾಜ್ಯದ ಹಲವು ಕಡೆ ಕೇಳಿ ಬರುತ್ತಿದ್ದ ರೈತರ ಆತ್ಮಹತ್ಯೆ ಸುದ್ದಿಗಳಿಗೆ ವಿರಾಮ ಬಿದ್ದಿದ್ದರೂ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ತಾಲೂಕಿನಲ್ಲಿ ಮಾತ್ರ ನಿಲ್ಲುವ ಲಕ್ಷಣಗಳೇ ಕಾಣದಿರುವುದು ಬೇಸರದ ಸಂಗತಿಯಾಗಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಭಯ ಹುಟ್ಟಿಸುವಂತಿದೆ. ಮೇಲಿಂದ ಮೇಲೆ ಹಲವು ಕಾರಣಗಳಿಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸಾಲಭಾದೆಗೆ ಹೆದರಿ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಅಂಕನಹಳ್ಳಿಕೊಪ್ಪಲು ಗ್ರಾಮದ ರಾಮೇಗೌಡ(53) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು 30 ಗುಂಟೆ ಜಮೀನು ಹೊಂದಿದ್ದು, ಕೃಷಿ ಚಟುವಟಿಕೆಗೆ ಇಲ್ಲಿನ ಪಿಎಲ್ ಡಿ ಬ್ಯಾಂಕ್ ನಿಂದ 50 ಸಾವಿರ ಸಾಲ ಮತ್ತು 2 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಸಾಧ್ಯವಾಗದ ಕಾರಣದಿಂದ ಭಾನುವಾರ ಬೆಳಿಗ್ಗೆ ತನ್ನ ಜಮೀನಿನಲ್ಲಿ ವಿಷದ ಮಾತ್ರೆ ಸೇವಿಸಿದ್ದಾರೆ.
ಈ ಸಂಬಂಧ ಕೆ.ಆರ್.ನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಯಿತು.
ಈ ಬಾರಿ ಉತ್ತಮ ಮಳೆಯಾಗಿದ್ದು, ಕೃಷಿ ಮಾಡಲು ಸರ್ಕಾರ ಪ್ರೋತ್ಸಾಹ ನೀಡಬೇಕಾಗಿದೆಯಲ್ಲದೆ, ರೈತರಲ್ಲಿ ಮನೋಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗಿದೆ.