ಸಿಎಂ ತವರಲ್ಲಿ ರೈತನ ಆತ್ಮಹತ್ಯೆಗಿಲ್ಲ ವಿರಾಮ
ಮೈಸೂರು,ಜನವರಿ,18: ಬೆಳೆನಷ್ಟ, ಸಾಲಬಾಧೆ ಇನ್ನಿತರ ಸಂಕಷ್ಟಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಎಂಬ ತೀರ್ಮಾನಕ್ಕೆ ಅನ್ನದಾತ ಬಂದು ತಲುಪಿ ಬಿಟ್ಟಿದ್ದಾನೆ. ಹೀಗಾಗಿಯೇ ಮೇಲಿಂದ ಮೇಲೆ ಸಾಂಕ್ರಾಮಿಕ ರೋಗದಂತೆ ಆತ್ಮಹತ್ಯೆ ಪ್ರಕರಣ ನಡೆಯುತ್ತಿದ್ದು, ಇನ್ನೊಂದು ಆತ್ಮಹತ್ಯೆ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕು, ಕಂದಲಿಕೆ ಹೋಬಳಿ, ನಡಹಾಡಿ ಗ್ರಾಮದ ನಾಗರಾಜು(35) ಎಂಬ ರೈತ ಜಮೀನಿನಲ್ಲಿ ್ಲ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಮೂರು ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದನು ಎಂದು ತಿಳಿದು ಬಂದಿದೆ.[ದೇಶದ ರೈತರಿಗೆ ನರೇಂದ್ರ ಮೋದಿ ಕಳಕಳಿಯ ಪತ್ರ]
ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ತಂಬಾಕು ಮತ್ತು ಹತ್ತಿ ಬೆಳೆ ಇಳುವರಿ ಕುಂಠಿತವಾಗಿದ್ದಲ್ಲದೆ, ಸಮರ್ಪಕ ಬೆಲೆ ಸಿಗದೆ ಮೈಸೂರಿನ ಐಡಿಬಿಐ ಬ್ಯಾಂಕಿನಲ್ಲಿ ಮಾಡಿದ್ದ ಮೂರು ಲಕ್ಷದ ತೊಂಬತ್ತು ಸಾವಿರ ರೂಪಾಯಿ ಸಾಲ ಮತ್ತು ಕೈ ಸಾಲಗಳನ್ನು ತೀರಿಸಲು ಮಾರ್ಗ ಕಾಣದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ತವರು ಜಿಲ್ಲೆ ಮತ್ತು ಹಳೇ ಮೈಸೂರು ಭಾಗದಲ್ಲಿ ಒಂದಲ್ಲ ಒಂದು ಕಾರಣಕ್ಕೆ ರೈತರು ಜೀವವನ್ನು ಬಲಿಕೊಡುತ್ತಲೇ ಬರುತ್ತಿದ್ದಾರೆ. ಮೇಲಿಂದ ಮೇಲೆ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳು ಆತಂಕ ತಂದೊಡ್ಡುತ್ತಿವೆ.
ಅನ್ನದಾತ ಇಷ್ಟೊಂದು ದುರ್ಬಲನಾಗಿ ಬಿಟ್ಟನೇ? ಎಲ್ಲವನ್ನು ಎದುರಿಸಿ ಬದುಕಲಾರದ ಸ್ಥಿತಿಗೆ ಬಂದು ತಲುಪಿ ಬಿಟ್ಟನೇ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಹಗಲು ರಾತ್ರಿ ದುಡಿದು ದೇಶದ ಜನರ ಹಸಿವನ್ನು ನೀಗಿಸುವ ರೈತನೇ ವಿಷ ಸೇವಿಸುವ ಸ್ಥಿತಿಗೆ ಬಂದು ನಿಂತಿರುವುದು ದುರ್ದೈವ ಸಂಗತಿ ಎಂದರೆ ತಪ್ಪಾಗಲಾರದು.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]
ರೈತರಿಗೆ ಧೈರ್ಯ ತುಂಬುವ ಸರ್ಕಾರದ ಕಾರ್ಯಕ್ರಮ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಕಡತ ಸೇರಿದರೆ, ಬಿಜೆಪಿ ನಡೆಸಿದ ಯಾತ್ರೆ ಸರ್ಕಾರವನ್ನು ತೆಗಳಿ ರಾಜಕೀಯ ಪಡೆಯುವುದಕ್ಕಷ್ಟೆ ಸೀಮಿತವಾಯಿತು. ಬದಲಿಗೆ ಯಾವ ರೈತ ಸಮುದಾಯಕ್ಕೂ ಅದರಿಂದ ಕಿಂಚಿತ್ತು ಉಪಯೋಗವಾಗಲಿಲ್ಲ. ಅದರ ಪರಿಣಾಮವೇ ರೈತರ ಆತ್ಮಹತ್ಯೆ ಪ್ರಕರಣ ಮುಂದುವರೆಯುತ್ತಲೇ ಇದೆ.