ಮೈಸೂರು: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ
ಮೈಸೂರು, ನವೆಂಬರ್, 23 : ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಆಕೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿದ್ದ ಯುವಕನನ್ನು ಕೆ.ಆರ್.ಪೇಟೆ ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ನಿವಾಸಿ ರಮೇಶ (30) ಬಂಧಿತ ಆರೋಪಿ. ಕುಂದೂರು ಗ್ರಾಮದ 17 ವರ್ಷದ ಅಪ್ರಾಪ್ತ ಬಾಲಕಿ ಅತ್ಯಾಚಾರಕ್ಕೆ ಒಳಗಾಗಿದ್ದು, ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಫೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಿದ್ದಾರೆ.[ದೇಶವನ್ನೇ ಅಲುಗಾಡಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳು]
ಕಳೆದ 4 ತಿಂಗಳ ಹಿಂದೆ ಮಂಡ್ಯದ ಆಸ್ಪತ್ರೆಗೆ ಬಸ್ಸಿನಲ್ಲಿ ತೆರಳುತ್ತಿರುವಾಗ ಕುಂದೂರು ಗ್ರಾಮದ 17 ವರ್ಷದ ಬಾಲಕಿ ಬಸ್ಸಿನಲ್ಲಿ ರಮೇಶನಿಗೆ ಪರಿಚಯವಾಗಿದ್ದಳು. ಆ ನಂತರ ರಮೇಶ ಆಕೆಯ ಮೊಬೈಲ್ ನಂಬರ್ ಪಡೆದು ಬಾಲಕಿಯೊಂದಿಗೆ ನಿತ್ಯ ಮಾತನಾಡುತ್ತಿದ್ದು, ಆಗಾಗ್ಗೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಯುವತಿಯನ್ನು ಭೇಟಿ ಮಾಡುತ್ತಿದ್ದನು.
ಬಳಿಕ ಮೇಲುಕೋಟೆ ಅರಣ್ಯ ಪ್ರದೇಶಕ್ಕೆ ಎರಡು ಬಾರಿ ಕರೆದುಕೊಂಡು ಹೋದ ರಮೇಶ, ಈಕೆಯನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದನು. ಅಲ್ಲದೆ ಆಕೆಯನ್ನು ಪುಸಲಾಯಿಸಿ ಸುಮಾರು 50 ಸಾವಿರ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಸಿದುಕೊಂಡು ಗಿರಿವಿ ಇಟ್ಟು ಮೋಸ ಮಾಡಿದ್ದನು.[ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಅತ್ಯಾಚಾರಗಳ ಪಟ್ಟಿ]
ಈತನ ವರ್ತನೆಗಳನ್ನು ಅರಿತ ಬಾಲಕಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಆರೋಪಿ ರಮೇಶ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನಿಂದ ಮೋಸ ಹೋಗಿ ನೊಂದ ಆಕೆ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಬಾಲಕಿ ಮತ್ತು ಆರೋಪಿ ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.