ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶ
ಮೈಸೂರು, ನವೆಂಬರ್ 24: ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದು ನನ್ನ ಬದುಕಿನ ಅತ್ಯಮೂಲ್ಯ ಕ್ಷಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿದರು. ಮೈಸೂರಿನಲ್ಲಿ 3 ದಿನಗಳ ಕಾಲ ನಡೆಯಲಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಚಿತ್ರಗಳು : ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರ ಜಾತ್ರೆ
ಬೆಳಿಗ್ಗೆ 11 ಗಂಟೆಗೆ ನೆರವೇರಬೇಕಿದ್ದ ಉದ್ಘಾಟನಾ ಕಾರ್ಯಕ್ರಮ ಒಂದೂವರೆ ಗಂಟೆಯ ವಿಳಂಬವಾದ ಕಾರಣ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರಾದರೂ, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಸಮಾಧಾನಚಿತ್ತರಾದರು.
83 ನೇ ಕನ್ನಡ ಸಾಹಿತ್ಯ ಸಮ್ಮೇಳನ: ತುಂಬಿ ತುಳುಕುತ್ತಿದೆ ಸಭಾಂಗಣ
"ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇ ಪ್ರಸಿದ್ಧವಾಗಿರುವ ಮೈಸೂರು ನಗರದಲ್ಲಿ ಆಯೋಜಿಸಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅಭಿಮಾನದಿಂದ ಹಾಗೂ ಸಂತೋಷದಿಂದ ಉದ್ಘಾಟಿಸಿದ್ದೇನೆ. ಇದು ನನ್ನ ಬದುಕಿನ ಸಾರ್ಥಕ ಕ್ಷಣಗಳಲ್ಲೊಂದು. ಇದಕ್ಕೆ ಹಲವಾರು ಕಾರಣಗಳಿವೆ" ಎನ್ನುತ್ತಲೇ ಸಿದ್ದರಾಮಯ್ಯ ಮಾತು ಆರಂಭಿಸಿದರು.
ಚಂಪಾರಿಗೆ 2000 ಪತ್ರ ಬರೆದು ಸಮ್ಮೇಳನಕ್ಕೆ ಸ್ವಾಗತ ಕೋರಿದ ವಿದ್ಯಾರ್ಥಿಗಳು
"ನನ್ನ ಹುಟ್ಟೂರು ಮೈಸೂರು. ನನಗೆ ಕನ್ನಡದ ದೀಕ್ಷೆಯನ್ನು ಕೊಟ್ಟ ನೆಲ ಮೈಸೂರು. ಇದೇ ಕನ್ನಡ ಕರ್ಮಭೂಮಿಯ ಗರಡಿಯಲ್ಲಿ ಕನ್ನಡ ಪ್ರಜ್ಞೆಯನ್ನು ಬೆಳೆಸಿಕೊಂಡವನು ನಾನು. ಕನ್ನಡ ನಾಡು-ನುಡಿಯ ಬಗ್ಗೆ ನನ್ನಲ್ಲಿರುವ ಬದ್ಧತೆಗೆ, ಮೈಸೂರಿನ ಹಿರಿಯ ಮತ್ತು ಕಿರಿಯ ಸಾಹಿತಿಗಳು, ಕನ್ನಡದ ಹೋರಾಟಗಾರರು ಮತ್ತು ಕನ್ನಡ ಪ್ರೇಮಿಗಳು ಇಲ್ಲಿ ನಿರ್ಮಿಸಿರುವ ಕನ್ನಡದ ವಾತಾವರಣ ಕಾರಣ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ" ಎಂದು ತಮ್ಮ ನೆಲದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.
ಕನ್ನಡ ಸಮ್ಮೇಳನದ ಪ್ರತಿನಿಧಿಗಳಿಗೆ ಉಚಿತ ಮೃಗಾಲಯ ನೋಡುವ ಭಾಗ್ಯ
"ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯ ರೂವಾರಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಹುಟ್ಟಿದ ನೆಲವೂ ಮೈಸೂರು. ಒಡೆಯರ್ ಅವರು ಸಾಮಾಜಿಕ ನ್ಯಾಯದ ಹರಿಕಾರರು ಮಾತ್ರವಲ್ಲ, ಅಪ್ಪಟ ಕನ್ನಡ ಪ್ರೇಮಿಯೂ ಹೌದು. ನುಡಿ ಬೆಳೆಯಬೇಕಾದರೆ ನಾಡು ಅಭಿವೃದ್ಧಿಯಾಗಬೇಕು ಎಂಬ ಕನಸು ಕಂಡವರು ಎಂದು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರನ್ನು ಹಾಡಿಹೊಗಳಿದರು.
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ಮಾಹಿತಿ
ಉದ್ಘಾಟನಾ ಭಾಷಣದಲ್ಲಿ ಮೈಸೂರಿನ ಹಿರಿಮೆ, ಕನ್ನಡದ ಗರಿಮೆಗಳನ್ನು ಕೊಂಡಾಡಿದ ಸಿದ್ದರಾಮಯ್ಯನವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.
ಪ್ರಜಾಪ್ರಭುತ್ವದ ಮೇರು ಕಲ್ಪನೆ ಪರಿಚಯಿಸಿದ ಒಡೆಯರ್
* ಭಾರತದಲ್ಲಿ ಪ್ರಜಾಪ್ರಭುತ್ವವು ಚಿಗುರೊಡೆಯುವ ಮುನ್ನವೇ, ಮೈಸೂರು ಪ್ರಜಾ ಪ್ರತಿನಿಧಿ ಸಭೆಯ ಹೆಸರಿನಲ್ಲಿ ಪ್ರಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಮೇರು ಪರಿಕಲ್ಪನೆಯನ್ನು ಪರಿಚಯಿಸಿದ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಸದಾಶಯಗಳನ್ನು ಮುಂದುವರೆಸಿ ಪ್ರಭುವಾಗಿದ್ದರೂ ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಆಡಳಿತ ನಡೆಸಿದವರು ಶ್ರೀ ಕೃಷ್ಣರಾಜ ಒಡೆಯರ್ ಅವರು.
* ಪ್ರಜೆಗಳ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ದೂರದೃಷ್ಟಿ ರಾಜಕಾರಣಿಗಳಾಗಿರುವ ನಮಗೆಲ್ಲಾ ಮಾದರಿ. ಕನ್ನಂಬಾಡಿ ಜಲಾಶಯವನ್ನು ನಿರ್ಮಿಸಲು ಅರಮನೆಯ ಆಭರಣಗಳನ್ನು ಮಾತ್ರವಲ್ಲ, ಮಹಾರಾಣಿಯವರ ಮೈ ಮೇಲಿನ ಒಡವೆಗಳನ್ನೂ ಮಾರಾಟ ಮಾಡಿದ್ದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರ ಕೆಲಸವನ್ನು ನಾವೆಲ್ಲರೂ ಸದಾ ಕಾಲ ಋಣಿಯಾಗಿರಬೇಕು. ಈ ಸಮ್ಮೇಳನವು ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರಿಗೆ ನಾವು ಸಲ್ಲಿಸುವ ಗೌರವವೂ ಹೌದು.
* ರಾಜ್ಯದ ಮುಖ್ಯಮಂತ್ರಿಯಾಗಿ ಹುಟ್ಟಿದ ಊರಿನಲ್ಲಿಯೇ ಸಮ್ಮೇಳನವನ್ನು ಉದ್ಘಾಟಿಸುವ ಭಾಗ್ಯ ನನ್ನದು.
ಕನ್ನಡ ಸಾಕ್ಷಿಪ್ರಜ್ಞೆ ಚಂಪಾ
ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ್ ಅವರನ್ನು ಆಯ್ಕೆ ಮಾಡಿರುವುದು ಹೆಮ್ಮೆ ಹಾಗೂ ಗೌರವದ ವಿಚಾರ. ಮೊದಲಿಗೆ ಅವರಿಗೆ ಅಭಿನಂದನೆಗಳು.
* ಕರ್ನಾಟಕದ ಮತ್ತೊಂದು ಸಾಂಸ್ಕೃತಿಕ ನಗರವಾದ ಧಾರವಾಡದಲ್ಲಿ ತಮ್ಮ ವೃತ್ತಿ ಜೀವನವನ್ನು ನಡೆಸಿದರೂ ನಿಜವಾದ ನಾಡೋಜನಾಗಿ ಚಂಪಾ ಅವರು ಇಡೀ ರಾಜ್ಯದಲ್ಲಿ ಕನ್ನಡದ ಯುವ ಮನಸ್ಸುಗಳನ್ನು ಬೆಳಸಿದವರು. ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ದುಡಿದವರು. 'ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ' ಎಂದು ಇಡೀ ಕರ್ನಾಟಕದ ಮಹಾ ಮನಸ್ಸುಗಳನ್ನು ಕನ್ನಡದ ಸೇವೆಗೆ ಕಂಕಣ ಬದ್ಧರಾಗಿಸಿದವರು. ಚಂಪಾ ಅವರಿಗೆ ಮತ್ತೊಮ್ಮೆ ನನ್ನ ಅಭಿನಂದನೆಗಳು.
ಹತ್ತು ಹಲವು ಸಾಹಿತಿಗಳ ನೆಲ ಮೈಸೂರು
* ಮೈಸೂರು ಅನೇಕ ಸಾಹಿತಿಗಳ ತವರು. ಬಿಎಂಶ್ರೀ, ತೀನಂಶ್ರೀ, ಕುವೆಂಪು, ಡಿ. ಎಲ್. ನರಸಿಂಹಾಚಾರ್ ಅವರಿಂದ ಮೊದಲ್ಗೊಂಡು ದೇಜಗೌ, ಹಾ ಮಾ ನಾಯಕ್, ಜಿ. ಎಸ್. ಶಿವರುದ್ರಪ್ಪ, ಡಾ ಪ್ರಭುಶಂಕರ, ಸು ಜ ನಾ, ಡಾ ಟಿ. ವಿ. ವೆಂಕಟಾಚಲ ಶಾಸ್ತ್ರಿ, ಎಸ್. ಎಲ್. ಬೈರಪ್ಪ, ದೇವನೂರ ಮಹಾದೇವ, ಆಲನಹಳ್ಳಿ ಕೃಷ್ಣ, ಹೆಚ್. ಜೆ. ಲಕ್ಕಪ್ಪ ಗೌಡ, ಹಿ. ಚಿ. ರಾಮಚಂದ್ರಗೌಡ, ಸಿ. ಪಿ. ಕೃಷ್ಣ ಕುಮಾರ್, ಪ್ರಧಾನ್ ಗುರುದತ್, ಜಿ. ಹೆಚ್. ನಾಯಕ್, ಚ. ಸರ್ವಮಂಗಳ ಅವರವರೆಗೆ ಹಲವು ವಿದ್ವಜ್ಜನರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ನಗರ ಇದಾಗಿದೆ.
* ಈ ಮಹನೀಯರೇ ನಮಗೆ ವೈಚಾರಿಕ ಸ್ಪಷ್ಟತೆಯನ್ನು, ಮುಂದಿನ ಗುರಿಯನ್ನು, ಸಾಗಬೇಕಾದ ದಾರಿಯನ್ನು ತೋರಿಸಿಕೊಟ್ಟವರು. ಇದನ್ನು ಹೇಳುವಾಗ ರಾಷ್ಟ್ರಕವಿ ಕುವೆಂಪು ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ರಾಜ್ಯ-ಕೇಂದ್ರಗಳ ಸಂಬಂಧದ ಬಗ್ಗೆ ಆಡಿರುವ ಮಾತುಗಳು ನನಗೆ ನೆನಪಾಗುತ್ತವೆ.
ಕುವೆಂಪು ನೆನಪು
* ಕುವೆಂಪು ಅವರು ಹೇಳುತ್ತಾರೆ : "ಭರತಖಂಡವು ಒಂದು ಜನಾಂಗವೂ ಅಲ್ಲ, ಅನೇಕ ಜನಾಂಗಗಳೂ ಅಲ್ಲ; ಅದು ಅನೇಕ ಜನಾಂಗಗಳ ಒಂದು ಜನಾಂಗ." ಆದ್ದರಿಂದಲೇ ಭರತ ಮಾತೆಯನ್ನು ಎಷ್ಟರ ಮಟ್ಟಿಗೆ ಆರಾಧಿಸುತ್ತಿದ್ದೇವೆಯೋ ಅಷ್ಟರ ಮಟ್ಟಿಗೆ ಕರ್ನಾಟಕ ಮಾತೆಯನ್ನು ಪೂಜಿಸಲು ನಮಗೆ ಸಾಧ್ಯವಾಗಿದೆ.
* ತನ್ನ ಸಂಸಾರವನ್ನು ಪ್ರೀತಿಸಿದ ಮಾತ್ರದಿಂದಲೇ ಯಾರೂ ಸಮಾಜಕ್ಕೆ ವೈರಿಯಾಗಲಾರನು, ಸಮಾಜವೆಂದರೇನು? ಅಂತಹ ಅಸಂಖ್ಯ ಸಮಾಜದ ಸುಖ, ಎಲ್ಲಾ ಪ್ರಾಂತಗಳ ಅಂಗ ಸೌಂದರ್ಯದಿಂದ ತಾನೇ ಭರತ ಮಾತೆ ಸರ್ವಾಂಗ ಸುಂದರಿಯಾಗುತ್ತಾಳೆ. ಆದುದರಿಂದ ಪ್ರಾಂತ-ಪ್ರಾಂತಗಳ ಹಿತಾಸಕ್ತಿ ರಕ್ಷಣೆಯ ಸ್ವಾತಂತ್ರ್ಯವು ಭರತ ಖಂಡದ ಪೂರ್ಣ ಸ್ವಾತಂತ್ರ್ಯದಷ್ಟೇ ಅವಶ್ಯವಾದುದು.
ಭಗ್ನದರ್ಪಣವಾಗದಿರಲಿ ಸ್ವಾತಂತ್ರ್ಯ
* ಪ್ರತಿಯೊಂದು ಪ್ರಾಂತ್ಯಕ್ಕೂ ಅದರ ಬೆಳೆ, ಕೈಗಾರಿಕೆ, ಹಣಕಾಸಿನ ವ್ಯವಸ್ಥೆ, ಸಾಹಿತ್ಯ-ಸಂಸ್ಕೃತಿ ಮೊದಲಾದವುಗಳನ್ನು ಕಾಪಾಡಿಕೊಳ್ಳುವ ಹಕ್ಕು ಅತ್ಯವಶ್ಯಕವಾಗಿ ಬೇಕಾಗುತ್ತದೆ. ಆ ಹಕ್ಕಿಗೆ ಭಂಗ ಬಂದರೆ ಭರತಖಂಡವು ಸಂಪೂರ್ಣ ಸ್ವರಾಜ್ಯವನ್ನು ಸಂಪಾದಿಸಿದರೂ ಆ ಸ್ವಾತಂತ್ರ್ಯವು ಭಗ್ನದರ್ಪಣವಾಗುತ್ತದೆ. ಹಾಗಾಗಬೇಕೆಂದು ಯಾವ ದೇಶಭಕ್ತರೂ ಹಾರೈಸುವುದಿಲ್ಲ. ಹಾಗಾಗದಂತೆ ನೋಡಿಕೊಳ್ಳುವುದು ನಮ್ಮ ಪರಮಪ್ರಾಣ ಕರ್ತವ್ಯ, ಇವು ಕುವೆಂಪು ಅವರು ಹೇಳಿರುವ ಮಾತುಗಳು.
* ಇದು ಕರ್ನಾಟಕಕ್ಕೆ ಮಾತ್ರ ಹೇಳಿರುವ ಮಾತುಗಳೆಂದು ಭಾವಿಸಬೇಕಾಗಿಲ್ಲ. ಒಕ್ಕೂಟ ವ್ಯವಸ್ಥೆಯೊಳಗೆ ಎಲ್ಲಾ ರಾಜ್ಯಗಳ ಸ್ವತಂತ್ರ ಅಸ್ಮಿತೆಯ ಬಗ್ಗೆ ಹೇಳಿರುವ ಮಾತುಗಳು. ಈ ಬಗೆಯ ನಡೆ-ನುಡಿಗಳು ಕರ್ತವ್ಯದ ಪ್ರಮುಖ ಭಾಗಗಳು. ನಮ್ಮ ಸರ್ಕಾರ ಈ ಕರ್ತವ್ಯ ಭಾಗವನ್ನು ಸದಾ ಎಚ್ಚರಗತಿಯಲ್ಲಿ ಪರಿಪಾಲಿಸಿಕೊಂಡು ಬರುತ್ತಿದೆ.
ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ!
* ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ! ಅದು ಕನ್ನಡದ ಜನ, ನೆಲ, ಜಲ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡ ಕರ್ನಾಟಕ, ಅದುವೇ ಕನ್ನಡತನ. ಕರ್ನಾಟಕದ ನೆಲದಲ್ಲಿ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರು ಎಂದು ನಾವು ತಿಳಿದು ಕೊಂಡಿದ್ದೇವೆ.
* ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ. ಅದು ನನ್ನ ಬದುಕು. ನಾನು ಹುಟ್ಟು ಕನ್ನಡ ಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಸಾರ್ವತ್ರಿಕ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯವರೆಗೆ ನೆಲ-ಜಲ-ನುಡಿಯ ಬಗ್ಗೆ ಎಂದೂ ರಾಜಿಮಾಡಿಕೊಂಡಿಲ್ಲ, ಎಂದೂ ರಾಜಕೀಯವನ್ನೂ ಮಾಡಿಲ್ಲ.
* ಕನ್ನಡ ನಾಡು, ನುಡಿ ಮತ್ತು ಜನ ಬೇರೆ ಬೇರೆ ಅಲ್ಲ ಎನ್ನುವ ಅಭಿಪ್ರಾಯ ನನ್ನದು. ಆದ್ದರಿಂದಲೇ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರೂಪಿಸಿ ಬೆಳೆಸಿರುವ 'ಕರ್ನಾಟಕ ಅಭಿವೃದ್ಧಿ ಮಾದರಿ' ಎನ್ನುವುದು ಈ ನೆಲದ ಭಾಷಾ ಅಸ್ಮಿತೆಯನ್ನು ಎತ್ತಿಹಿಡಿಯುವುದರ ಜೊತೆಗೆ ನಾಡಿನ ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಆಶಯವನ್ನೂ ಹೊಂದಿದೆ.
ಭಾಷೆ ಕೇವಲ ಭಾವನಾತ್ಮಕ ವಿಷಯ ಅಲ್ಲ
* ಭಾಷೆ ಎನ್ನುವುದು ಕೇವಲ ಭಾವನಾತ್ಮಕ ವಿಷಯ ಅಲ್ಲ. ಭಾಷೆಯ ವಿಷಯ ಬಂದಾಗ ನಾವು ಭಾವುಕರಾಗುತ್ತೇವೆ, ಇದು ತಪ್ಪಲ್ಲ, ಆದರೆ, ಅದು ಅಷ್ಟಕ್ಕೆ ನಿಲ್ಲಬಾರದು. ಅದು ಬದುಕು ರೂಪಿಸುವ ಸಮರ್ಥ ಸಾಧನವೂ ಆಗಬೇಕು. ನಮ್ಮದು ಕೇವಲ ಮಾತನಾಡುವ ಸರ್ಕಾರ ಅಲ್ಲ, ಕೆಲಸ ಮಾಡುವ ಸರ್ಕಾರ. ಗುರಿ ಮತ್ತು ದಾರಿ ಎರಡರಲ್ಲಿಯೂ ನಮಗೆ ಸ್ಪಷ್ಟತೆ ಇದೆ.
* ಭಾಷೆ ಅನ್ನದ ಭಾಷೆಯಾದರೆ ಅದು ಬೆಳೆಯುತ್ತದೆ, ಉಳಿಯುತ್ತದೆ ಎನ್ನುವ ಮಾತಿದೆ. ಆದ್ದರಿಂದ ಕೃಷಿ, ಉದ್ಯಮ, ಉದ್ಯೋಗ, ವಿಜ್ಞಾನ, ತಂತ್ರಜ್ಞಾನ ಹೀಗೆ ಒಟ್ಟು ರಾಜ್ಯದ ಅಭಿವೃದ್ಧಿಯಲ್ಲಿಯೇ ಕನ್ನಡದ ಬೆಳವಣಿಗೆ ಕೂಡಾ ಇದೆ ಎಂದು ನಮ್ಮ ಸರ್ಕಾರ ನಂಬಿದೆ.
ನಮ್ಮ ಅಭಿವೃದ್ಧಿ ಆಶಯವೂ ಅದೇ
* ನಾವು ರೂಪಿಸಿ ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಮಾದರಿಯ ಆಶಯ ಕೂಡಾ ಇದೇ ಆಗಿದೆ. ಇದು ಸಾಧ್ಯವಾಗಬೇಕೆಂದರೆ ಜ್ಞಾನ, ವಿಜ್ಞಾನಗಳ ಸೃಷ್ಟಿ ನಮ್ಮದೇ ಆದ ಭಾಷೆಯಲ್ಲಿ ಸಾಧ್ಯವಾಗಬೇಕು. ಭಾಷೆಯ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತಹ ವಾಣಿಜ್ಯಕ ಆರ್ಥಿಕ ವಿನ್ಯಾಸಗಳೂ ಕನ್ನಡಕ್ಕೆ ಲಭ್ಯವಾಗಬೇಕು.
* ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕನ್ನಡ ಮತ್ತು ಕನ್ನಡಿಗರಿಗಾಗಿ ನಮ್ಮ ಸರ್ಕಾರ ಮಾಡಿದ ಕೆಲಸದ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆಯಿದೆ. ಇದನ್ನು ರಾಜ್ಯದ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು ಮೆಚ್ಚಿಕೊಂಡಾಡಿದ್ದಾರೆ. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕರ್ನಾಟಕವನ್ನು ನಾವೆಲ್ಲಾ ಕೂಡಿ ಇನ್ನಷ್ಟು ಬಲಿಷ್ಠವಾಗಿ ನಿರ್ಮಿಸಬೇಕಾಗಿದೆ. ನವ ಕರ್ನಾಟಕ ನಿರ್ಮಾಣಕ್ಕೆ ಸಿದ್ಧರಾಗಬೇಕಾಗಿದೆ.
ಸರ್ಕಾರದ ಕನ್ನಡಪರ ಯೋಜನೆಗಳು
* ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇಕಡಾ ಐದರಷ್ಟು ಮೀಸಲಾತಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ, ಸಿಬಿಎಸ್ ಇ, ಐಸಿಎಸ್ ಇ ಶಾಲೆಗಳೂ ಸೇರಿದಂತೆ ಎಲ್ಲಾ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಭಾಷಾ ನೀತಿ ಜಾರಿ, ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ, ರಾಷ್ಟ್ರೀಕೃತ, ಗ್ರಾಮೀಣ ಮತ್ತು ಷೆಡ್ಯೂಲ್ಡ್ ಬ್ಯಾಂಕ್ ಗಳ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಸೂಚಿಸಿ ಸುತ್ತೋಲೆ, ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನ ಕಡ್ಡಾಯಗೊಳಿಸಿ ಆದೇಶ, ಗುಣಮಟ್ಟದ 125 ಕನ್ನಡ ಸಿನಿಮಾಗಳಿಗೆ ಸಹಾಯಧನ, ಕನ್ನಡೇತರರಿಗೆ ಕನ್ನಡ ಕಲಿಸಲು ಬೆಂಗಳೂರು ನಗರದಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ - ಇವು ನಮ್ಮ ಸರ್ಕಾರ ಕೈಗೊಂಡಿರುವ ಪ್ರಮುಖ ಕನ್ನಡ ಪರ ನಿರ್ಧಾರಗಳು.
* ಸಾಂಸ್ಕೃತಿಕ ಕರ್ನಾಟಕವನ್ನು ಇನ್ನಷ್ಟು ಬಲಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಸಾಂಸ್ಕೃತಿಕ ನೀತಿಯನ್ನು ಅಂಗೀಕರಿಸಿ ಅನುಷ್ಠಾನಕ್ಕೆ ತರುತ್ತಿದ್ದೇವೆ. ಮೂಲ ಸೌಕರ್ಯ ಕಲ್ಪಿಸಲು ಈ ವರ್ಷ 23 ಕೋಟಿ ರೂಪಾಯಿ ನೀಡಲಾಗಿದೆ.
ಮನುಷ್ಯ ಜಾತಿ ತಾನೊಂದೆ ವಲಂ
* ನಮ್ಮ ಕನ್ನಡ ಪರಂಪರೆ ತಾನು ಬದುಕು ಮತ್ತು ಬೇರೆಯವರನ್ನು ಬದುಕಲು ಬಿಡು ತತ್ವಕ್ಕೆ ಆದ್ಯತೆ ನೀಡುವ ಪರಂಪರೆ. 'ಮನುಷ್ಯಜಾತಿ ತಾನೊಂದೆ ವಲಂ' ಎಂದು ಹತ್ತನೇ ಶತಮಾನದಲ್ಲಿಯೇ ನಮ್ಮ ಆದಿಕವಿ ಪಂಪ ಕನ್ನಡದ ಆದರ್ಶನವನ್ನು ಘೋಷಿಸಿದ್ದಾನೆ. ಹದಿನೈದನೇ ಶತಮಾನದ ಕನಕದಾಸರು ಕುಲ, ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ? ಬಲ್ಲಿರಾ ? ' ಎಂದಿದ್ದಾರೆ. ಇಪ್ಪತ್ತನೇ ಶತಮಾನದ ಕುವೆಂಪು ವಿಶ್ವಮಾನವ ತತ್ವ 'ವನ್ನು ಎತ್ತಿಹಿಡಿದಿದ್ದಾರೆ.
*'ಧರ್ಮ' ಎಂಬುದು ಸಂಕುಚಿತ ಅರ್ಥಕ್ಕೆ ಸೀಮೀತಗೊಳ್ಳದೆ, ಧರ್ಮ-ಮಾನವಧರ್ಮ'ಎಂದು ನಂಬಿದ ಪರಂಪರೆ ನಮ್ಮದು. ದೇವರು ಗುಡಿಯಲ್ಲಿ ಇಲ್ಲ, ಮನುಷ್ಯನ ಅಂತರಂಗದಲ್ಲಿದ್ದಾನೆ, ದೇಹವೇ ದೇಗುಲ' ಎಂದು ವಚನಕಾರರು ಘೋಷಿಸಿದರು. ದೇಹವೇ ದೇವಾಲಯ ಎಂದಾಗ, ಎಲ್ಲಾ ಮನುಷ್ಯರು ಅವರ ದೇಹವೂ ದೇವನ ಆವಾಸಸ್ಥಾನವಾಗುತ್ತದೆ. ಅಲ್ಲಿ ಒಬ್ಬರನ್ನು ಮತ್ತೊಬ್ಬರು ಹಿಂಸಿಸಲು ಅವಕಾಶವಿಲ್ಲ.
ದಯೆ ಇಲ್ಲದ ಧರ್ಮ ಯಾವುದಯ್ಯ
* 'ದಯೆಯೇ ಧರ್ಮದ ಮೂಲವಯ್ಯ! ದಯೆ ಇಲ್ಲದ ಧರ್ಮ ಯಾವುದಯ್ಯ? ಎಂದು ಹೇಳಿದ ಬಸವಣ್ಣನವರು ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವವರಿಗೆ ಉತ್ತರ ನೀಡಿದ್ದಾರೆ. ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವವರು ಧರ್ಮದ್ರೋಹಿಗಳು, ಬಸವ ದ್ರೋಹಿಗಳು.
* ಕೋಮುಸೌಹಾರ್ಧದಂತೆಯೇ, ಭಾಷಾ ಸೌಹಾರ್ದವೂ ಮುಖ್ಯ ಎಂದು ನಂಬಿದ್ದೇವೆ. ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟ' ಎಂದು ಕುವೆಂಪು ಘೋಷಿಸಿದ್ದಾರೆ. ಆದರೆ, ಇಲ್ಲಿ ಬಂದು ನೆಲೆಸುವ ಅನ್ಯ ಭಾಷಿಕರು ಸ್ವತಂತ್ರವಾಗಿ ಇಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಅವರಿಗೆ ಸ್ವತಂತ್ರವಿದೆಯಾದರೂ, ಇಲ್ಲಿನ ನೆಲದ ಭಾಷೆ ಕನ್ನಡವನ್ನು ಅವರು ಕಲಿಯಲೇ ಬೇಕು ಎಂಬುದು ನಮ್ಮ ಸದಾಶಯ.
ಅಭಿವ್ಯಕ್ತಿ ಸ್ವಾತಂತ್ರ್ಯ
ನಾನು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಬಲವಾದ ನಂಬಿಕೆ ಹೊಂದಿದವನು. ಸಾಹಿತ್ಯ, ಸಂಗೀತ, ಚಿತ್ರಕಲೆ, ಮಾಧ್ಯಮ ಎಲ್ಲವೂ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಭಿನ್ನ ಮುಖಗಳು. ಅಭಿಪ್ರಾಯಗಳು ರೂಪುಗೊಳ್ಳುವುದೇ ಮುಕ್ತವಾದ ಅಭಿವ್ಯಕ್ತಿ ಮೂಲಕ. ಇತ್ತೀಚೆಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶ ಭಕ್ತಿ, ಧರ್ಮ ಭಕ್ತಿ, ರಾಷ್ಟ್ರೀಯತೆ ಮೊದಲಾದವುಗಳ ಹೆಸರಲ್ಲಿ ದಮನ ಮಾಡುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದೇ ಮುಕ್ತ ಅಭಿವ್ಯಕ್ತಿಯ ಮೂಲಕ ಎಂಬುದು ನನ್ನ ನಂಬಿಕೆ.
ಮಾತೃ ಭಾಷೆಯ ಶಿಕ್ಷಣ
* ಮಾತೃ ಭಾಷೆಯ ಶಿಕ್ಷಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗೆಗೆ ಇರುವ ಕಾನೂನು ತೊಡಕನ್ನು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿದೆ. ಕೇಂದ್ರ ಸರ್ಕಾರಕ್ಕೆ ಈ ಸಂಬಂಧವಾಗಿ ಎರಡು ಪತ್ರಗಳನ್ನು ಬರೆದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿಯೂ ಪ್ರಸ್ತಾಪಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲು ಪ್ರಯತ್ನಿಸುತ್ತೇವೆ.
* ಭಾರತದ ಒಕ್ಕೂಟ ತತ್ವವನ್ನು ಒಪ್ಪಿಕೊಂಡು ಕನ್ನಡದ ಅನನ್ಯತೆಯನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ. ಆದುದರಿಂದಲೇ ನಮ್ಮ ನಾಡಿಗೆ ಒಂದು ನಾಡಗೀತೆ ಇರುವಂತೆ, ನಾಡಧ್ವಜವೂ ಇರಬೇಕು ಎಂದು ನಾವು ನಂಬುತ್ತೇವೆ. ನಾಡಗೀತೆ-ರಾಷ್ಟ್ರಗೀತೆ, ನಾಡಧ್ವಜ-ರಾಷ್ಟ್ರಧ್ವಜ ಇವೆರಡೂ ಪರಸ್ಪರ ಪೂರಕ, ಪರಸ್ವರ ವಿರೋಧಿ ಅಲ್ಲ. ನಮ್ಮ ರಾಷ್ಟ್ರಕವಿ ಕುವೆಂಪು ಅವರು ಜಯಭಾರತ ಜನನಿಯ ತನುಜಾತೆ; ಜಯಹೇ ಕರ್ನಾಟಕ ಮಾತೆ' ಎಂದು ಹಾಡಿದ್ದಾರೆ. ಈ ಆದರ್ಶಕ್ಕೆ ನಾವು ಬದ್ಧರಾಗಿದ್ದೇವೆ. ಇದನ್ನು ವಿರೋಧಿಸುವುದು ನಾಡು-ನುಡಿಗೆ ತೋರುವ ಅಗೌರವವಾಗುತ್ತದೆ.
ನಾವು ನುಡಿದಂತೆ ನಡೆಯುವವರು
* ನಾವು ನುಡಿದಂತೆ ನಡೆಯುವವರು. ಕನ್ನಡ ಮತ್ತು ಸಂಸ್ಕೃತಿ ಪರ ಚಟುವಟಿಕೆಗಳಿಗಾಗಿ ನೀಡುತ್ತಿರುವ ಅನುದಾನವನ್ನು 160 ಕೋಟಿ ರೂ ಗಳಿಂದ 424 ಕೋಟಿ ರೂ ಗಳಿಗೆ ಹೆಚ್ಚಿಸಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ನಿರ್ಮಿಸಲಿರುವ ಶತಮಾನೋತ್ಸವ ಭವನ ನಿರ್ಮಾಣಕ್ಕಾಗಿ ಐದು ಕೋಟಿ ರೂ ವಿಶೇಷ ಅನುದಾನ ನೀಡಿದ್ದೇವೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಪರಿಷತ್ನ ಚಟುವಟಿಕೆಗಳಿಗೆ 12 ಕೋಟಿ ರೂ ಅನುದಾನ ನೀಡುತ್ತಿದ್ದೇವೆ.
ಭಾಷೆಗಷ್ಟೇ ಸೀಮಿತವಲ್ಲ
* ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯದ ವಿಷಯಗಳಿಗಷ್ಟೇ ಸೀಮಿತಗೊಳ್ಳದೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಚರ್ಚೆಗೆ ಎತ್ತಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಈ ಚರ್ಚೆ-ಸಂವಾದದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸುತ್ತದೆ. ನಾವೆಲ್ಲಾ ಹುಟ್ಟಿನಿಂದ ಇಲ್ಲವೇ ವಾಸದ ಬಲದಿಂದ ಮಾತ್ರ ಕನ್ನಡಿಗರಾದರೆ ಸಾಲದು. ನಮ್ಮ ಆಚಾರ,ವಿಚಾರ,ನಡವಳಿಕೆಗಳಿಂದಲೂ ಕನ್ನಡಿಗರಾಗಬೇಕು. ಭಾಷೆ ಬಳಕೆಯ ಮೂಲಕವೇ ನಾವು ಬೆಳೆಯಲು ಸಾಧ್ಯ. ಕನ್ನಡ ಬಳಕೆ ಬಗ್ಗೆ ನಮಗೆ ಹೆಮ್ಮೆ ಇರಬೇಕು, ಕೀಳರಿಮೆ ಬೇಡ.ಕನ್ನಡಮಾತಾನಾಡುವುದು ಎಂದರೆ ಅದು ನಮ್ಮ ನಾಡಿನ ಸಂಸ್ಕೃತಿಯನ್ನು ಇನ್ನೊಂದು ಪೀಳಿಗೆಗೆ ದಾಟಿಸುವುದು ಎಂದರ್ಥ. ನಾವು ಕನ್ನಡದಲ್ಲಿಯೇ ವ್ಯವಹರಿಸುತ್ತೇವೆ, ಕನ್ನಡ ಪತ್ರಿಕೆ ಹಾಗೂ ಪುಸ್ತಕಗಳನ್ನು ಕೊಂಡು ಓದುತ್ತೇವೆ ಮತ್ತು ಇಂತಹ ಕನ್ನಡತನದ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿಯೂ ಬೆಳೆಸುತ್ತೇವೆ ಎಂದು ಪ್ರತಿಯೊಬ್ಬ ಕನ್ನಡಿಗನೂ ಸಂಕಲ್ಪ ಮಾಡಬೇಕೆಂದು ತಮ್ಮೆಲ್ಲರನ್ನೂ ಕೋರುತ್ತೇನೆ.