ಈ ವರ್ಷದ ಕೊನೆಯೊಳಗೆ 5 ಸಾವಿರ ಸೈಟ್ ಹಂಚಿಕೆ : ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್ 16: ಈ ವರ್ಷ ಐದು ಸಾವಿರ ನಿವೇಶನ ಹಂಚುವ ವಿಚಾರವಾಗಿ ಮೂಡಾ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿದ ರವೀಂದ್ರನಾಥ್ ಠಾಗೋರ್ ನಗರ (ಆರ್.ಟಿ. ನಗರ) ಬಡಾವಣೆಯಲ್ಲಿ ನಿವೇಶನಗಳ ಮಂಜೂರಾತಿ ಹೊಂದಿದ ಫಲಾನುಭವಿಗಳಿಗೆ ಹಂಚಿಕೆ ಪತ್ರ ವಿತರಿಸುವ ಕಾಅರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ಮೈಸೂರು ನಗರದಲ್ಲೇ ಆರ್.ಟಿ.ನಗರ ಉತ್ತಮ ಬಡಾವಣೆ. ಇದು ಎತ್ತರದ ಪ್ರದೇಶದಲ್ಲಿರುವ ಬಡಾವಣೆ. ಎಷ್ಟೇ ಮಳೆ ಬಂದರೂ ನೀರು ತುಂಬಲ್ಲ. ಬಡವರಿಗೆ ಹೆಚ್ಚು ಸೈಟ್ ಸಿಕ್ಕಿದೆ. 1683 ಸೈಟ್ ಹಂಚಿಕೆಯಾಗಿದ್ದು, ಹಿರಿತನ ಪರಿಗಣಿಸಿ, ಲಾಟರಿ ಮೂಲಕ ಸೈಟ್ ಹಂಚಿಕೆ ಮಾಡಲಾಗಿದೆ. ಸೈಟ್ ಹಂಚಿಕೆಯಲ್ಲಿ ಯಾವುದೇ ಪ್ರಭಾವ ನಡೆದಿಲ್ಲ ಎಂದು ತಿಳಿಸಿದರು.
ನನ್ನ ಕೊನೆಯ ಚುನಾವಣೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ನಡೆಯಲಿದೆ. ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನನ್ನನ್ನು ಸೋಲಿಸಲು ವಿರೋಧಿಗಳು ಒಂದಾಗಿದ್ದಾರೆ ಅಂತಾರೆ. ಆದರೆ ವಿರೋಧಿಗಳು ಹೆಚ್ಚಾದಷ್ಟೂ ನನ್ನ ಶಕ್ತಿ ಹೆಚ್ಚಲಿದೆ. ನನಗೆ ವೈಯಕ್ತಿಕವಾಗಿ ಯಾರು ವಿರೋಧಿಗಳಿಲ್ಲ. ರಾಜಕೀಯವಾಗಿ ಶತ್ರುಗಳಿದ್ದಾರೆ ಅಷ್ಟೇ ಎಂದರು.
ಮೈಸೂರು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದೆ. ಆರ್ ಟಿ ನಗರವೂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತದೆ. ಕೊನೆ ಭಾರಿ ಇಲ್ಲಿಯೇ ನಿಲ್ಲುತ್ತೇನೆ. ವಿರೋಧಿಗಳು ಹೆಚ್ಚಿದಷ್ಟು ನನ್ನ ಶಕ್ತಿ ಇಮ್ಮಡಿಯಾಗುತ್ತದೆ. ಮುಂದಿನ ಬಾರಿಯೂ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ನಾನು ಮೈಸೂರಿಗೆ ಓದಲು ಬಂದಾಗ ಕೇವಲ ಎರಡು ಲಕ್ಷ ಜನಸಂಖ್ಯೆ ಇತ್ತು. ಈಗ ಮೈಸೂರಿನಲ್ಲಿ ಹನ್ನೆರಡು ಲಕ್ಷ ಜನಸಂಖ್ಯೆ ಇದೆ. "ನೀನು ಪಾಲಿಕೆ ಸದಸ್ಯನಾಗಿ, ಶಾಸಕನಾಗಿ, ಸಚಿವನಾದರೂ ಮೈಸೂರಿನ ಜನಸಂಖ್ಯೆ ತಿಳಿದುಕೊಂಡಿಲ್ಲ" ಎಂದು ಸಚಿವ ತನ್ವೀರ್ ಸೇಠ್ ಗೆ ಸಿದ್ದರಾಮಯ್ಯ ಮಾತಿನಲ್ಲೇ ತಿವಿದರು.
ಮೈಸೂರಿನಲ್ಲಿ ಜನವರಿ 1 ರಿಂದ 12 ಇಂದಿರಾ ಕ್ಯಾಂಟಿನ್ ಆರಂಭ ಆಗಲಿದೆ. ಮೈಸೂರಿನಲ್ಲಿ 12 ಲಕ್ಷ ಜನ ಇದ್ದಾರೆ. ರಾಜ್ಯದಲ್ಲಿ ಒಟ್ಟು 500 ಇಂದಿರಾ ಕ್ಯಾಂಟಿನ್ ಆರಂಭವಾಗುವುದು. ಮೈಸೂರಿನ ಜನನಿಬಿಡ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲಾಗುವುದು. ಹಸಿವುಮುಕ್ತ ರಾಜ್ಯವೇ ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದರು.