ಹುಣಸೂರು ಹೈರಿಗೆ ಕೆರೆಯಲ್ಲಿ ಮುಳುಗಿ 4 ವಿದ್ಯಾರ್ಥಿಗಳು ಸಾವು
ಮೈಸೂರು, ಮಾರ್ಚ್ 07: ಈಜಲೆಂದು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ಹೈರಿಗೆ ಕೆರೆಯಲ್ಲಿ ಮಂಗಳವಾರ(ಮಾ.06) ನಡೆದಿದೆ.
ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದ ರಮೇಶ ಎಂಬುವರ ಪುತ್ರ ಸುನೀಲ್ ಹಾಗೂ ಹುಣಸೂರು ಪಟ್ಟಣದ ಅಜಯ್, ಯಶವಂತ್ ಹಾಗೂ ಧನಂಜಯ ಎಂಬುವರೇ ಕೆರೆಯಲ್ಲಿ ಮುಳುಗಿದ ವಿದ್ಯಾರ್ಥಿಗಳಾಗಿದ್ದಾರೆ.
ಮಂಡ್ಯದ ಮತ್ತಿತಾಳೇಶ್ವರ ಕೊಳದಲ್ಲಿ ಪೇದೆ ಸಾವು
ಇವರೆಲ್ಲರೂ ಸಂತ ಜೋಸೆಫರ ಪ್ರೌಢಶಾಲೆಯ ಎಸ್ಎಸ್ಎಲ್ ಸಿ ಓದುತ್ತಿದ್ದರು. ಪೂರ್ವಭಾವಿ ಪರೀಕ್ಷೆ ಬರೆದು ಮುಗಿಸಿದ ಹಿನ್ನಲೆಯಲ್ಲಿ ಕೆರೆಯಲ್ಲಿ ಈಜಲು ಹೈರಿಗೆ ಕೆರೆಗೆ ತೆರಳಿದ್ದರು. ಆದರೆ ಈಜುವ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ವಿಚಾರ ಯಾರಿಗೂ ತಿಳಿದಿಲ್ಲವಾದರೂ ಕೆರೆಯ ದಡದಲ್ಲಿ ನಾಲ್ಕು ವಾಚ್, ಮೊಬೈಲ್, ಬಟ್ಟೆ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಅಲ್ಲದೆ ಸ್ಥಳೀಯ ನುರಿತ ಈಜುಗಾರರು ಕೆರೆಯಲ್ಲಿ ವಿದ್ಯಾರ್ಥಿಗಳ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ.
ಶೋಧ ಕಾರ್ಯದ ವೇಳೆ ಯಶವಂತ್ ಹಾಗೂ ಭರತ್ ಮೃತ ದೇಹಗಳು ದೊರೆತಿದ್ದು, ಅದನ್ನು ಹೊರತೆಗೆಯಲಾಗಿದೆ. ಇನ್ನಿಬ್ಬರ ಮೃತ ದೇಹಗಳಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.