ವಿದ್ಯುತ್ ತಂತಿ ತಗುಲಿ ಮೈಸೂರಿನಲ್ಲಿ ಮೂವರ ಸಾವು
ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಟೌಟ್ ಅಳವಡಿಸುವ ವೇಳೆವಿದ್ಯುತ್ ತಂತಿ ತಗುಲಿ ಮೂವರು ದುರ್ಮರಣಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು, ಏಪ್ರಿಲ್ 14: ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಕಟೌಟ್ ಅಳವಡಿಸುವ ವೇಳೆ ವಿದ್ಯುತ್ ತಂತಿ ತಗುಲಿ ಮೂವರು ಮೃತಪಟ್ಟು, ಆರಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಇಂದು (ಏಪ್ರಿಲ್ 14) ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಮೈಸೂರು ಮಹಾನಗರಪಾಲಿಕೆ ಉದ್ಯೋಗಿ ಮಣಿಕಂಠ(27), ಪೇಂಟರ್ ಕುಮಾರ್ (40) ಹಾಗೂ ಟೈಲ್ಸ್ ಕೆಲಸ ಮಾಡುವ ಶಿವು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ರಾಘವೇಂದ್ರ, ಶಿವು, ಶಾಂತಕುಮಾರ್ ಮತ್ತು ಇನ್ನೂ ಮೂವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.[ತಿ.ನರಸೀಪುರದಲ್ಲಿ ಬೀದಿಗೆ ಬಿದ್ದ ಕುಟುಂಬಗಳ ಗೋಳು ಕೇಳೋರಿಲ್ಲ!]
ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಯುವಕರು ಸಿದ್ಧತೆಯನ್ನು ನಡೆಸುವ ವೇಳೆ ಐದಾರು ಮಂದಿ ಕಟೌಟ್ ನ್ನು ಮೇಲೆತ್ತಿ ಅಳವಡಿಸುವ ಯತ್ನದಲ್ಲಿದ್ದಾಗ ಅದರಲ್ಲಿದ್ದ ಕಬ್ಬಿಣದ ಫ್ರೇಂ ವಿದ್ಯುತ್ ತಂತಿಗೆ ತಗುಲಿದ್ದು ಈ ದುರಂತಕ್ಕೆ ಕಾರಣವಾಗಿದೆ.
ಯುವಕರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.