ಮೂರು ದಿನಗಳ ಕನ್ನಡ ಸಾಹಿತ್ಯ ಹಬ್ಬಕ್ಕೆ ಮೂರು ನಿರ್ಣಯದೊಂದಿಗೆ ತೆರೆ
ಮೈಸೂರು, ನವೆಂಬರ್ 26 : ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆದ 'ಅಕ್ಷರ ಜಾತ್ರೆ'- ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿದೆ.
ಸಾಂಸ್ಕೃತಿಕ ನಗರಿ ಮೈಸೂರಿನ ಸಾಹಿತ್ಯ ಸಂಸ್ಕೃತಿಗಳ ಸಂಗಮವಾದ ಸಾಹಿತ್ಯ ಸಮ್ಮೇಳನ ಸಣ್ಣ ಪುಟ್ಟ ಲೋಪಗಳನ್ನು ಮೀರಿಯೂ ಕನ್ನಡಿಗರ ಅಂತರಾಳದಲ್ಲಿ ತಾನೊಬ್ಬ ಕನ್ನಡಿಗನೆಂಬ ಹೆಮ್ಮೆಯ ಭಾವವನ್ನು ಮೂಡಿಸಿದೆ. ಗೋಷ್ಠಿಗಳು ವಿಚಾರಗಳನ್ನು ಮನದಾಳಕ್ಕಿಳಿಸಿವೆ, ಜ್ಞಾನದಾಹವನ್ನು ನೀಗುವ ಪುಸ್ತಕ ಭಂಡಾರ ಮನವನ್ನು ಸಂಭ್ರಮಿಸುವಂತೆ ಮಾಡಿದ್ದು, ರುಚಿಕರವಾದ ಭೋಜನವನ್ನು ಸವಿದ ಮನ ಸಮ್ಮೇಳನಕ್ಕೆ ಉಘೇ ಉಘೇ ಎಂದಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಾಡಿನೆಲ್ಲೆಡೆಯಿಂದ ಮೈಸೂರಿಗೆ ಹರಿದು ಬಂದ ಕನ್ನಡಾಭಿಮಾನಿಗಳಿಗೆ ಕಿಂಚಿತ್ ಲೋಪ ತಟ್ಟದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಓರೆಕೊರೆಗಳು ಸಾಮಾನ್ಯ. ಅವುಗಳನ್ನು ಮೀರಿದ ಆದರಾತಿಥ್ಯ, ಆತ್ಮೀಯತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮತ್ತು ಆಡಳಿತ ವ್ಯವಸ್ಥೆ ನೀಡಿರುವುದು ಉತ್ಪ್ರೇಕ್ಷೆ ಏನೂ ಅಲ್ಲ.
ಕೊನೆಯ ದಿನ ನಿರೀಕ್ಷೆಗೂ ಮೀರಿ ಸೇರಿದ್ದ ಕನ್ನಡಿಗರು, ಮುಂದಿನ ವರ್ಷ ಧಾರವಾಡದಲ್ಲಿ ಜಿಲ್ಲೆಯಲ್ಲಿ ನಡೆಯುವ 84ನೇ ಸಾಹಿತ್ಯ ಸಮ್ಮೇಳನದಲ್ಲಿ ಭೇಟಿಯಾಗುವ ಭರವಸೆಯೊಂದಿಗೆ ತಮ್ಮ ಊರುಗಳಿಗೆ ಮರಳಿದರು.
ಮೂರು ದಿನಗಳ ಸಾಹಿತ್ಯ, ಸಂಸ್ಕೃತಿ, ಜಾನಪದ, ವರ್ತಮಾನ, ಶಿಕ್ಷಣ, ಮಾಧ್ಯಮ, ಜಾಗತೀಕರಣ, ಮಹಿಳೆ, ಮಕ್ಕಳ ಸಾಹಿತ್ಯ, ವಚನ ಸಾಹಿತ್ಯ, ಅನುಭಾವ, ರಂಗಭೂಮಿ ಸೇರಿದಂತೆ ಹಲವು ವಿಚಾರಗಳ ಕುರಿತು ಚಿಂತನ-ಮಂಥನ ನಡೆಯಿತು. ಮೂರು ಕವಿಗೋಷ್ಠಿಗಳು, 18 ಗೋಷ್ಠಿಗಳು ಸಮ್ಮೇಳನಕ್ಕೆ ಮತ್ತಷ್ಟು ರಂಗು-ಬೆರಗು ತುಂಬಿದವು. ಮುಖ್ಯವೇದಿಕೆಯಲ್ಲಿ ರಾತ್ರಿ 11 ಗಂಟೆಯಾದರೂ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿನಿಧಿಗಳಿಗೆ ಮುದ ನೀಡಿದವು.
ಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾ
ಮಳಿಗೆಗಳಿಗೆ ಭೇಟಿ ನೀಡಿದ ಸಹಸ್ರಾರು ಸಾಹಿತ್ಯ ಪ್ರೇಮಿಗಳು ಪುಸ್ತಕ ಖರೀದಿಸದೆ ಅಲ್ಲಿಂದ ತೆರಳಲಿಲ್ಲ. ಊರ ಜಾತ್ರೆಯ ಸ್ವರೂಪ ಸಾಹಿತ್ಯ ಸಮ್ಮೇಳನಕ್ಕೆ ಬಂದಿತ್ತು. ಪುಸ್ತಕ ಮಾತ್ರವಲ್ಲದೇ ವಿವಿಧ ಬಗೆ ವಸ್ತುಗಳು ವೇದಿಕೆ ಸುತ್ತಮುತ್ತ ಭರದಿಂದ ಮಾರಾಟವಾದವು.
ಸಾಹಿತ್ಯ
ಸಮ್ಮೇಳನದಲ್ಲಿ
ಕೈಗೊಂಡ
ಮೂರು
ನಿರ್ಣಯ
ಮೈಸೂರಿನ
ಜನತೆಗೆ
ವಂದನೆ
ಸಲ್ಲಿಸಿ
ಮೊದಲ
ನಿರ್ಣಯ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಎಲ್ಲ ವರದಿಗಳ ಅನುಷ್ಠಾನಕ್ಕೆ ಎರಡನೇ ನಿರ್ಣಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಗೆ ಒತ್ತಾಯಿಸಲು ಮೂರನೇ ನಿರ್ಣಯ
ಹೊಟ್ಟೆ ತಣಿಸಿದ ಭರಪೂರ ಭೋಜನ
ಮೂರು ದಿನಗಳ ಸಮ್ಮೇಳನ ಸಮಾರೋಪಗೊಳ್ಳುವ ಹಂತದವರೆಗೂ ನಡೆದ ಭೋಜನ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟು ಮತ್ತು ಶುಚಿತ್ವದ ಮೂಲಕ ಗಮನ ಸೆಳೆದು ಆಯೋಜಕರ ಕಾರ್ಯತತ್ಪರತೆ ಬಗ್ಗೆ ಮೆಚ್ಚುಗೆ ಮೂಡಿಸಿತು. ಸಮ್ಮೇಳನದ ಪ್ರಯುಕ್ತ ಶಾಲಾ- ಕಾಲೇಜುಗಳಿಗೆ ರಜಾ ಇದ್ದುದರಿಂದ ವಿದ್ಯಾರ್ಥಿಗಳೂ ಸಮ್ಮೇಳನದ ಅಂಗಳದಲ್ಲಿ ಕಾಣಿಸಿಕೊಂಡರು.
ಸಣ್ಣ-ಪುಟ್ಟ ಅಪಸವ್ಯಗಳು
ಇಲ್ಲಿ ಕಂಡ ಸಂಭ್ರಮ, ಸಡಗರ ಕಂಡು ಬೆರಗಾಗುವ ಸರದಿ ವಿದ್ಯಾರ್ಥಿಗಳದಾಗಿತ್ತು. ಪ್ರಧಾನ ವೇದಿಕೆ, ಸಮನಾಂತರ ವೇದಿಕೆ, ಮಳಿಗೆಗಳಲ್ಲಿ ವಿದ್ಯಾರ್ಥಿಗಳ ಕಲರವ ಕೇಳಿಬಂತು. ಈ ಸಮ್ಮೇಳನದಲ್ಲೂ ಊಟ, ತಿಂಡಿ, ಒಒಡಿ ಪತ್ರಕ್ಕೆ ಸಂಬಂಧಿಸಿದ ಪ್ರತಿಭಟನೆಗಳು ಪದೇ ಪದೇ ನಡೆದವು. 3 ದಿನ ಫುಟ್ ಪಾತ್ ತೆರವು, ಒಒಡಿ, ಕಿಟ್, ಪೇಜಾವರ ಶ್ರೀಗಳ ಹೇಳಿಕೆ ಖಂಡಿಸಿ ಪ್ರತಿಭಟನೆ ಹೊರತುಪಡಿಸಿದರೆ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.
ಅವಧಿ ಮೀರಿದ ಸಮಾರೋಪ
ಕೊನೆ ದಿನವಾದ ಭಾನುವಾರ ಅಕ್ಷರ ಜಾತ್ರೆಗೆ ಜನ ಸಾಗರವೇ ಹರಿದು ಬಂದಿತು. ನಿಗದಿತ ಸಮಯಕ್ಕೆ ಮುಗಿಯಬೇಕಾಗಿದ್ದ ಸಮಾರೋಪ ಸಮಾರಂಭ ಅವಧಿ ಮೀರಿ ಸಂಪನ್ನಗೊಂಡಿತು. ಇದರಿಂದ ಸಾಂಸ್ಕೃತಿಕ ಪ್ರದರ್ಶನ ನೀಡಲು ಕಲಾವಿದರು ವೇದಿಕೆ ಪಕ್ಕದಲ್ಲಿ ನಿಂತು ಅತಂತ್ರ ಸ್ಥಿತಿಯಲ್ಲಿ ಸಿಲುಕಿ ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪುಸ್ತಕ ಮಳಿಗೆಯ ಆಕರ್ಷಣೆ
ಸಾಹಿತ್ಯ ಸಮ್ಮೇಳನಕ್ಕೆ ಕಳಶ ಪ್ರಾಯವಾಗಿರುವ ಪುಸ್ತಕ ಮಳಿಗೆಗಳು ಪ್ರಮುಖ ಆಕರ್ಷಣೆಯಾದವು. ಹೀಗಿದ್ದೂ ಅದೇಕೋ ಅಕ್ಷರ ಪ್ರೇಮ ಖರೀದಿಯಲ್ಲಿ ಕಾಣಿಸಿಕೊಳ್ಳದೆ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳಿಗೆ ಕೊಂಚ ನಿರಾಸೆಯಾಯಿತು. ಪುಸ್ತಕಗಳನ್ನು ನೋಡುವುದಕ್ಕೂ ಬರುತ್ತಿಲ್ಲವಲ್ಲ ಎನ್ನುವ ವಿಷಾದದ ಛಾಯೆಯನ್ನು ಮೂಡಿಸಿತು. ಇದು ನುಡಿ ಜಾತ್ರೆಯಷ್ಟೇ ಅಲ್ಲ ಜನ ಜಾತ್ರೆಯೂ ಆಯಿತು.
ಮಹಾರಾಜ ಕಾಲೇಜಿನ ಕೂಗಳತೆಗೆ ಸೀಮಿತ
ಕನ್ನಡ ಸಂಸ್ಕೃತಿ ಪರಂಪರೆಗಳನ್ನು ಪ್ರತಿಬಿಂಬಿಸುವ ಕನ್ನಡ ನುಡಿ ಜಾತ್ರೆಯ ಸಂಭ್ರಮ ಸಡಗರಗಳು ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತಲ ಒಂದೆರಡು ಕಿಲೋಮೀಟರ್ ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಹೋಗಿರುವ ಅನುಭವವಾಗಿದೆ. ನುಡಿ ಹಬ್ಬ ಆಯೋಜಿತ ಮಹಾರಾಜ ಕಾಲೇಜು ಮೈದಾನ ಮತ್ತು ಸುತ್ತಮುತ್ತಲ ಪ್ರದೇಶ ಹಾಗೂ ಕಿಲೋಮೀಟರ್ ದೂರದವರೆಗಿನ ರಸ್ತೆಗಳಲ್ಲಿ ಮಾತ್ರ ಕನ್ನಡ ಧ್ವಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಸ್ವಾಗತ ಕಮಾನುಗಳು ಕಾಣುತ್ತಿವೆ. ಈ ಸೀಮಿತ ಪರಿಧಿಯನ್ನು ಬಿಟ್ಟು ಹೊರ ಬಂದಿಲ್ಲ.
ಮುಂದಿನ ವರ್ಷ ಧಾರವಾಡದಲ್ಲಿ ಸಿಗೋಣ. ಕನ್ನಡ ಡಿಂಡಿಮವನ್ನು ಮೊಳಗಿಸೋಣ ಎನ್ನುವ ಆಶಯದೊಂದಿಗೆ ಸಾಹಿತ್ಯಾಭಿಮಾನಿಗಳು ವಿದಾಯ ಹೇಳಿದರು.