ಮೈಸೂರು ವಾರಿಯರ್ಸ್ ನಿಂದ ಕೆಪಿಎಲ್ ಗಾಗಿ ಟ್ಯಾಲೆಂಟ್ ಹಂಟ್
ಮೈಸೂರು, ಜುಲೈ 19 : ಗ್ರಾಮೀಣ ಭಾಗಗಳಲ್ಲಿರುವ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಲು ಕೆಪಿಎಲ್ ತಂಡ 'ಮೈಸೂರು ವಾರಿಯರ್ಸ್' ವತಿಯಿಂದ ಆಯೋಜಿಸಿದ್ದ ಪ್ರತಿಭಾನ್ವೇಷಣೆ (ಟ್ಯಾಲೆಂಟ್ ಹಂಟ್) ಶಿಬಿರದಲ್ಲಿ 240 ಯುವ ಆಟಗಾರರು ಪಾಲ್ಗೊಂಡಿದ್ದರು.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಟ್ರಯಲ್ಸ್ ನಲ್ಲಿ 70 ಬ್ಯಾಟ್ಸ್ ಮನ್ಗಳು, 82 ಆಲ್ರೌಂಡರ್ ಗಳು, 68 ಸ್ಪಿನ್ನರ್ಗಳು ಮತ್ತು 15 ವಿಕೆಟ್ ಕೀಪರ್ ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಬೆಂಗಳೂರಲ್ಲಿ ಮತ್ತೊಂದು ಕ್ರಿಕೆಟ್ ಸ್ಟೇಡಿಯಂ!
ಬೆಂಗಳೂರಿನಲ್ಲಿ ಇದೇ 15 ರಂದು ನಡೆದಿದ್ದ ಪ್ರತಿಭಾನ್ವೇಷಣೆಯಲ್ಲಿ 250 ಆಟಗಾರರು ಪಾಲ್ಗೊಂಡಿದ್ದರು. ಯಲಹಂಕದ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಟ್ರಯಲ್ಸ್ ನಲ್ಲಿ 60 ಬ್ಯಾಟ್ಸ್ ಮನ್ಗಳು, 75 ಮಧ್ಯಮ ವೇಗದ ಬೌಲರ್ಗಳು, 50 ಸ್ಪಿನ್ನರ್ಗಳು, 55 ಆಲ್ರೌಂಡರ್ ಗಳು ಮತ್ತು 10 ವಿಕೆಟ್ ಕೀಪರ್ ಗಳು ಭಾಗವಹಿಸಿದ್ದರು.
ಎರಡೂ ನಗರಗಳಲ್ಲಿ ನಡೆದ ಟ್ರಯಲ್ಸ್ ನಲ್ಲಿ ಪಾಲ್ಗೊಂಡ ಕೆಲವು ಆಟಗಾರರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಅಂತಿಮವಾಗಿ ಇಬ್ಬರಿಗೆ ಈ ಬಾರಿಯ ಕೆಪಿಎಲ್ ನಲ್ಲಿ ವಾರಿಯರ್ಸ್ ತಂಡದಲ್ಲಿ ಸ್ಥಾನ ಲಭಿಸಲಿದೆ.
2017 ರಲ್ಲಿ ನಡೆಸಿದ್ದ ನಾಲ್ಕನೇ ಅವೃತ್ತಿಯ ಪ್ರತಿಭಾನ್ವೇಷಣೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 205 ಆಟಗಾರರು ಪಾಲ್ಗೊಂಡಿದ್ದರು. ಇದರಲ್ಲಿ 43 ಮಂದಿ ಆಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.
'ಮೈಸೂರು ವಾರಿಯರ್ಸ್ ವತಿಯಿಂದ ನಡೆಸುವ ಪ್ರತಿಭಾನ್ವೇಷಣೆಗೆ ಪ್ರತಿವರ್ಷದಂತೆ ಈ ವರ್ಷವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಪ್ರತಿಭಾನ್ವೇಷಣೆಯಲ್ಲಿ ಸುಮಾರು 500 ಯುವ ಆಟಗಾರರು ಪಾಲ್ಗೊಂಡಿದ್ದಾರೆ' ಎಂದು ತಂಡದ ಮಾಲೀಕ ಅರ್ಜುನ್ ರಂಗ ತಿಳಿಸಿದ್ದಾರೆ.
ವಾರಿಯರ್ಸ್ ತಂಡದ ಮ್ಯಾನೇಜರ್ ಎಂ.ಆರ್.ಸುರೇಶ್ ಮತ್ತು ಕೋಚ್ ಆರ್.ಎಕ್ಸ್.ಮುರಳಿ ಅವರು ಆಯ್ಕೆ ಟ್ರಯಲ್ಸ್ ನಡೆಸಿಕೊಟ್ಟರು.