ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ 12 ಆನೆಗಳಿವು...
ಮೈಸೂರು, ಜುಲೈ 8 : ಈ ಬಾರಿ ದಸರಾದಲ್ಲಿ ಭಾಗವಹಿಸುವ 12 ಆನೆಗಳನ್ನು ಅರಣ್ಯಾಧಿಕಾರಿಗಳು ಆಯ್ಕೆ ಮಾಡಿ, ಅಂತಿಮಗೊಳಿಸಿದ್ದಾರೆ. ಅಷ್ಟೇ ಅಲ್ಲ, ಎರಡು ದಿನಗಳ ಕೆಳಗೆ ತಿಳಿಸಿದಂತೆ ಆಗಸ್ಟ್ 12ರಂದು ಗಜ ಪಯಣದ ಮೂಲಕ ಅರಮನೆಗೆ ಬರಮಾಡಿಕೊಳ್ಳಲು ತಾಲೀಮು ನಡೆಯುತ್ತಿದೆ.
ಮೈಸೂರು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿ ನಾಗರಾಜು ನೇತೃತ್ವದಲ್ಲಿ ಆನೆ ಶಿಬಿರಗಳಿಗೆ ಭೇಟಿ ನೀಡಿ, ಆರೋಗ್ಯವನ್ನು ಪರಿಶೀಲಿಸಲಾಯಿತು. ಬಳಿಕ ಜಂಬೂ ಸವಾರಿಗೆ 12 ಆನೆಗಳನ್ನು ಅಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಅರ್ಜುನನನ್ನು ಪರಿಶೀಲಿಸಿ, ಆರೋಗ್ಯವಾಗಿರುವುದನ್ನು ಖಚಿತಪಡಿಸಿದ್ದಾರೆ.
ಅದ್ಧೂರಿ ಮೈಸೂರು ದಸರಾಕ್ಕಾಗಿ ಪೂರ್ವಭಾವಿ ಸಭೆ
ಮತ್ತಿಗೂಡು ಶಿಬಿರದಲ್ಲಿರುವ ಅಭಿಮನ್ಯು, ಬಲರಾಮ, ದುಬಾರೆ ಶಿಬಿರದಲ್ಲಿರುವ ವಿಜಯ, ಕಾವೇರಿ, ಗೋಪಾಲಸ್ವಾಮಿ, ಹರ್ಷ, ಪ್ರಶಾಂತ, ವಿಕ್ರಮ, ಗೋಪಿ ಮತ್ತು ಕೆ.ಗುಡಿ ಶಿಬಿರದಲ್ಲಿರುವ ದುರ್ಗಾ ಪರಮೇಶ್ವರಿ, ಗಜೇಂದ್ರ ಆನೆಗಳನ್ನು ಪರಿಶೀಲಿಸಲಾಗಿದೆ.
ಈ 12 ಆನೆಗಳ ಜೊತೆಗೆ ಶ್ರೀನಿವಾಸ್ ಹಾಗೂ ಭೀಮಾ ಆನೆಯನ್ನೂ ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಒನ್ಇಂಡಿಯಾ ಕನ್ನಡಕ್ಕೆ ಬಲ್ಲ ಮೂಲಗಳು ಖಚಿತಪಡಿಸಿವೆ.
ಇದೇ ಗಜ ಪಯಣದಲ್ಲಿ ಮೊದಲ ಹಂತದಲ್ಲಿ 5 ಹಾಗೂ ಎರಡನೇ ಹಂತದಲ್ಲಿ ಉಳಿದ ಆನೆಗಳನ್ನು ಅರಮನೆಗೆ ಬರಮಾಡಿಕೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಶಿಬಿರಗಳಲ್ಲಿ ಆಯ್ಕೆಯಾದ ಆನೆಗಳ ಪಟ್ಟಿಯನ್ನು ಬೆಂಗಳೂರಿನ ಮುಖ್ಯ ಅರಣ್ಯಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು.
ಅಲ್ಲಿಂದ ಅನುಮತಿ ಪಡೆದ ನಂತರ ಆನೆಗಳನ್ನು ಅರಮನೆಗೆ ಕರೆದುಕೊಂಡು ಬರುವ ಮತ್ತು ಅದರ ಖರ್ಚು- ವೆಚ್ಚದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮೈಸೂರಿನ ಅರಣ್ಯಾಧಿಕಾರಿಗಳು ತಿಳಿಸಿದ್ದು, ಪಾರಂಪರಿಕ ನವರಾತ್ರಿ ವೈಭವಕ್ಕೆ ಮೈಸೂರಿನಲ್ಲಿ ದಿನಗಣನೆ ಆರಂಭವಾಗಿದೆ.