'ಬಂಗಲೆಯನ್ನು ನಿರ್ವಹಣೆ ಮಾಡಲಾಗದ ಜಮೀನುದಾರ': ಕಾಂಗ್ರೆಸ್ ಕಾಳೆಲೆದ ಶರದ್
ಮುಂಬೈ, ಸೆಪ್ಟೆಂಬರ್ 10: ಈ ಹಿಂದಿನಂತೆ ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತನ್ನ ಹಿಡಿತವನ್ನು ಹೊಂದಿಲ್ಲ ಎಂಬುವುದನ್ನು ಕಾಂಗ್ರೆಸ್ ಈಗ ಒಪ್ಪಿಕೊಳ್ಳಬೇಕು ಎಂದು ಗುರುವಾರ ಎನ್ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆಗೆ ಸರ್ಕಾರ ರಚನೆ ಮಾಡಿರುವ ಎನ್ಸಿಪಿ ಈಗ ಕಾಂಗ್ರೆಸ್ ವಾಸ್ತವತೆಯನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.
"ಹಿಂದೊಂದು ಕಾಲವಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತನ್ನ ಹಿಡಿತವನ್ನೇ ಹೊಂದಿತ್ತು. ಆದರೆ ಈಗ ಹಾಗೆ ಇಲ್ಲ. ಈ ವಾಸ್ತವತೆಯನ್ನು ಕಾಂಗ್ರೆಸ್ ಒಪ್ಪಿಕೊಳ್ಳಬೇಕು. ಈ ವಾಸ್ತವತೆಯನ್ನು ಒಪ್ಪಿಕೊಳ್ಳಲುವುದು ಅನಿವಾರ್ಯವಾಗಿದೆ," ಎಂದು ಕೂಡಾ ಎನ್ಸಿಪಿ ನಾಯಕ ಹೇಳಿದ್ದಾರೆ.
ರಾಷ್ಟ್ರಪತಿ ಹುದ್ದೆಗೆ ಶರದ್?: ಪ್ರಶಾಂತ್, ಗಾಂಧಿ ಭೇಟಿ ಬಳಿಕ ಊಹಾಪೋಹಕ್ಕೆ ಪವಾರ್ ಹೇಳಿದ್ದಿಷ್ಟು..
"ನಾಯಕತ್ವದ ವಿಚಾರಕ್ಕೆ ಬಂದಾಗ, ಕಾಂಗ್ರೆಸ್ನ ನನ್ನ ಸಹೋದ್ಯೋಗಿಗಳು ದೃಷ್ಟಿಕೋನವನ್ನು ಒಪ್ಪಿಕೊಳ್ಳುವ ಅಥವಾ ವಾಸ್ತವತೆಯನ್ನು ಒಪ್ಪುವ ಮನಸ್ಥಿತಿಯನ್ನು ಹೊಂದಿಲ್ಲ," ಎಂದು ಮುಂಬೈನ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ. 2024 ರ ಲೋಕ ಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಒಕ್ಕೂಟದ ನಾಯಕತ್ವ ವಹಿಸುತ್ತಾರೆ ಎಂದು ಹೇಳುವಾಗ, ಕಾಂಗ್ರೆಸ್ ನಾಯಕರು ಮಾತ್ರ ನಮಗೆ ನಾಯಕರಾಗಿ ರಾಹುಲ್ ಗಾಂಧಿ ಇದ್ದಾರೆ ಎಂದು ಹೇಳುತ್ತಾರೆ.
"ನಾಯಕತ್ವದ ವಿಚಾರಕ್ಕೆ ಬಂದಾಗ ಎಲ್ಲಾ ಪಕ್ಷಗಳು ಬಹು ಮುಖ್ಯವಾಗಿ ಕಾಂಗ್ರೆಸ್ ಬೇರೆ ನಾಯಕರನ್ನು ನಾಯಕತ್ವದ ಸ್ಥಾನದಲ್ಲಿ ನೋಡಲು ಸಿದ್ದರಾಗಿಲ್ಲ," ಎಂದು ಕೂಡಾ ಎನ್ಸಿಪಿ ನಾಯಕ ಶರದ್ ಪವಾರ್ ತಿಳಿಸಿದ್ದಾರೆ. ಇದು ಅಹಂಕಾರದಿಂದಾಗಿಯೇ ಎಂದು ಪ್ರಶ್ನೆ ಮಾಡಿದಾಗ, ಇದು ಜಮೀನುದಾರರ ಪ್ರತೀಕ ಎಂದು ಹೇಳಿದ್ದಾರೆ.
"ವಿಸ್ತಾರವಾದ ಭೂಮಿಯನ್ನು ಹೊಂದಿರುವ, ದೊಡ್ಡ ಬಂಗಲೆಯನ್ನು ಹೊಂದಿರುವ ಉತ್ತರ ಪ್ರದೇಶದ ಜಮೀನುದಾರರ ಬಗ್ಗೆ ನಾನು ಈ ಹಿಂದೆ ಹೇಳಿದ್ದೆ. ಭೂಮಿಯನ್ನು ವಶಕ್ಕೆ ಪಡೆಯುವ ಶಾಸನದ ಕಾರಣದಿಂದಾಗಿ, ಅವರ ಭೂಮಿಯು ಅವರ ಕೈ ತಪ್ಪಿ ಹೋಯಿತು. ಈ ಬಂಗಲೆಗಳು ಇರುತ್ತದೆ. ಆದರೆ ಅದನ್ನು ರಿಪೇರಿ ಮಾಡಲು, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಯಾವುದೇ ಸಾಮ್ಯರ್ಥ ಇಲ್ಲ," ಕಾಂಗ್ರೆಸ್ಗೆ ಈ ಬಂಗಲೆಯನ್ನು ಹೋಲಿಕೆ ಮಾಡಿ ಲೇವಡಿ ಮಾಡಿದ್ದಾರೆ.
"ಇನ್ನು ಈ ಜಮೀನುದಾರರ ಕೃಷಿ ಭೂಮಿಯಲ್ಲಿ ಈ ಹಿಂದಿನಂತೆ ಉತ್ತಮ ಫಸಲು, ಆದಾಯ ದೊರೆಯುತ್ತಿಲ್ಲ. ಎರಡು ಸಾವಿರದಷ್ಟಿದ್ದ ಅವರ ಭೂಮಿಯು ಈಗ 15 ರಿಂದ 20 ಕ್ಕೆ ಕುಗ್ಗಿದೆ. ಒಂದು ದಿನ ಜಮೀನುದಾರ ಬೆಳಿಗ್ಗೆ ಎದ್ದು ತನ್ನ ಸುತ್ತಲಿನ ಪ್ರದೇಶವನ್ನು ನೋಡುತ್ತಾರೆ. ಎಲ್ಲವೂ ಹಸಿರಾಗಿ ಇರುತ್ತದೆ. ಆಗ ಈ ಜಮೀನ್ದಾರ ಇದು ಎಲ್ಲಾ ಭೂಮಿಯು ತನ್ನದು ಎಂದು ಹೇಳಿಕೊಳ್ಳುತ್ತಾನೆ. ಇದು ಒಂದು ಕಾಲದಲ್ಲಿ ಆತನ್ನದ್ದು ಆಗಿತ್ತು ಆದರೆ ಈಗ ಅಲ್ಲ," ಎಂದು ಕೂಡಾ ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮಾಧ್ಯಮಗಳು ಗ್ರಾಮದ ಪಾಟೀಲ್ ಅಂದರೆ ಮುಖ್ಯಸ್ಥರಿಗೆ ಕಾಂಗ್ರೆಸ್ ಅನ್ನು ಹೋಲಿಕೆ ಮಾಡಬಹುದೇ ಎಂದು ಪ್ರಶ್ನಿಸಿದಾಗ, "ನಾನು ಆ ಹೋಲಿಕೆಯನ್ನು ಮಾಡಲು ಇಷ್ಟಪಡುವುದಿಲ್ಲ," ಎಂದಿದ್ದಾರೆ.
ಮೇಲ್ಮನೆಯಲ್ಲಿ ಮಹಿಳಾ ಸಂಸದರ ಮೇಲೆ ಹಲ್ಲೆ ಆರೋಪ: ವಿಪಕ್ಷ ನಾಯಕರಿಂದ ಪ್ರತಿಭಟನೆ
ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ತಿಂಗಳು ದೆಹಲಿಗೆ ಭೇಟಿ ನೀಡಿ ವಿರೋಧ ಪಕ್ಷಗಳ ನಾಯಕರ ಜೊತೆ ಚರ್ಚೆ ನಡೆಸಿದ್ದರು. ಈ ಮಧ್ಯೆ ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್ ಮೂವರು ಗಾಂಧಿಯರೊಂದಿಗೆ ಸಭೆ ನಡೆಸಿದ ಬಳಿಕ ಹಿರಿಯ ರಾಜಕೀಯ ನಾಯಕ ಶರದ್ ಪವಾರ್ರನ್ನು ಭೇಟಿಯಾಗಿದ್ದರು. ಆದರೆ ಶರದ್ ಪವಾರ್ ಮಾತ್ರ , ''ಈ ಸಭೆ ಯಾವುದೇ ರಾಜಕೀಯ ಚರ್ಚೆಯನ್ನು ಮಾಡಲು ಸೇರಿದಲ್ಲ,'' ಎಂದು ಹೇಳಿದ್ದರು.
"ಪ್ರಶಾಂತ್ ಕಿಶೋರ್ ನನ್ನನ್ನು ಎರಡು ಬಾರಿ ಭೇಟಿಯಾದರು. ಆದರೆ ಅದು ಪ್ರಶಾಂತ್ ಕಂಪನಿಯ ಬಗ್ಗೆ ಮಾತನಾಡಲೆಂದು ಆದ ಭೇಟಿ. 2024 ರ ಚುನಾವಣೆಯ ನಾಯಕತ್ವ ಅಥವಾ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ," ಎಂದು ಪವಾರ್ ಸ್ಪಷ್ಟನೆ ನೀಡಿದರು.
(ಒನ್ ಇಂಡಿಯಾ ಸುದ್ದಿ)