ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ನೀರು: ಯಡಿಯೂರಪ್ಪ ಭರವಸೆ
ಸಾಂಗ್ಲಿ, ಅಕ್ಟೋಬರ್ 17: ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸಾಂಗ್ಲಿ ಜಿಲ್ಲೆಯ ಜತ್ ಗ್ರಾಮದಲ್ಲಿ ಯಡಿಯೂರಪ್ಪ ಮಾತನಾಡಿದ ಅವರು, ಮಹಾರಾಷ್ಟ್ರ ಬಿಜೆಪಿಗೆ ಮತ ಹಾಕಿ ನಾವು ನಿಮಗೆ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಬೇರೆ ಅಲ್ಲ, ಕರ್ನಾಟಕ ಬೇರೆ ಅಲ್ಲ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಜೊತೆಗೂ ಚರ್ಚೆ ಮಾಡುತ್ತೇನೆ. ನೀರಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ.
ಹರಿಯುತ್ತಿರುವ ಬೋರಾ ನದಿಗೆ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಹರಿಸುವುದರಿಂದ 30-40 ಗ್ರಾಮಗಳಿಗೆ 1 ಲಕ್ಷಕ್ಕೂ ಹೆಚ್ಚು ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ನಾವು ಕೇಳಿದ್ದೇವೆ.
ತುಬಚಿ, ಬಬಲೇಶ್ವರ ಏತ ನೀರಾವರಿ ಯೋಜನೆ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ತಲುಪಿದೆ. ಈ ಗ್ರಾಮದಿಂದ 8-10 ಕಿ.ಮೀ ದೂರದಲ್ಲಿ ಹರಿಯುತ್ತಿರುವ ಬೋರಾ ನದಿಗೆ ನೀರು ಹರಿಸಲಾಗುತ್ತದೆ.
ನೀರು ಬೇಕು, ರೈತರು ಬಳೆದಂತಹ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ರೈತರ ಉತ್ಪನ್ನ ಎರಡು ಪಟ್ಟು ಹೆಚ್ಚಾಗಬೇಕು ಎಂದು ಪ್ರಧಾನಿ ಅಪೇಕ್ಷೆ ಇದೆ. ಇದನ್ನು ಪೂರೈಸಲು ನಮ್ಮ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.
ಯಡಿಯೂರಪ್ಪ ಅವರ ಹೇಳಿಕೆಗೆ ಮಹಾದಾಯಿ ಹೋರಾಟಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ನಾವು ಬೆಂಗಳೂರಲ್ಲಿ ಮಹಾದಾಯಿ ಕುರಿತು ಮುಖ್ಯಮಂತ್ರಿಯವರ ಬಳಿ ಮಾತನಾಡಲು ಬಂದಿದ್ದರೆ ಅವರು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ.
ನಮಗೆ ಇಲ್ಲಿ ಬೆಳೆಗೆ ನೀರು ಸಿಗುತ್ತಿಲಲ್ಲ ಆದರೆ ಮಹಾರಾಷ್ಟ್ರಕ್ಕೆ ನೀರು ಹರಿಸುವ ಭರವಸೆ ನೀಡಿದ್ದಾರೆ. ಅವರು ಕರ್ನಾಟಕಕ್ಕೆ ಸಿಎಂ ಅಥವಾ ಮಹಾರಾಷ್ಟ್ರದ ಸಿಎಂ ? ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.
ಕರ್ನಾಟಕದ ನೀರನ್ನು ಮಹಾರಾಷ್ಟ್ರಕ್ಕೆ ನೀಡುವುದಾಗಿ ಚುನಾವಣಾ ಪ್ರಚಾರದಲ್ಲಿ ಭರವಸೆ ಕೊಟ್ಟಿದ್ದಾರೆ. ಕರ್ನಾಟಕದ ತುಬಚಿ ಮತ್ತು ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರಕ್ಕೆ ನೀರು ಹರಿಸುವ ಭರವಸೆ ನೀಡಿದ್ದಾರೆ.
ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರಕ್ಕೆ ನೀರು ನೀಡುವ ಭರವಸೆ ನೀಡಿದ್ದಾರೆ. ಮಹಾದಾಯಿ ನೀರನ್ನು ಉತ್ತರ ಕರ್ನಾಟಕಕ್ಕೆ ತರುವ ನಿಟ್ಟಿನಲ್ಲಿ ಇನ್ನೂ ಸರ್ಕಾರ ಕೈಕಟ್ಟಿಕುಳಿತಿದ್ದಾರೆ. ಮತ್ತೊಂದೆಡೆ ಮತಕ್ಕಾಗಿ ಉತ್ತರ ಕರ್ನಾಟಕದ ನೀರನ್ನೇ ಮಹಾರಾಷ್ಟ್ರಕ್ಕೆ ಹರಿಸುವ ಭರವಸೆ.
ಲೋಕಸಭಾ ಚುನಾವಣೆ ವೇಳೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ನಿರ್ಧಾರ ಸುಲಭ ಎಂದು ಮತದಾರರಿಗೆ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಗೋವಾ ಸರ್ಕಾರದಲ್ಲಿ ಬಿಜೆಪಿಯೇ ಆಡಳಿತರೂಢವಾಗಿದ್ದರೂ ಮಹದಾಯಿ ವಿಚಾರದಲ್ಲಿ ಮೌನವಹಿಸಿದೆ.
ಮಹಾದಾಯಿ ನೀರು, ಕೃಷ್ಣಾ ನದಿ ನೀರು ಹಂಚಿಕೆ ಬಗೆಹರಿಸಲಾಗದ ರಾಜ್ಯ ಸರ್ಕಾರದಿಂದ ಈಗ ಚುನಾವಣೆಗಾಗಿ ಮಹಾರಾಷ್ಟ್ರಕ್ಕೆ ರಾಜ್ಯದ ನೀರು ಹರಿಸುವ ಭರವಸೆ ನೀಡಿದೆ.