ಉಗ್ರ ಬುರ್ಹಾನ್ ವಾನಿಯನ್ನು ಸಾಯಿಸಲು ಬಿಡುತ್ತಿರಲಿಲ್ಲ: ಕಾಂಗ್ರೆಸ್ ನಾಯಕ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿಯನ್ನು ಕೊಲ್ಲಲು ಬಿಡುತ್ತಿರಲಿಲ್ಲ ಎಂದ ಮುಂಬೈ ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್. ಕಳೆದ ವರ್ಷ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ ಉಗ್ರ ಬುರ್ಹಾನ್ ವಾನಿ.
ಮುಂಬೈ, ಜುಲೈ 7: ಕಾಶ್ಮೀರದಲ್ಲಿ ತಮ್ಮ ಅಧಿಕಾರವಿದ್ದಿದ್ದರೆ, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಬುರ್ಹಾನ್ ವಾನಿಯವರನ್ನು ಸಾಯಿಸಲು ಬಿಡುತ್ತಿರಲಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥ ಸುಫುದ್ದೀನ್ ಸೋಜ್ ಹೇಳಿದ್ದಾರೆ.
ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ 800 ಕೋಟಿ ರು ಸುಪಾರಿ!
ಕಳೆದ ವರ್ಷ ಕಾಶ್ಮೀರದಲ್ಲಿ ನಡೆದಿದ್ದ ಭಾರತೀಯ ಸೇನೆ ಹಾಗೂ ಕಾಶ್ಮಿರ ಉಗ್ರವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಬುರ್ಹಾನ್ ವಾನಿ ಸಾವಿಗೀಡಾಗಿದ್ದ.
ವಿವಾದವಾಗಿ ಪರಿವರ್ತನೆಗೊಳ್ಳಬಹುದಾದ ತಮ್ಮ ಹೇಳಿಕೆಗೆ ಸಮರ್ಥನೆಯೊಂದನ್ನೂ ನೀಡಿರುವ ಸೈಫುದ್ದೀನ್,''ಬುರ್ಹಾನ್ ವಾನಿಯವರನ್ನು ನಾನು ಮನವೊಲಿಸುತ್ತಿದ್ದೆ. ಭಾರತ, ಕಾಶ್ಮೀರ ಹಾಗೂ ಪಾಕಿಸ್ತಾನಗಳ ನಡುವಿನ ಬಾಂಧವ್ಯವನ್ನು ನಾನು ಆತನಿಗೆ ಬಿಡಿಸಿಹೇಳುತ್ತಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಕಾಶ್ಮೀರ ಜನತೆಯ ನೋವಿಗೆ ನಮ್ಮ ಸಹಾನುಭೂತಿಯಿದೆ'' ಎಂದಿದ್ದಾರೆ ಅವರು.
ಆದರೆ, ಕಾಶ್ಮೀರದ ಪ್ರತ್ಯೇಕತಾವಾದಿಗಳ ಕಣ್ಮಣಿಯಾಗಿದ್ದ ಈ ವ್ಯಕ್ತಿಯ ಸಾವು ಕಾಶ್ಮೀರದಲ್ಲಿ ಭಾರೀ ಗಲಭೆ ಹಾಗೂ ಹಿಂಸಾಚಾರಕ್ಕೆ ನಾಂದಿ ಹಾಡಿತ್ತು. ಸುಮಾರು 53 ದಿನಗಳ ಕಾಲ ನಡೆದ ಈ ಹಿಂಸಾಚಾರದಲ್ಲಿ ಸುಮಾರು 78 ಜನರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳು ಅಸುನೀಗಿದ್ದರು.
ಭಾರತೀಯ ಭದ್ರತಾ ಪಡೆಗಳ ಗುಂಡಿಗೆ ಕಳೆದ ವರ್ಷ ಬಲಿಯಾಗಿದ್ದ ಬುಹ್ರಾನ್ ವಾನಿಯ ಅವರ ಮೊದಲ ಪುಣ್ಯತಿಥಿ ಆಚರಣೆಯನ್ನು ಕಾಶ್ಮೀರದಲ್ಲಿನ ಆತನ ಅಭಿಮಾನಿಗಳು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಸೈಫುದ್ದೀನ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.