ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ...: ಮಾಜಿ ಮಿತ್ರ ಪಕ್ಷವನ್ನು ಕೆಣಕಿದ ಉದ್ಧವ್ ಠಾಕ್ರೆ
ಮುಂಬೈ ಅಕ್ಟೋಬರ್ 15: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಾಮೆಂಟ್ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಶುಕ್ರವಾರ ತಮ್ಮ ಮಾಜಿ ಮಿತ್ರ ಭಾರತೀಯ ಜನತಾ ಪಕ್ಷವನ್ನು ತರಾಟೆ ತೆಗೆದುಕೊಂಡರು.
ತಮ್ಮ ಶಿವಸೇನೆ ಪಕ್ಷದ ವಾರ್ಷಿಕ ದಸರಾ ಮೆರವಣಿಗೆ ನಂತರ ಷಣ್ಮುಖಾನಂದ ಸಭಾಂಗಣದಲ್ಲಿ ಮಾತನಾಡಿದ ಠಾಕ್ರೆ ಅವರು, "ಬಿಜೆಪಿಯು ವೀರ ಸಾವರ್ಕರ್ ಅಥವಾ ಮಹಾತ್ಮ ಗಾಂಧಿಯವರನ್ನು ಅರ್ಥಮಾಡಿಕೊಂಡಿಲ್ಲ. ಠಾಕ್ರೆ, ತಮ್ಮ ಭಾಷಣದಲ್ಲಿ ಮಹಾರಾಷ್ಟ್ರದಲ್ಲಿ ಬರುವ ದೇಗ್ಲೂರು ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಸೇನಾ ಶಾಸಕರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದಕ್ಕಾಗಿ ಲೇವಡಿ ಮಾಡಿದರು. "ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ" ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಆಮದು ಮಾಡಿಕೊಳ್ಳಬೇಕು" ಎಂದು ಅವರು ವ್ಯಂಗ್ಯವಾಡಿದ್ದಾರೆ.
ಅಂಡಮಾನ್ನ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಯಾಗಿದ್ದ ಸಾವರ್ಕರ್ಗೆ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆಯುವಂತೆ ಗಾಂಧಿ ಸಲಹೆ ನೀಡಿದ್ದರು ಎಂದು ಹೇಳುವ ಮೂಲಕ ರಾಜನಾಥ್ ಸಿಂಗ್ ಇತ್ತೀಚೆಗೆ ವಿವಾದಕ್ಕೆ ಕಾರಣರಾದರು.
ಎರಡು ಪಕ್ಷಗಳ ಮೈತ್ರಿ 2019 ರಲ್ಲಿ ಕೊನೆಗೊಂಡ ನಂತರ ಸೇನೆಯನ್ನು ಭ್ರಷ್ಟರೆಂದು ಕರೆದಿದ್ದಕ್ಕಾಗಿ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. "ಮಹಾರಾಷ್ಟ್ರವನ್ನು ಯಾವಾಗಲೂ ವಿಭಿನ್ನ ದೃಷ್ಟಿಕೋನದಿಂದ ನೋಡಲಾಗಿದೆ. ಮಹಾರಾಷ್ಟ್ರದಲ್ಲಿ ಏನಾದರೂ ಸಂಭವಿಸಿದಲ್ಲಿ, ಇಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ ಎಂದು ಅವರು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಇದೇ ಆಗಿದ್ದರೆ, ಉತ್ತರ ಪ್ರದೇಶದಲ್ಲಿ ಏನಾಯಿತು?"ಪ್ರತಿಭಟನೆಯ ವೇಳೆ ಹಿಂಸಾಚಾರದಲ್ಲಿ ರೈತರು ಸಾವನ್ನಪ್ಪಿದ ಲಖಿಂಪುರಿ ಖೇರಿ ಘಟನೆಯ ಬಗ್ಗೆ ಏನ್ ಹೇಳ್ತಾರೆ ಎಂದು ಠಾಕ್ರೆ ಕೇಳಿದರು.
"ಹಿಂದುತ್ವದ ಐಕಾನ್ ಆದ ವೀರ ಸಾರ್ವಕರ್ ಅಂಡಮಾನ್ ಜೈಲಿನಲ್ಲಿ ಇದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಾವರ್ಕರ್ಗೆ ಹೇಳಿದ್ದು ಮಹಾತ್ಮ ಗಾಂಧಿಜಿ," ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೊಂಡಿದ್ದಾರೆ.
ಸಾರ್ವಕರ್ ಕುರಿತಾದ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಸಾವರ್ಕರ್ಗೆ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದ್ದು ಗಾಂಧೀಜಿ. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಸಾವರ್ಕರ್ ನೀಡಿದ ಕೊಡುಗೆಯನ್ನು ಕೆಲವು ಸಿದ್ಧಾಂತವನ್ನು ಅನುಸರಿಸುವವರು ನಿಂದಿಸಿದ್ದಾರೆ. ಅದನ್ನು ಇನ್ನು ಮುಂದೆ ಸಹಿಸಲಾಗದು," ಎಂದು ಕೂಡಾ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು.
''ವೀರ ಸಾವರ್ಕರ್: ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ'' ಎಂಬ ಪುಸ್ತಕವನ್ನು ಉದಯ್ ಮಹೂರ್ಕರ್ ಮತ್ತು ಚಿರಾಯು ಪಂಡಿತ್ ಬರೆದಿದ್ದಾರೆ ಮತ್ತು ರೂಪಾ ಪ್ರಕಟಣೆಯು ಪುಸ್ತಕವನ್ನು ಪ್ರಕಟಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ಧೀನ್ ಓವೈಸಿ, "ಬಿಜೆಪಿಯು ಶೀಘ್ರದಲ್ಲೇ ಸಾವರ್ಕರ್ ಅನ್ನು ರಾಷ್ಟ್ರಪಿತ ಎಂದು ಘೋಷಣೆ ಮಾಡುತ್ತದೆ," ಎಂದು ಹೇಳಿದ್ದರು.
"ಬಿಜೆಪಿಯು ತನ್ನದೇ ಆದ, ವಿಕೃತವಾದ ಇತಿಹಾಸವನ್ನು ಪ್ರಸ್ತುತ ಪಡಿಸುತ್ತಿದೆ. ಹೀಗೆಯೇ ಮುಂದುವರಿದರೆ ಇನ್ನು ಬಿಜೆಪಿಯವರು ಶೀಘ್ರದಲ್ಲೇ, ರಾಷ್ಟ್ರಪಿತ ಮಹಾತ್ಮ ಗಾಂಧಿಯ ಬದಲಾಗಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಆರೋಪವನ್ನು ಹೊತ್ತಿರುವ ಸಾವರ್ಕರ್ ಅನ್ನು ದೇಶದ ಪಿತಾಮಹ ಎಂದು ಹೇಳುತ್ತಾರೆ," ಎಂದು ಓವೈಸಿ ದೂರಿದ್ದಾರೆ.
ರಾಜನಾಥ್ ಸಿಂಗ್ಗೆ ಟಾಂಗ್ ನೀಡಿರುವ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, "ಜೈಲಿನಲ್ಲಿ ಇದ್ದ ಸಾವರ್ಕರ್ ಜೊತೆಯಲ್ಲಿ ಮಹಾತ್ಮ ಗಾಂಧಿ ಮಾತನಾಡಿದ್ದು ಹೇಗೆ," ಎಂದು ಪ್ರಶ್ನಿಸಿದ್ದಾರೆ. 1925 ರಲ್ಲಿ ತಾನು ಕ್ಷಮಾದಾನ ಅರ್ಜಿ ಸಲ್ಲಿಸಿ ಜೈಲಿನಿಂದ ಹೊರ ಬಂದ ಬಳಿಕ ಸಾವರ್ಕರ್ ಎರಡು ದೇಶಗಳ ಸಿದ್ಧಾಂತದ ಬಗ್ಗೆ ಮಾತನಾಡಿದ್ದರು," ಎಂದು ಬಘೇಲ್ ಆರೋಪ ಮಾಡಿದ್ದಾರೆ.