ಶೇ 99ರಷ್ಟು ವಸ್ತುಗಳು ಶೇ 18ರ ಜಿಎಸ್ ಟಿ ಪಟ್ಟಿಯೊಳಗೆ: ಮೋದಿ
ಮುಂಬೈ, ಡಿಸೆಂಬರ್ 18: ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಇನ್ನಷ್ಟು ಸರಳೀಕರಣಗೊಳಿಸುವ ಸೂಚನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಶೇ 99ರಷ್ಟು ವಸ್ತುಗಳನ್ನು ಶೇ 18ರ ಜಿಎಸ್ ಟಿ ಪಟ್ಟಿಯಲ್ಲಿ ತರಲು ಸರ್ಕಾರ ಬಯಸಿರುವುದಾಗಿ ಹೇಳಿದ್ದಾರೆ.
ಜಿಎಸ್ ಟಿ ಜಾರಿಗೆ ತರುವ ಮುನ್ನ ನೋಂದಾಯಿತ ವ್ಯಾಪಾರ ಸಂಸ್ಥೆಗಳ ಸಂಖ್ಯೆ ಕೇವಲ 65 ಲಕ್ಷದಷ್ಟಿದ್ದವು. ಈಗ ಅವುಗಳ ಸಂಖ್ಯೆ 55 ಲಕ್ಷದಷ್ಟು ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಅನ್ನೂ ಹಿಗ್ಗಾಮುಗ್ಗಾ ಜಗ್ಗಾಡಿದ ಪ್ರಧಾನಿ ನರೇಂದ್ರ ಮೋದಿ
ಇಂದು ಜಿಎಸ್ ಟಿ ವ್ಯವಸ್ಥೆ ಸಾಕಷ್ಟು ವಿಸ್ತೃತಗೊಂಡಿದೆ. ಶೇ 18ರ ಜಿಎಸ್ ಟಿ ಪಟ್ಟಿಯೊಳಗೆ ಶೇ 99ರಷ್ಟು ವಸ್ತುಗಳು ಬರುವ ಸನ್ನಿವೇಶಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಶೇ 28 ಜಿಎಸ್ ಟಿಯ ಸ್ಲ್ಯಾಬ್ ಕೇವಲ ಕೆಲವೇ ವಸ್ತುಗಳಿಗೆ, ಅಂದರೆ ಐಷಾರಾಮಿ ವಸ್ತುಗಳಿಗೆ ಸೀಮಿತವಾಗಲಿದೆ ಎಂದು ಸುಳಿವು ನೀಡಿದ್ದಾರೆ.
ಜನಸಾಮಾನ್ಯರ ಬಳಕೆ ವಸ್ತುಗಳು
ಜನಸಾಮಾನ್ಯರು ಬಳಸುವ ಬಹುತೇಕ ಎಲ್ಲ ಬಗೆಯ ವಸ್ತುಗಳನ್ನು ಒಳಗೊಂಡಂತೆ ಶೇ 99ರಷ್ಟು ವಸ್ತುಗಳನ್ನು ಶೇ 18 ಅಥವಾ ಅದಕ್ಕಿಂತ ಕಡಿಮೆ ಜಿಎಸ್ಟಿ ದರದ ಪಟ್ಟಿಯೊಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಕಾಲದಿಂದ ಕಾಲಕ್ಕೆ ಬದಲಾವಣೆ
ವ್ಯಾಪಾರಿಗಳಿಗೆ ಜಿಎಸ್ ಟಿ ಪ್ರಕ್ರಿಯೆಯನ್ನು ಎಷ್ಟು ಸಾಧ್ಯವೋ ಅಷ್ಟು ಸುಗಮಗೊಳಿಸುವ ಉದ್ದೇಶವಿದೆ. ಆರಂಭದ ದಿನಗಳಲ್ಲಿ ಆಯಾ ರಾಜ್ಯಗಳಲ್ಲಿನ ಹಾಲಿ ವ್ಯಾಟ್ ಅಥವಾ ಅಬಕಾರಿ ಸುಂಕ ಸಂರಚನೆಗೆ ಅನುಗುಣವಾಗಿ ಜಿಎಸ್ ಟಿಯನ್ನು ಸಿದ್ಧಪಡಿಸಲಾಗಿತ್ತು. ಕಾಲದಿಂದ ಕಾಲಕ್ಕೆ ಚರ್ಚೆ, ಸಮಾಲೋಚನೆಗಳು ನಡೆದು ತೆರಿಗೆ ವ್ಯವಸ್ಥೆ ಸುಧಾರಿಸಲು ಆರಂಭಿಸಿತು ಎಂದು ಮೋದಿ ಹೇಳಿದ್ದಾರೆ.
ದೇಶವು ದಶಕಗಳಿಂದ ಜಿಎಸ್ ಟಿಯನ್ನು ಬೇಡುತ್ತಿತ್ತು. ವ್ಯಾಪಾರ ಮಾರುಕಟ್ಟೆಯಲ್ಲಿನ ವಿರೋಧಾಭಾಸಗಳನ್ನು ಜಿಎಸ್ ಟಿ ಜಾರಿಯು ತೊಡೆದು ಹಾಕಿದೆ ಮತ್ತು ವ್ಯವಸ್ಥೆಯ ದಕ್ಷತೆ ಸುಧಾರಿಸುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಆರ್ಥಿಕತೆಯು ಕೂಡ ಪಾರದರ್ಶಕವಾಗುತ್ತಿದೆ ಎಂದಿದ್ದಾರೆ.
ಅಪನಗದೀಕರಣ, ಜಿಎಸ್ ಟಿಯಿಂದ ಭಾರತ ನಲುಗಿದೆ ಎಂದ ರಘುರಾಮ್ ರಾಜನ್
ಭ್ರಷ್ಟಾಚಾರ 'ಚಲ್ತಾ ಹೈ' ಎಂಬಂತಾಗಿದೆ
ಭಾರತದಲ್ಲಿ ಭ್ರಷ್ಟಾಚಾರವನ್ನು ಸಹಜ ಎಂಬಂತೆ ಪರಿಗಣಿಸಲಾಗುತ್ತಿದೆ. ಅದು 'ಚಲ್ತಾ ಹೈ' ಎಂಬಂತಿದೆ. ಯಾರಾದರೂ ಅದರ ವಿರುದ್ಧ ಮಾತನಾಡಲು ಧ್ವನಿ ಎತ್ತಿದರೆ ಇನ್ನೊಬ್ಬರು ಯಾರಾದರೂ 'ಇದು ಭಾರತ. ಹೀಗೆಯೇ ಇರುವುದು' ಎನ್ನುತ್ತಾರೆ ಎಂದು ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ.
ಅದು ಏಕೆ ಹೀಗೆಯೇ ಇರಬೇಕು? ಕಂಪೆನಿಗಳು ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಇರುವಾಗ, ಅವರಿಗೆ ಮತ್ತು ಅವರ ಮಾಲೀಕರಿಗೆ ಏನೂ ಆಗುವುದಿಲ್ಲ.
ಏಕೆಂದರೆ ಕೆಲವು ವಿಶೇಷ ವ್ಯಕ್ತಿಗಳ ಪ್ರಭಾವದಿಂದ ಅವರು ತನಿಖೆಗೆ ಒಳಪಡುವುದರಿಂದ ರಕ್ಷಣೆ ಪಡೆದುಕೊಳ್ಳಲು ಆರಂಭಿಸಿದ್ದಾರೆ ಎಂದಿದ್ದಾರೆ.
ಹೊಸ ಭಾರತದ ಕನಸು
2014ರವರೆಗೂ ದೇಶದ ಶೇ 55ರಷ್ಟು ಮನೆಗಳಿಗೆ ಮಾತ್ರ ಅಡುಗೆ ಅನಿಲದ ಸಂಪರ್ಕವಿತ್ತು. ಅದನ್ನು ಕಲ್ಪಿಸಿಕೊಳ್ಳಿ. ಅದಕ್ಕೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಕೆಲಸ ಮಾಡುತ್ತಿದ್ದು, ದಶಕಗಳಿಂದ ನಡೆದುಕೊಂಡು ಬಂದಿದ್ದ ಅಭ್ಯಾಸವನ್ನು ಅಂತ್ಯಗೊಳಿಸುವ ಅಗತ್ಯವಿದೆ. ಹೊಸ ಭಾರತವನ್ನು ಕಟ್ಟುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.