ಬುಲೆಟ್ ರೈಲು ಯೋಜನೆ ಅನುಷ್ಠಾನಗೊಳ್ಳಲು ಬಿಡೆವು: ಠಾಕ್ರೆ
ಮುಂಬೈ, ಸೆಪ್ಟೆಂಬರ್ 30: ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈವರೆಗೆ ನಿರ್ಮಾಣವಾಗಲಿರುವ ಬುಲೆಟ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎಸ್ ಎನ್) ಅಧ್ಯಕ್ಷ ರಾಜ್ ಠಾಕ್ರೆ ಗುಡುಗಿದ್ದಾರೆ.
ನಗರದ ಎಲ್ಫಿನ್ ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಸೆ. 29ರಂದು ಕಾಲ್ತುಳಿತಕ್ಕೆ ಸಿಲುಕಿ ಸುಮಾರು 23 ಜನರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅವರು, ''ಮೋದಿ ಸರ್ಕಾರ ಮೊದಲು ಮುಂಬೈನ ರೈಲ್ವೆ ನಿಲ್ದಾಣಗಳಲ್ಲಿನ ಸಮಸ್ಯೆಗಳು ಬಗೆ ಹರಿಸಲಿ. ಆನಂತರ ಬುಲೆಟ್ ರೈಲಿನ ಬಗ್ಗೆ ಮಾತನಾಡಲಿ. ಇಲ್ಲವಾದರೆ, ಅವರ ಬುಲೆಟ್ ರೈಲಿನ ಯೋಜನೆ ಕಾರ್ಯಗತವಾಗಲು ಎಂಎಸ್ ಎನ್ ಬಿಡುವುದಿಲ್ಲ'' ಎಂದು ಗುಡುಗಿದ್ದಾರೆ.
ಕೇಂದ್ರ ಸರ್ಕಾರದ ಜತೆಗೆ ದಾವೂದ್ ಸಂಧಾನ ಮಾತುಕತೆ: ಠಾಕ್ರೆ
ತಮ್ಮ ಮಾತನ್ನು ಮುಂದುವರಿಸಿರುವ ಅವರು, ''ಬುಲೆಟ್ ರೈಲು ಯೋಜನೆ ಅಂಗವಾಗಿ ಮುಂಬೈನಲ್ಲಿ ಕಟ್ಟಬೇಕಿರುವ ರೈಲು ನಿಲ್ದಾಣದ ಅಡಿಪಾಯಕ್ಕೆ ಒಂದು ಇಟ್ಟಿಗೆಯನ್ನೂ ಹಾಕಲು ನಾವು (ಎಂಎಸ್ ಎನ್) ಬಿಡುವುದಿಲ್ಲ. ಬುಲೆಟ್ ರೈಲು ಯೋಜನೆಯನ್ನು ಮೋದಿಯವರು ತಮ್ಮ ಸ್ವಂತ ರಾಜ್ಯವಾದ ಗುಜರಾತ್ ನಲ್ಲಿ ಮಾಡಿಕೊಳ್ಳಲಿ'' ಎಂದು ಅವರು ಎಚ್ಚರಿಕೆ ನೀಡಿದರು.
ಇಂಥ ಪ್ರಧಾನಿ ಬಂದಿರಲಿಲ್ಲ: ಠಾಕ್ರೆ
ಆನಂತರ, ತಮ್ಮ ಟೀಕಾಸ್ತ್ರವನ್ನು ಮೋದಿ ಕಡೆಗೆ ತಿರುಗಿಸಿದ ರಾಜ್ ಠಾಕ್ರೆ, ''ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ಭಾರತ ಕಂಡಿಲ್ಲ'' ಎಂದರು.
ಸುಳ್ಳು ಹೇಳುವವರನ್ನು ನೋಡಿಲ್ಲ
ಆಶ್ವಾಸನೆಗಳನ್ನು ನೀಡುವುದು ಆನಂತರ, ಅವುಗಳನ್ನು ಚುನಾವಣಾ ಪ್ರಚಾರ ತಂತ್ರ ಎಂದು ತಳ್ಳಿ ಹಾಕುವುದು ಮಾಡುತ್ತಾರೆ. ಒಬ್ಬ ವ್ಯಕ್ತಿ ಇಷ್ಟು ಪ್ರಮಾಣದಲ್ಲಿ ಸುಳ್ಳು ಹೇಳುವುದನ್ನು ನಾನಂತೂ ನೋಡಿಲ್ಲ'' ಎಂದು ಅವರು ಆರೋಪಿಸಿದರು.
ಸುರೇಶ್ ಪ್ರಭುವೇ ಉತ್ತಮರಾಗಿದ್ದರು: ಠಾಕ್ರೆ
ಇತ್ತೀಚೆಗೆ ರೈಲ್ವೆ ಸಚಿವರಾಗಿ ನೇಮಕಗೊಂಡಿರುವ ಪಿಯೂಶ್ ಚಾವಲ್ ಅವರನ್ನೂ ಟೀಕಿಸಿದ ಅವರು, ''ಪಿಯೂಶ್ ಚಾವಲ್ ಒಬ್ಬ ನಿಷ್ಪ್ರಯೋಜಕ ಸಚಿವ. ಇವರಿಗಿಂತ ಮುಂಚೆ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ಅವರೇ ರೈಲ್ವೆ ಇಲಾಖೆಯನ್ನು ಮುನ್ನಡೆಸುವಷ್ಟು ಸಮರ್ಥರಾಗಿದ್ದರು'' ಎಂದು ಅವರು ತಿಳಿಸಿದರು.
ಗಂಭೀರವಾಗಿ ಚಿಂತನೆ ಮಾಡಲಿಲ್ಲ
ಎಲ್ಪಿನ್ ಸ್ಟೋನ್ ರೈಲು ನಿಲ್ದಾಣದಲ್ಲಿ ಸೆ. 29ರಂದು ಸಂಭವಿಸಿದ ದುರಂತವನ್ನೂ ಮೊದಲೇ ಮನಗಂಡು ಇಲ್ಲೊಂದು ಹೊಸ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಈ ಹಿಂದೆಯೇ ಎಂಎಸ್ಎನ್ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದಿತ್ತು. ಆದರೆ, ಯಾರೂ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತಿಸಲೇ ಇಲ್ಲ ಎಂದು ಅವರು ತಿಳಿಸಿದ್ದಾರೆ.