ಸಚಿವ ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ದೂರು ಹಿಂಪಡೆದ ಮಹಿಳೆ
ಮುಂಬೈ, ಜನವರಿ 22: ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದ್ದ ಗಾಯಕಿ ರೇಣು ಶರ್ಮಾ ದೂರನ್ನು ವಾಪಸ್ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾನು ಸಚಿವ ಧನಂಜಯ್ ಮುಂಡೆ ವಿರುದ್ಧ ಸಲ್ಲಿಸಿದ್ದ ದೂರನ್ನು ಹಿಂಪಡಯುತ್ತಿರುವುದಾಗಿ ಅವರು ತಿಳಿಸಿದ್ದು, ಯಾವುದೇ ಕಾರಣ ಉಲ್ಲೇಖಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವರ ವಿರುದ್ಧ ಅತ್ಯಾಚಾರ ಆರೋಪಕ್ಕೆ ದೊಡ್ಡ ತಿರುವು; ಮಹಿಳೆ ವಿರುದ್ಧವೇ ಕೇಸ್
ಜನವರಿ 11ರಂದು ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ವಿರುದ್ಧ 38 ವರ್ಷದ ಗಾಯಕಿ ರೇಣು ಅತ್ಯಾಚಾರ ಆರೋಪ ಮಾಡಿದ್ದರು. ತನಗೆ ಬಾಲಿವುಡ್ ನಲ್ಲಿ ಅವಕಾಶ ನೀಡುವುದಾಗಿ ಭರವಸೆ ಕೊಟ್ಟು ಸಚಿವರು ಹಲವು ಬಾರಿ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿದ್ದರು. ಆನಂತರ ಈ ಆರೋಪವನ್ನು ಅಲ್ಲಗಳೆದಿದ್ದ ಸಚಿವರು, ರೇಣು ಸಹೋದರಿ ಜೊತೆ ತಾವು ಸಂಬಂಧ ಹೊಂದಿದ್ದು, ಇವರಿಬ್ಬರೂ ಸೇರಿ ತಮ್ಮನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಸಂಬಂಧ ನವೆಂಬರ್ ತಿಂಗಳಿನಲ್ಲಿಯೇ ದೂರು ನೀಡಿರುವುದಾಗಿ ತಿಳಿಸಿದ್ದರು.
ಈ ಸಂಗತಿ ನಡೆದ ಎರಡು ದಿನಗಳ ನಂತರ ಗಾಯಕಿ ವಿರುದ್ಧ ಬಿಜೆಪಿ ಮುಖಂಡ ಕೃಷ್ಣ ಹೆಗ್ಡೆ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ರೇಣು ತಮ್ಮ ಹಿಂದೆ ಬಿದ್ದು, ತಮ್ಮ ಬಳಿ ಸಂಬಂಧ ಬೆಳೆಸುವಂತೆ 2010ರಿಂದಲೂ ಪೀಡಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.