ಅಯೋಧ್ಯೆಗೆ ಮೆಹಬೂಬಾ ಮುಫ್ತಿರನ್ನು ಕರೆದುಕೊಂಡು ಹೋಗುವಿರಾ?
ಮುಂಬೈ, ಜನವರಿ.25: ಅಯೋಧ್ಯೆಗೆ ಮೆಹಬೂಬಾ ಮುಫ್ತಿಯನ್ನು ಕರೆದುಕೊಂಡು ಹೋಗುವ ತಾಕತ್ತು ನಿಮಗಿದೆಯೇ ಎಂದು ಬಿಜೆಪಿ ನಾಯಕರನ್ನು ಶಿವಸೇನೆ ಮುಖಂಡ ಹಾಗೂ ಸಂಸದ ಸಂಜಯ್ ರಾವತ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಏರಿರುವ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾದಿ ಸರ್ಕಾರವು 100 ದಿನ ಪೂರೈಸಲಿದೆ. ಈ ಹಿನ್ನೆಲೆ ಮಾರ್ಚ್.07ರಂದು ಉತ್ತರ ಪ್ರದೇಶದ ಅಯೋಧ್ಯೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ನೀಡಲಿದ್ದಾರೆ ಎಂದು ಸಂಸದ ಸಂಜಯ್ ರಾವತ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದರು.
ಶತದಿನದ ಬಳಿಕ ಅಯೋಧ್ಯೆಗೆ ಭೇಟಿ ನೀಡಲಿರುವ ಉದ್ಧವ್ ಠಾಕ್ರೆ
ಸಂಸದ ಸಂಜಯ್ ರಾವತ್ ಟ್ವೀಟ್ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಜೊತೆ ಸೇರಿಕೊಂಡು ಸರ್ಕಾರ ರಚಿಸಿದ್ದೀರಿ. ಹೀಗಾಗಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿರನ್ನು ಸಹ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಾರಾ ಎಂದು ಬಿಜೆಪಿ ನಾಯಕರು ಸವಾಲು ಹಾಕಿದ್ದರು.
ಬಿಜೆಪಿಗೆ ಪ್ರತಿಸವಾಲ್ ಎಸೆದ ಸಂಜಯ್ ರಾವತ್:
ಬಿಜೆಪಿ ಸವಾಲಿಗೆ ಶಿವಸೇನೆ ಸಂಸದ ಸಂಜಯ್ ರಾವತ್ ಪ್ರತಿಸವಾಲ್ ಎಸೆದಿದ್ದಾರೆ. ಈ ಹಿಂದೆ ಪಿಡಿಪಿ ಜೊತೆ ಸೇರಿಕೊಂಡು ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡಿತ್ತು. ಹಾಗಿದ್ದರೆ ನೀವು ಅಯೋಧ್ಯೆ ಭೇಟಿಗೆ ತೆರಳುವಾಗ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿರನ್ನು ಕರೆದುಕೊಂಡು ಹೋಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಕಳೆದ ಜನವರಿ.22ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಅಯೋಧ್ಯೆ ಭೇಟಿ ಬಗ್ಗೆ ಸಂಜಯ್ ರಾವತ್ ಟ್ವೀಟ್ ಮಾಡಿದ್ದರು.