ಈಗ ಮದುವೆಯಾಗಲು ಸಾಧ್ಯವೇ?; ಅತ್ಯಾಚಾರ ಆರೋಪಿಗೆ ಸುಪ್ರೀಂ ಕೇಳಿದ ಪ್ರಶ್ನೆ
ನವದೆಹಲಿ/ಮುಂಬೈ, ಮಾರ್ಚ್ 01: ವ್ಯಕ್ತಿಯೊಬ್ಬ ಹಲವು ವರ್ಷಗಳ ಕಾಲ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, "ಈಗ ಆಕೆಯನ್ನು ಮದುವೆಯಾಗಲು ಸಾಧ್ಯವೇ" ಎಂದು ಸುಪ್ರೀಂ ಕೋರ್ಟ್ ಆರೋಪಿಯನ್ನು ಪ್ರಶ್ನಿಸಿದೆ.
ಸಿಜೆಐ ಎಸ್ಎ ಬೊಬ್ಡೆ ನೇತೃತ್ವದ ಸುಪ್ರೀಂ ಪೀಠ ಆತನಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆಯನ್ನೂ ನೀಡಿದೆ. ಸೋಮವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, "ಈತ ಲೈಂಗಿಕ ದೌರ್ಜನ್ಯ ಎಸಗಿದ್ದ ಹುಡುಗಿಗೆ ಈಗ 18 ವರ್ಷ ತುಂಬಿದ್ದು, ಈಕೆಯನ್ನು ಮದುವೆಯಾಗಲು ಸಿದ್ಧನಿದ್ದಾನೆಯೇ?" ಎಂದು ಆರೋಪಿ ಪರ ವಕೀಲರಿಗೆ ಪ್ರಶ್ನೆ ಕೇಳಿದೆ.
ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ ಘಟಪ್ರಭಾ ನದಿಗೆ ಎಸೆದ ದುಷ್ಕರ್ಮಿಗಳು
ಆರೋಪಿ ಸರ್ಕಾರಿ ನೌಕರನಾಗಿದ್ದು, ಮುಂಬೈನ ರಾಜ್ಯ ವಿದ್ಯುತ್ ಉತ್ಪಾದನಾ ಮಂಡಳಿಯಲ್ಲಿ ಟೆಕ್ನೀಷಿಯನ್ ಆಗಿದ್ದಾನೆ. ಅಪರಾಧ ಪ್ರಕರಣದಲ್ಲಿ ತನ್ನನ್ನು 48 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡರೆ ಕಾನೂನಿನ ಪ್ರಕಾರ, ತನ್ನನ್ನು ಕೆಲಸದಿಂದ ಅಮಾನತು ಮಾಡಲಾಗುತ್ತದೆ ಎಂದು ಉಲ್ಲೇಖಿಸಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ.
"ಆ ಹುಡುಗಿ ಮೇಲೆ ಅತ್ಯಾಚಾರ ನಡೆಸುವ ಮುನ್ನ ಈ ಬಗ್ಗೆ ಯೋಚಿಸಬೇಕಿತ್ತು. ಈಗ ಆಕೆಯನ್ನು ನೀವು ಮದುವೆಯಾಗಲು ಸಾಧ್ಯವೇ? ನಿಮಗೆ ಈ ಬಗ್ಗೆ ನಾವು ಒತ್ತಾಯಿಸುತ್ತಿಲ್ಲ" ಎಂದು ಪೀಠ ಕೇಳಿದೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ವಕೀಲರಿಗೆ ಸಮಯ ನೀಡಲಾಗಿತ್ತು. "ನಾನು ಆಕೆಯನ್ನು ಮದುವೆಯಾಗುವ ಸ್ಥಿತಿಯಲ್ಲಿಲ್ಲ. ನನಗೆ ಈಗಾಗಲೇ ಮದುವೆಯಾಗಿದೆ" ಎಂದು ಆರೋಪಿ ಹೇಳಿದ್ದಾನೆ.
ಒಂಬತ್ತನೇ ತರಗತಿ ಓದುತ್ತಿದ್ದ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದು, "ತನಗೆ ಸಹಕರಿಸದಿದ್ದರೆ ಆಸಿಡ್ ಹಾಕುವುದಾಗಿ ಆತ ಬೆದರಿಕೆ ಹಾಕಿದ್ದ. ಒಂದು ವರ್ಷದಿಂದ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ" ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ಇವರಿಬ್ಬರ ವಿಷಯ ಮನೆಯವರಿಗೆ ತಿಳಿದಿದ್ದು, ಈಕೆಗೆ 18 ವರ್ಷ ತುಂಬಿದ ನಂತರ ಮದುವೆಯಾಗಬೇಕೆಂದು ಕುಟುಂಬಗಳ ನಡುವೆ ಒಪ್ಪಂದವೂ ಆಗಿತ್ತು. ಆದರೆ 18 ವರ್ಷವಾಗುತ್ತಿದ್ದಂತೆ ಆರೋಪಿ ಮದುವೆಗೆ ನಿರಾಕರಿಸಿದ್ದಾನೆ. ಸ್ಥಳೀಯ ನ್ಯಾಯಾಲಯದಿಂದ ಈತನಿಗೆ ನಿರೀಕ್ಷಣಾ ಜಾಮೀನು ದೊರೆತಿದ್ದು, ನಂತರ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠ ಈ ಜಾಮೀನನ್ನು ರದ್ದುಪಡಿಸಿತ್ತು. ಈತನಿಗೆ ಜಾಮೀನು ನೀಡುವುದು ಕ್ರೂರತನ ಎಂದು ಹೇಳಿತ್ತು.