ಹಿಂದುತ್ವದ ಬಗ್ಗೆ ಮಾತೇ ಆಡೊಲ್ಲ: ಕಾಂಗ್ರೆಸ್ಗೆ ಶಿವಸೇನಾ ಭರವಸೆ?
ಮುಂಬೈ, ನವೆಂಬರ್ 12: ಮಹಾರಾಷ್ಟ್ರ ರಾಜಕಾರಣ ಕುತೂಹಲದ ಘಟ್ಟ ತಲುಪಿದೆ. ರಾಜ್ಯದಲ್ಲಿ ಸರ್ಕಾರ ರಚನೆಯಾಗುವುದೇ ಅಥವಾ ಇಲ್ಲವೇ ಎಂಬುದಕ್ಕೆ ಬಹುತೇಕ ಮಂಗಳವಾರವೇ ಉತ್ತರ ಸಿಗುವ ಸಾಧ್ಯತೆ ಇದೆ. ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಗೆ ಕಗ್ಗಂಟು ಮುಂದುವರಿದೆ. ಅದು ಸಾಧ್ಯವಾಗದೆ ಇದ್ದರೆ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಲಿದ್ದಾರೆ.
Breaking: ಮಹಾರಾಷ್ಟ್ರಕ್ಕೆ ಉದ್ಧವ್ ಠಾಕ್ರೆ ಸಿಎಂ, ಅಜಿತ್ ಪವಾರ್ ಡಿಸಿಎಂ?
ತನ್ನ ಷರತ್ತಿನಂತೆ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಶಿವಸೇನಾಕ್ಕೆ ಬೆಂಬಲ ನೀಡಲು ಎನ್ಸಿಪಿ ಸಿದ್ಧವಿದ್ದರೂ, ಕಾಂಗ್ರೆಸ್ ಬೆಂಬಲವಿಲ್ಲದೆ ಸರ್ಕಾರ ರಚನೆ ಅಸಾಧ್ಯ. ಬಾಹ್ಯ ಬೆಂಬಲ ನೀಡಲು ಕಾಂಗ್ರೆಸ್ ಉದ್ದೇಶಿಸಿದ್ದರೂ, ತನ್ನ ಸೈದ್ಧಾಂತಿಕ ವಿರೋಧಿಯಾದ ಶಿವಸೇನಾಗೆ ಬೆಂಬಲ ನೀಡಿದರೆ ಮುಂದೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಕಾಂಗ್ರೆಸ್ ಹೆಚ್ಚು ಚಿಂತನೆ ನಡೆಸುತ್ತಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್, ಈ ಮೈತ್ರಿಯಿಂದ ಮತ್ತಷ್ಟು ಕುಸಿತ ಉಂಟಾಗಬಹುದು ಎಂಬ ಆತಂಕದಲ್ಲಿದೆ.
ಶಿವಸೇನೆಗೆ ಇನ್ನೂ ಕಾಲ ಮಿಂಚಿಲ್ಲ; ಬಿಜೆಪಿ ಜೊತೆ ಕೈ ಜೋಡಿಸಿ ಎಂದ ಡಿವಿಎಸ್
ಮುಖ್ಯವಾಗಿ ಕಾಂಗ್ರೆಸ್ ತನ್ನ ಬೆಂಬಲಿಗರ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಳವಳ ಕೂಡ ವ್ಯಕ್ತವಾಗಿದೆ.
ಶಿವಸೇನಾಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಲು ಸಹಾಯ ಮಾಡಿದರೆ ತಾವು ಹಿಂದುತ್ವದ ಬಗ್ಗೆ ಪ್ರಸ್ತಾಪವನ್ನೇ ಮಾಡುವುದಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ಗೆ ಮಾತು ನೀಡಿದ್ದಾರೆ ಎಂಬುದು ಖಚಿತ ಮೂಲಗಳಿಂದ ತಿಳಿದುಬಂದಿರುವುದಾಗಿ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಬಿಗ್ ಶಾಕ್: ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು?
ಶಿವಸೇನಾದ 'ಹಿಂದುತ್ವ' ಸಿದ್ಧಾಂತದ ಕುರಿತು ಕಾಂಗ್ರೆಸ್ ಭಿನ್ನಾಭಿಪ್ರಾಯ ಹೊಂದಿದೆ. ಆದರೆ ಬಿಜೆಪಿಯ ಹಿಂದುತ್ವವೇ ಬೇರೆ, ತಾವು ಪ್ರತಿಪಾದಿಸುವ ಹಿಂದುತ್ವವೇ ಬೇರೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಹೀಗಿದ್ದರೂ ಶಿವಸೇನಾ ಮತ್ತು ಬಿಜೆಪಿ ಮೂರು ದಶಕಕ್ಕೂ ಹೆಚ್ಚು ಸಮಯದಿಂದ ಮೈತ್ರಿ ಮುಂದುವರಿಸಿಕೊಂಡು ಬಂದಿವೆ. ಈಗ ಶಿವಸೇನಾಕ್ಕೆ ಬೆಂಬಲ ನೀಡಿದರೆ ತನ್ನ 'ಜಾತ್ಯತೀತ' ನಿಲುವಿನೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ ಎಂಬ ಅಭಿಪ್ರಾಯ ಕಾಂಗ್ರೆಸ್ನಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.