ಬಿಜೆಪಿಯನ್ನು ಹೂತುಹಾಕುತ್ತೇನೆ ಎಂದ ಶಿವಸೇನೆ ನಾಯಕ!
ಮುಂಬೈ, ಜನವರಿ 09: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಹಗ್ಗಜಗ್ಗಾಟ ಬೀದಿಗೆ ಬಿದ್ದಿದೆ.
ಮೈತ್ರಿ ಮಾಡಿಕೊಳ್ಳದಿದ್ದರೆ ಶಿವಸೇನೆಯನ್ನು ಪುಡಿಪುಡಿ ಮಾಡುತ್ತೇನೆ ಎಂದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ನಾಯಕ ರಾಮದಾಸ್ ಕದಮ್, 'ಬಿಜೆಪಿಯನ್ನು ಹೂತುಹಾಕುತ್ತೇನೆ' ಎಂದಿದ್ದಾರೆ..
ಮೈತ್ರಿ ಮಾಡಿಕೊಳ್ಳದಿದ್ರೆ ನೀವು ಪುಡಿ ಪುಡಿ: ಶಿವಸೇನಾಗೆ ಅಮಿತ್ ಶಾ ವಾರ್ನಿಂಗ್
"ಅವರು(ಬಿಜೆಪಿ) ಈಗಾಗಲೇ ಐದು ರಾಜ್ಯಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಈಗ ಮಹಾರಾಷ್ಟ್ರಕ್ಕೆ ಬಂದು ನಮ್ಮನ್ನು ಬೆದರಿಸುವ ಪ್ರಯತ್ನ ಮಾಡಬೇಡಿ. ನಾವು ನಿಮ್ಮನ್ನು ಹೂತುಹಾಕುತ್ತೇವೆ. ನಾವು ಮೋದಿ ಅಲೆ ಇಲ್ಲದೆಯೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 63(228) ಸ್ಥಾನಗಳನ್ನು ಗೆದ್ದಿದ್ದೇವೆ ಎಂಬುದನ್ನು ಮರೆಯದಿರಿ" ಎಂದು ಕದಮ್ ಎಚ್ಚರಿಕೆ ನೀಡಿದರು.
"ಮೇಲ್ಜಾತಿಯ ಆರ್ಥಿಕ ದುರ್ಬಲರಿಗೆ ಶೇ.ಹತ್ತರಷ್ಟು ಮೀಸಲಾತಿ ನೀಡಿದ ಸರ್ಕಾರದ ಕ್ರಮ, ಚುನಾವಣಾ ಗಿಮಿಕ್" ಎಂದು ಸಹ ಅವರು ಹೇಳಿದರು.
ತಾಕತ್ತಿದ್ರೆ NDA ಯಿಂದ ಹೊರಹೋಗಿ... ಶಿವಸೇನೆಗೆ RSS ಖಡಕ್ ಎಚ್ಚರಿಕೆ?!
ಬಿಜೆಪಿ ವಿರುದ್ಧ ಸದಾ ಕಿಡಿಕಾರುತ್ತಿರುವ ಶಿವಸೇನೆಗೆ ಇತ್ತೀಚೆಗಷ್ಟೇ ಖಡಕ್ ಎಚ್ಚರಿಕೆ ನೀಡಿದ್ದ ಅಧ್ಯಕ್ಷ ಬಿಜೆಪಿ ಅಧ್ಯಕ್ಷ ಅಮಿತ್ ಶಾ, 'ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಳ್ಳದೆ ಉಳಿದರೆ ಇತರ ಮಿತ್ರ ಪಕ್ಷಗಳಂತೆ ಅದೂ ಪುಡಿಪುಡಿಯಾಗಲಿದೆ' ಎಂದಿದ್ದರು. ಅವರ ಈ ಹೇಳಿಕೆ ಶಿವಸೇನೆ ವಲಯದಲ್ಲಿ ಸಾಕಷ್ಟು ಆಕ್ರೋಶ ಹುಟ್ಟುಹಾಕಿತ್ತು.