ಆರ್ಬಿಐ - ಸರಕಾರದ ನಡುವೆ ಭುಗಿಲೆದ್ದ ಬಿಕ್ಕಟ್ಟು : ಮುಂದೆ ಏನಾಗಲಿದೆ?
ಮುಂಬೈ, ಅಕ್ಟೋಬರ್ 30 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ಬಗ್ಗೆ ಕೇಂದ್ರ ಸರಕಾರ ಮಾತ್ರ ಅಸಮಾಧಾನ ವ್ಯಕ್ತಪಡಿಸಿಲ್ಲ, ಹಲವಾರು ಹಿರಿಯ ಬ್ಯಾಂಕ್ ಅಧಿಕಾರಿಗಳು ಕೂಡ ಊರ್ಜಿತ್ ಅವರೊಂದಿಗೆ ಮುನಿಸಿಕೊಂಡಿದ್ದಾರೆ.
ಕೆಟ್ಟ ಸಾಲಗಳನ್ನು ಗುರುತಿಸಲು ಊರ್ಜಿತ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಹಿರಿಯ ಬ್ಯಾಂಕ್ ಅಧಿಕಾರಿಗಳು, ಇದರಿಂದ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ದೂರಿದ್ದಾರೆ. ಆದರೆ, ಈ ಮಾತನ್ನು ಒಪ್ಪದ ಊರ್ಜಿತ್ ಬೆಂಬಲಿಗರು, ಬ್ಯಾಂಕ್ ಉದ್ಯಮವನ್ನು ಸ್ವಚ್ಛಗೊಳಿಸಲು ಊರ್ಜಿತ್ ಅವರ ಪ್ರಯತ್ನವನ್ನು ಕೆಲವರು ಸಹಿಸುತ್ತಿಲ್ಲದಿರುವುದರಿಂದ ಅನಗತ್ಯವಾಗಿ ದೂರುತ್ತಿದ್ದಾರೆ ಎಂದಿದ್ದಾರೆ.
'ಹಸ್ತಕ್ಷೇಪ ಮಾಡಿದರೆ ದೇಶದ ಆರ್ಥಿಕತೆಗೆ ಬೆಂಕಿ ಬಿದ್ದೀತು ಹುಷಾರ್'!
ಆದರೆ, ರಘುರಾಮ್ ರಾಜನ್ ಅವರ ನಂತರ ನರೇಂದ್ರ ಮೋದಿ ಅವರ ಸರಕಾರದಿಂದಲೇ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಆಯ್ಕೆಯಾಗಿರುವ ಊರ್ಜಿತ್ ಪಟೇಲ್ ಅವರ ನಡವಳಿಕೆ ಹಲವಾರು ಹಿರಿಯ ಬ್ಯಾಂಕ್ ಅಧಿಕಾರಿಗಳಲ್ಲಿ ಅಸಮಾಧಾನ ಕಿಡಿ ಹಚ್ಚಿರುವುದಂತೂ ಸತ್ಯ.
ಅವರು ನಮ್ಮನ್ನು ಭೇಟಿಯಾಗಿ ಅಭಿಪ್ರಾಯ ಕೇಳುವುದಿಲ್ಲ ಎಂದು ಅವರ ಪ್ರಮುಖ ಆರೋಪ. ರಘುರಾಮ್ ರಾಜನ್ ಕೂಡ ಪ್ರಮುಖ ಬ್ಯಾಂಕ್ ಗಳ ಚೇರ್ಮನ್ ಗಳನ್ನು ಸಂಪರ್ಕಿಸಿ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಮತ್ತು ಊರ್ಜಿತ್ ಪಟೇಲ್ ನಡುವೆ ಸಂಪರ್ಕವೇ ಬಿದ್ದುಹೋಗಿದೆ ಎಂದು ಕಿಡಿ ಕಾರುತ್ತಿದ್ದಾರೆ.
ಮಿಸ್ಟರ್ 56ರಿಂದ ಆರ್ಬಿಐ ರಕ್ಷಿಸಿ
ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಡುವಿನ ಈ ಬಿಸಿಬಿಸಿ ವಿವಾದದ ಬಗ್ಗೆ ಟ್ವಿಟ್ಟರ್ ನಲ್ಲಿ ತಣ್ಣಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಅವರು, ಕಡೆಗೂ ಮಿಸ್ಟರ್ 56ರಿಂದ ಆರ್ಬಿಐ ಅನ್ನು ರಕ್ಷಿಸಲು ಮಿಸ್ಟರ್ ಪಟೇಲ್ ಅವರು ನಿರ್ಧರಿಸುವುದು ಸಂತೋಷದ ಸಂಗತಿ. ಎಂದೂ ಆಗದಿರುವುದಕ್ಕಿಂತ ತಡವಾದರೂ ಚಿಂತೆಯಿಲ್ಲ. ನಮ್ಮ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಭಾರತ ಎಂದೂ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಡ್ಡಿ ಗೀರಿದ್ದಾರೆ.
ಮಹಾಕಾಳೇಶ್ವರ ಪೂಜೆಯ ನಂತರ ಮೋದಿ ಮೇಲೆ ರಾಹುಲ್ ವಾಗ್ದಾಳಿ
ಹಸ್ತಕ್ಷೇಪದಿಂದ ದೇಶದ ಆರ್ಥಿಕತೆಗೆ ಬೆಂಕಿ
ಕೇಂದ್ರದ ಜೊತೆ ಇರುವ ಮುನಿಸಿನ ಬಗ್ಗೆ, ಭಿನ್ನಾಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಆರ್ಬಿಐನ ಗವರ್ನರ್ ಊರ್ಜಿತ್ ಪಟೇಲ್ ಅವರು ಮಾತಾಡುತ್ತಿರುವುದಕ್ಕೆ ಕೇಂದ್ರ ಸರಕಾರ ಕಣ್ಣು ಕೆಂಪಗೆ ಮಾಡಿಕೊಂಡಿದೆ. ಆರ್ಬಿಐನ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ಕೂಡ, ಕೇಂದ್ರದ ಹಸ್ತಕ್ಷೇಪದಿಂದ ದೇಶದ ಆರ್ಥಿಕತೆಗೆ ಬೆಂಕಿ ಬೀಳಲಿದೆ, ಹಣಕಾಸು ಮಾರುಕಟ್ಟೆಯ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಉಪನ್ಯಾಸವೊಂದರಲ್ಲಿ ಬಹಿರಂಗವಾಗಿ ಕೇಂದ್ರವನ್ನು ಟೀಕಿಸಿದ್ದರು. ಈ ರೀತಿಯ ಬಹಿರಂಗ ಟೀಕೆ ಮತ್ತು ಹೇಳಿಕೆಗಳಿಂದ ಹೂಡಿಕೆದಾರರಲ್ಲಿ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತವಾಗಲಿದೆ ಎಂದು ಕೆಲ ಹಿರಿಯ ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ಹಸ್ತಕ್ಷೇಪ ಮಾಡುವುದನ್ನು ಕೂಡಲೆ ನಿಲ್ಲಿಸಬೇಕು
ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಕೇಂದ್ರ ಸರಕಾರ ಈ ಬೆಳವಣಿಗಳಿಂದ ನಿಜಕ್ಕೂ ಆಘಾತಕ್ಕೊಳಗಾಗಿದೆ. ಆರ್ಬಿಐನಿಂದ ಕೇಂದ್ರ ಸರಕಾರದ ಬಹಿರಂಗ ಟೀಕೆಯನ್ನು ಖಂಡಿತ ನಿರೀಕ್ಷಿಸಿರಲಿಲ್ಲ ಎಂದು ಪ್ರಧಾನಿ ಕಚೇರಿಯ ಅಧಿಕಾರಿಯೊಬ್ಬರು ನುಡಿದಿದ್ದಾರೆ. ಕೇಂದ್ರ ಸರಕಾರವೇನೇ ಹೇಳಲಿ, ವಿರಲ್ ಆಚಾರ್ಯ ಅವರು ಹೇಳಿದ ಮಾತಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಗಳಿಂದಲೇ ಬೆಂಬಲ ವ್ಯಕ್ತವಾಗಿದೆ. ಕೇಂದ್ರ ಸರಕಾರ ಆರ್ಬಿಐನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಯತ್ನಿಸದೆ, ಸ್ವಾಯತ್ತತೆಯನ್ನು ಕಾಪಾಡಬೇಕು ಮತ್ತು ಹಸ್ತಕ್ಷೇಪ ಮಾಡುವುದನ್ನು ಕೂಡಲೆ ನಿಲ್ಲಿಸಬೇಕು ಎಂದು ಅಭಿಪ್ರಾಯ ಮಂಡಿಸಿದ್ದಾರೆ.
ಮೋದಿ ಜಪಾನ್ ಗೆ ಹೋಗುವ ಮುನ್ನ ಟೀಕೆ
ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ವಿರಲ್ ಆಚಾರ್ಯ ಅವರು ಕೇಂದ್ರದ ಮೇಲೆ ಟೀಕಾಪ್ರಹಾರ ಮಾಡಿರುವುದು ಹಲವಾರು ಅಚ್ಚರಿಗಳಿಗೆ ಕಾರಣವಾಗಿದೆ. ಆದರೆ, ಈ ಬಗ್ಗೆ ತುಟಿಪಿಟಕ್ ಅನ್ನದಿರಲು ವಿತ್ತ ಸಚಿವಾಲಯ ನಿರ್ಧರಿಸಿದೆ. ಊರ್ಜಿತ್ ಪಟೇಲ್ ಅವರ ಸೇವಾವಧಿ ಮುಂದಿನ ಸೆಪ್ಟೆಂಬರ್ ವರೆಗೆ ಇರಲಿದ್ದು, ನವೆಂಬರ್ 12ರಂದು ಸಂಸದೀಯ ಸ್ಥಾಯಿ ಸಮತಿಯೆದಿರು ಅವರು ಹಾಜರಾಗಬೇಕಿದೆ. ದೇಶದ ಆರ್ಥಿಕ ಸ್ಥಿತಿಯ ನಿರ್ವಹಣೆಯ ಬಗ್ಗೆ ಸಲ್ಲದ ಮಾತುಗಳು ಕೇಳಿ ಬರುತ್ತಿರುವಾಗಲೇ ಊರ್ಜಿತ್ ಅವರು ಟೀಕಾಪ್ರಹಾರ ಮಾಡುತ್ತಿರುವುದು ಕೇಂದ್ರದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೇವಾವಧಿ ಮುಗಿಯುವ ಮೊದಲೇ ಅವರನ್ನು ಪದಚ್ಯುತಗೊಳಿಸಬಹುದು ಎಂಬ ಮಾತು ಕೇಳಿಬರುತ್ತಿವೆ.
ಜಪಾನ್ ನಲ್ಲಿ ವಿಶ್ವದ ನಾಯಕರ ಪೈಕಿಯೇ ಪ್ರಧಾನಿ ಮೋದಿಗೆ ಅದ್ಭುತ ಸ್ವಾಗತ
ಲೋಕಸಭೆ ಚುನಾವಣೆಗೆ ಮುನ್ನ ಆಂತರಿಕ ಬಿಕ್ಕಟ್ಟು
2019ರ ಏಪ್ರಿಲ್ ಅಥವಾ ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಸಣ್ಣ ಉದ್ಯಮಗಳ ಸಾಲದ ಹೊರೆಯನ್ನು ಇಳಿಸಿ, ಆರ್ಥಿಕ ಅಭಿವೃದ್ಧಿಯನ್ನು ಇನ್ನಷ್ಟು ಬಲಿಷ್ಠವಾಗಿಸಲು ಹೆಚ್ಚು ಹಣವನ್ನು ಮಾರುಕಟ್ಟೆಗೆ ಬಿಡಬೇಕೆಂದು ಕೇಂದ್ರ ಸರಕಾರ ಆರ್ಬಿಐ ಅನ್ನು ಆಗ್ರಹಿಸಿದೆ. ಆದರೆ, ಆರ್ಬಿಐನ ಜಿಗುಟು ನಿಲುವು ಮತ್ತು ಸ್ಟೇಟ್ ಬ್ಯಾಂಕ್ ಗಳ ಕಠಿಣ ನಿಯಮಗಳಿಂದಾಗಿ, ಅಕ್ಟೋಬರ್ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.7ಕ್ಕಿಂತ ಕೆಳಗೆ ಬೀಳಬಹುದು ಎಂಬ ಆತಂಕವನ್ನೂ ಸೃಷ್ಟಿಸಿದೆ. ಮೊದಲೇ ಜಾಗತಿಕ ಕಚ್ಚಾ ತೈಲದ ಬೆಲೆ ದೇಶದ ಆರ್ಥಿಕ ಸ್ಥಿತಿಯನ್ನು ಕದಲುವಂತೆ ಮಾಡಿದೆ, ಅಂತಾರಾಷ್ಟ್ರೀಯ ವಹಿವಾಟುಗಳು ಸುಗಮವಾಗಿ ಸಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಆಂತರಿಕ ಬಿಕ್ಕಟ್ಟನ್ನು ಆರ್ಬಿಐ ಸೃಷ್ಟಿಸಿದರೆ ಹೇಗೆ ಎಂದು ಹೆಸರು ಹೇಳಲಿಚ್ಛಿಸದ ವಿತ್ತ ಸಚಿವಾಲಯದ ಮತ್ತೊಬ್ಬ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.