ಅವರ ಮೇಲೆಯೇ ಕತ್ತಿ ನೇತುಹಾಕಿರುವುದೇಕೆ?: ರಿಪಬ್ಲಿಕ್ ಟಿವಿ ಟಿಆರ್ಪಿ ಪ್ರಕರಣದಲ್ಲಿ ಹೈಕೋರ್ಟ್ ಪ್ರಶ್ನೆ
ಮುಂಬೈ, ಮಾರ್ಚ್ 17: ನಕಲಿ ಟಿಆರ್ಪಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ತನಿಖೆ ನಡೆಸುತ್ತಿದ್ದರೂ ಟಿಆರ್ಪಿ ತಿರುಚಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ವಿರುದ್ಧ ಯಾವ ಸಾಕ್ಷ್ಯವನ್ನೂ ಹುಡುಕಿದಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಬುಧವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎಸ್ಎಸ್ ಶಿಂದೆ ಮತ್ತು ಮನೀಶ್ ಪಿಟಾಲೆ ಅವರನ್ನು ಒಳಗೊಂಡ ನ್ಯಾಯಪೀಠ, ರಿಪಬ್ಲಿಕ್ ಟಿವಿ ವಾಹಿನಿಗಳ ಮಾಲೀಕ ಸಂಸ್ಥೆ ಎಆರ್ಜಿ ಔಟ್ಲೀರ್ ಮೀಡಿಯಾವು ತನ್ನ ಚಾನೆಲ್ ಹಾಗೂ ಉದ್ಯೋಗಿಗಳ ವಿರುದ್ಧ ಟಿಆರ್ಪಿ ಹಗರಣದಲ್ಲಿ ಅಪರಾಧ ವಿಚಾರಣೆ ಪ್ರಕ್ರಿಯೆ ಆರಂಭಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು,
ಟಿಆರ್ಪಿ ಹಗರಣ: ಅರ್ನಬ್ ಗೋಸ್ವಾಮಿ ಮಧ್ಯಂತರ ರಕ್ಷಣೆ ವಿಸ್ತರಣೆ
ಮುಂಬೈ ಪೊಲೀಸರು ಎರಡು ಆರೋಪಪಟ್ಟಿಗಳನ್ನು ಸಲ್ಲಿಸಿದ್ದರೂ ರಿಪಬ್ಲಿಕ್ ಟಿವಿ ವಿರುದ್ಧ ಯಾವುದೇ ಪುರಾವೆ ಅವರಿಗೆ ದೊರೆತಿಲ್ಲ ಎಂದು ಕೋರ್ಟ್ ಗಮನಿಸಿತು.
'2020ರ ಅಕ್ಟೋಬರ್ನಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ನಾವೀಗ 2021ರ ಮಾರ್ಚ್ ತಿಂಗಳಲ್ಲಿ ಇದ್ದೇವೆ. ಈ ವಿಚಾರದಲ್ಲಿ ಎಲ್ಲವನ್ನೂ ಕಲಸು ಮೇಲೋಗರ ಮಾಡಿರುವಂತಿರುವುದು ಕಾಣಿಸುತ್ತಿದೆ. ಅವರ ತಲೆಯ ಮೇಲೆ ಏಕೆ ಕತ್ತಿಯನ್ನು ನೇತುಹಾಕಿರಿಸಿದ್ದೀರಿ? ಕಳೆದ ಮೂರು ತಿಂಗಳಿನಿಂದ ತನಿಖೆ ನಡಸುತ್ತಿದ್ದೀರಿ ಮತ್ತು ಅವರ ವಿರುದ್ಧ ಯಾವ ಪುರಾವೆಯೂ ಸಿಕ್ಕಿಲ್ಲ. ಅವರ ಉದ್ಯೋಗಿಗಳ ವಿರುದ್ಧ ಈ ಹಿಂದೆ ತೆಗೆದುಕೊಂಡ ಕ್ರಮದಂತೆ ಯಾವಾಗ ಬೇಕಾದರೂ ಯಾವುದಾದರೂ ಕ್ರಮ ತೆಗೆದುಕೊಳ್ಳಬಹುದು ಎಂಬ ಭಯ ಅವರಲ್ಲಿದೆ' ಎಂದು ಕೋರ್ಟ್ ಹೇಳಿತು.
ರಿಪಬ್ಲಿಕ್ ಟಿವಿಯ ಸಂಪಾದಕೀಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅಥವಾ ಇತರೆ ಯಾವುದೇ ಪತ್ರಕರ್ತರನ್ನು ಏಕೆ ಆರೋಪಿಗಳನ್ನಾಗಿ ಹೆಸರಿಸಿಲ್ಲ? ಇಲ್ಲಿ ಅಪರಾಧ ಕಾನೂನಿನಲ್ಲಿ ಯಾವುದೇ ಅನುಮಾನಪಡುವಂತಹ ಸಂಗತಿ ಇದೆ ಎಂದು ನಮಗೆ ಅನಿಸುತ್ತಿಲ್ಲ ನ್ಯಾಯಾಲಯ ಹೇಳಿತು.
ಅರ್ನಬ್ ಗೋಸ್ವಾಮಿ ವಿರುದ್ಧ ಡಿಸಿಪಿಯಿಂದ ಮಾನಹಾನಿ ದೂರು
ಈ ಪ್ರಕರಣವನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಸಾಧ್ಯವಾಗದಂತೆ ಮಾಡಲೆಂದೇ ಉದ್ದೇಶಪೂರ್ವಕವಾಗಿ ಅರ್ನಬ್ ಗೋಸ್ವಾಮಿ ಮತ್ತು ಇತರರ ಹೆಸರನ್ನು ಮುಂಬೈ ಪೊಲೀಸರು ಉಲ್ಲೇಖಿಸಿಲ್ಲ ಎಂದು ರಿಪಬ್ಲಿಕ್ ಟಿವಿ ಹೇಳಿತ್ತು.