ಲೋಕಸಭೆಯಲ್ಲಿ ಬಿಜೆಪಿ ಜೊತೆ ಸಖ್ಯ: ಶಿವಸೇನೆ ಮೌನದ ಅರ್ಥವೇನು?
ಮುಂಬೈ, ಫೆಬ್ರವರಿ 14: ಲೋಕಸಭಾ ಚುನಾವಣೆಗೆ ಮಾರ್ಚ್ 5 ರಂದು ಅಧಿಸೂಚನೆ ಹೊರಡಿಉವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಇದುವರೆಗೂ ಎನ್ ಡಿಎ ಜೊತೆ ತಾನು ಕೈಜೋಡಿಸುತ್ತೇನೋ, ಇಲ್ಲವೋ ಎಂಬ ಬಗ್ಗೆ ಮಾತ್ರ ಶಿವಸೇನೆ ತುಟಿಪಿಟಿಕ್ಕೆಂದಿಲ್ಲ!
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದನ್ನು ಸ್ವಾಗತಿಸಿದ್ದ ಶಿವಸೇನೆ, ಇದರಿಂದ ಮೋದಿ ಸರ್ಕಾರಕ್ಕೆ ಭಯ ಆರಂಭವಾಗಿದೆ ಎಂದಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಈ ಬಾರಿ ಶಿವಸೇನೆಯೊಂದಿಗೆ ನಿಂತಿರುವುದು ಅದಕ್ಕೆ ಮತ್ತಷ್ಟು ಬಲ ನೀಡಿದೆ.
ಶಿವಸೇನಾಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಲ?
ಆದರೆ ಎನ್ ಡಿಎ ಯಿಂದ ಹೊರಬಂದು ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಿದ್ಧವಿಲ್ಲದ ಶಿವಸೇನೆ, ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಬದಗಿಟ್ಟು ವಿಪಕ್ಷಗಳೊಂದಿಗೆ ಕೈಜೋಡಿಸಲು ಮನಸ್ಸು ಮಾಡುವ ಸಂಭವ ಕಡಿಮೆ. ಹಾಗಿದ್ದ ಮೇಲೆ ಮೈತ್ರಿಗೆ ಸಿದ್ಧವೆಂದೂ ಹೇಳದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಡೆದುಕೊಳ್ಳುತ್ತಿರುವ ಶಿವಸೇನೆಯ ತಂತ್ರ ಅರ್ಥ ಮಾಡಿಕೊಳ್ಳುವುದು ಕಷ್ಟವೇ!
ಸಿಎಜಿ ವರದಿಯ ಬಗ್ಗೆ ಅನುಮಾನ!
ಕಳೆದ ಹಲವು ದಿನಗಳಿಂದ ಬಿಜೆಪಿಯನ್ನು ಬಹಿರಂಗವಾಗಿಯೇ ಹಳಿಯುತ್ತ ಬಂದಿರುವ ಶಿವಸೇನೆ ಇದೀಗ ರಫೇಲ್ ಡೀಲ್ ಗೆ ಸಂಬಂಧಿಸಿದ ಸಿಎಜಿ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ! ಬುಧವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ರಫೇಲ್ ಡೀಲ್ ಗೆ ಸಂಬಂಧಿಸಿದ ವರದಿಯನ್ನು ಬಹಿರಂಗ ಪಡಿಸಿದ್ದು, ಅದು ಪೂರ್ವಗ್ರಹದಿಂದ ಮುಕ್ತವಾಗಿಲ್ಲ ಎಂದು ಶಿವಸೇನೆ ದೂರಿದೆ.
ಮಹಾರಾಷ್ಟ್ರದಲ್ಲಿ ನಾನೇ ದೊಡ್ಡಣ್ಣ: ಬಿಜೆಪಿಗೆ ಶಿವಸೇನಾ ಸಂದೇಶ
ನಾಯ್ಡು-ರಾವತ್ ಭೇಟಿ!
ಜೊತೆಗೆ ಇತ್ತೀಚೆಗೆ ದೆಹಲಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಡೆಸಿದ್ದ ಉಪವಾಸ ಸತ್ಯಾಗ್ರಹದಲ್ಲಿ ಶಿವಸೇನೆ ಮುಖಂಡ ಸಂಜಯ್ ರಾವತ್ ಅಚ್ಚರಿಯ ಎಂಟ್ರಿ ಕೊಟ್ಟು ಬಿಜೆಪಿ ವಲಯದಲ್ಲಿ ಅಲ್ಲೋಲಕಲ್ಲೋಲವಾಗುವಂತೆ ಮಾಡಿದ್ದರು. ಇದೊಂದು ಸೌಜನ್ಯ ಭೇಟಿ ಎಂದು ಅವರು ಆಮೇಲೆ ಸಮಜಾಯಿಷಿ ನೀಡಿದ್ದರೂ ರಾಜಕೀಯ ವಲಯದಲ್ಲಂತೂ ಗುಸು ಗುಸು ಆರಂಭವಾಗಿದೆ.
ಮಹಾರಾಷ್ಟ್ರ: ಶೀಘ್ರದಲ್ಲಿಯೇ ಬಿಜೆಪಿ-ಶಿವಸೇನಾ ಮರುಮೈತ್ರಿ?
ಶಿವಸೇನೆ ನಿಲುವು ಯಾವಾಗ ಬಹಿರಂಗ?
ಶಿವಸೇನೆ ಸುಪ್ರಿಮೋ ಉದ್ಧವ್ ಠಾಕ್ರೆ ಅವರು ಇನ್ನೆರಡು ದಿನಗಳಲ್ಲಿ ಸಮಾವೇಶವೊದನ್ನು ನಡೆಸಲಿದ್ದು, ಈ ಸಮಾವೇಶದಲ್ಲಿ ಎನ್ ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವ ಯಾ ಬಿಡುವ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಶಿವಸೇನೆ ಮೂಲಗಳು ತಿಳಿಸಿವೆ.
ಸಮಸ್ಯೆ ಟಿಕೆಟ್ ಹಂಚಿಕೆಯದ್ದಲ್ಲ!
ಶಿವಸೇನೆ ಮತ್ತು ಬಿಜೆಪಿ ಮೈತ್ರಿಗೆ ಅಡ್ಡಗಾಲು ಹಾಕುತ್ತಿರುವುದು ಟಿಕೆಟ್ ಹಂಚಿಕೆಯ ವಿಷಯವಲ್ಲ. ಆದರೆ ಇಷ್ಟು ದಿನ ಎರಡು ಪಕ್ಷಗಳ ನಡುವಲ್ಲಿ ಎದ್ದ ಹಲವು ಭಿನ್ನಾಭಿಪ್ರಾಯಗಳು, ಪರಸ್ಪರ ನಿಂದನೆ, ಅಪನಿಂದನೆಗಳ ಹೊರತಾಗಿಯೂ ಜನರೆದುರು ಒಟ್ಟಾಗಿ ನಿಂತು ಮತ ಕೇಳುವುದಕ್ಕೆ ನಾವು ತಯಾರಿಲ್ಲ ಎಂದು ಶಿವಸೇನೆ ಹೇಳುತ್ತಿದೆ. ಆದರೆ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಅಂದ ಮೇಲೆ ತನ್ನ ನಡೆಯನ್ನು ಶಿವಸೇನೆ ಬದಲಿಸಿಕೊಂಡರೆ ಅಚ್ಚರಿಯೇನಿಲ್ಲ!