ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?
Recommended Video
ಮುಂಬೈ, ಆಗಸ್ಟ್ 29: ಭೀಮಾ ಕೊರೆಗಾಂವ್ ಕದನದ 200 ನೇ ವರ್ಷಾಚರಣೆಯ ವೇಳೆ ಕಳೆದ ಜನವರಿ ತಿಂಗಳಿನಲ್ಲಿ ನಡೆದ ಗಲಭೆ ಮತ್ತೊಮ್ಮೆ ಸುದ್ದಿಯಾಗುತ್ತಿದೆ.
ಈ ಗಲಭೆಗೆ ಸಂಬಂಧಿಸಿದಂತೆ ಕೆಲವು ವಿಚಾರವಾದಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಎಡಪಂಥೀಯ ವಿಚಾರವಾದಿಗಳನ್ನು ಗುರಿಯಾಗಿಸಿ ಈ ಪ್ರಹಸನ ನಡೆದಿದೆ ಎಂಬ ದೂರು ಕೇಳಿಬರುತ್ತಿದೆ.
ಸಾಮಾಜಿಕ ಕಾರ್ಯಕರ್ತರ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇದರ ವಿಚಾರಣೆ ಇಂದು ನಡೆಯಲಿದೆ.
ದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸ
ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್, ಲೇಖಕ ಆನಂದ ತೆಲ್ತುಂಬ್ಡೆ, ಮಾನವ ಹಕ್ಕು ಕಾರ್ಯಕರ್ತ ಅರುಣ್, ಪತ್ರಕರ್ತ ಗೌತಮ್, ಮಾನವ ಹಕ್ಕುಗಳ ಕಾರ್ಯಕರ್ತೆ ಸುಸಾನ್ ಅಬ್ರಹಾಂ, ಸಾಮಾಜಿಕ ಹೋರಾಟಗಾರ ಗೊನ್ಸಾಲ್ವಿಸ್ ಅವರುಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಮಾವೋವಾದಿ ಜತೆ ನಂಟು ಶಂಕೆ, ಹಲವು ವಿಚಾರವಾದಿಗಳ ಬಂಧನ, ಆಕ್ರೋಶ
ಅಷ್ಟಕ್ಕೂ ಏನಿದು ಭೀಮಾ ಕೊರೆಗಾಂವ್ ಗಲಭೆ? ಈ ಗಲಭೆಗೂ ಬಂಧಿತರಿಗೂ ಏನು ಸಂಬಂಧ? ಮೋದಿ ಹತ್ಯೆಗೆ ಸಂಚು ರೂಪಿಸಿದ್ದು ಯಾರು...? ಇಲ್ಲಿದೆ ನೋಡಿ ಮಾಹಿತಿ.
ಏನಿದು ಭೀಮಾ ಕೊರೆಗಾಂವ್ ಗಲಭೆ?
ಜನವರಿ 1, 1818 ರಂದು ದಲಿತರು ಮತ್ತು ಮರಾಠರ ನಡುವೆ ನಡೆದ ಗಲಭೆಯೇ ಭೀಮಾ ಕೊರೆಗಾಂವ್ ಗಲಭೆ. ಕೊರೆಗಾಂವ್ ಎಂಬ ಹಳ್ಳಿ ಭೀಮಾ ನದಿ ತೀರದಲ್ಲಿದೆ. ಈ ಪ್ರದೇಶದಲ್ಲಿ ಯುದ್ಧ ನಡೆದಿದ್ದರಿಂದ ಅದಕ್ಕೆ ಭೀಮಾ ಕೊರೆಗಾಂವ್ ಎಂಬ ಹೆಸರು. ಇದರ 200 ವರ್ಷಾಚರಣೆ ಡಿಸೆಂಬರ್(2017) -ಜನವರಿಯಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಮರಾಠರ ವಿರುದ್ಧ ಯುದ್ಧ ಗೆದ್ದ ದಿನವನ್ನು, 'ವಿಜಯ ದಿವಸ' ಎಂಬ ಹೆಸರಿನಲ್ಲಿ ದಲಿತರು ಆಚರಿಸುತ್ತಿದ್ದರು. ಆದರೆ ಆಚರಣೆಯ ಸಂದರ್ಭ ದಲ್ಲಿ ಇದ್ದಕ್ಕಿದ್ದಂತೆ ಘರ್ಷಣೆ ಉಂಟಾಗಿ, ದಲಿತ ಯುವಕನೋರ್ವ ಮೃತಪಟ್ಟಿದ್ದ. ಇದರಿಂದ ಈ ಘರ್ಷಣೆ ಉಗ್ರರೂಪ ಪಡೆದು, ಸಾಕಷ್ಟು ಜನರಿಗೆ ಗಾಯವಾಗಿತ್ತು. ನಂತರ ಮಹಾರಾಷ್ಟ್ರ ಬಂದ್ ಸಹ ಆಚರಿಸಲಾಗಿತ್ತು.
ವಿಚಾರವಾದಿಗಳ ಬಂಧನ ಏಕೆ?
ಮಾವೋ ಸಿದ್ಧಾಂತಗಳ ಅನುಯಾಯಿಗಳಾದ ಕೆಲವು ವಿಚಾರವಾದಿಗಳ ಕೈವಾಡವೂ ಈ ಗಲೆಭೆಯಲ್ಲಿದೆ ಎಂಬ ಮಾಹಿತಿ ಮಹಾರಾಷ್ಟ್ರ ಪೊಲಿಸರಿಗೆ ಲಭ್ಯವಾದ ಪರಿಣಾಮ UAPA(Unlawful Activities Prevention Act) ಕಾಯ್ದೆಯ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ ಯಾವುದೇ ವಾರೆಂಟ್ ನ ಅಗತ್ಯವಿಲ್ಲದೆ ವ್ಯಕ್ತಿಯ ಮನೆಯಲ್ಲಿ ತನಿಖೆ ನಡೆಸಬಹುದು. ಈ ಕಾಯ್ದೆಯಡಿಯಲ್ಲೇ ದೂರು ದಾಖಲಿಸಿ ವಿಚಾರವಾದಿಗಳ ಮನೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮೋದಿ ಹತ್ಯೆ ಸಂಚು?
ಕಳೆದ ಎರಡು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿರುವ ಮಾಹಿತಿಗಳನ್ನೊಳಗೊಂಡ ಎರಡು ಪತ್ರಗಳು ಪೊಲೀಸರಿಗೆ ಲಭಿಸಿತ್ತು. ಈ ಪತ್ರದಲ್ಲಿ, ಮಾವೋವಾದಿಗಳೇ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿಯೇ ಮೋದಿ ಹತ್ಯೆಗೂ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದ್ದರಿಂದ ಮಾವೋ ಸಿದ್ಧಾಂತವನ್ನು ಅನುಸರಿಸುವವರ ಮೇಲೆ ಒಂದು ಕಣ್ಣಿಡಲು ಪೊಲೀಸರು ಚಿಂತಿಸಿದ್ದಾರೆ.
ಮೋದಿ ಹತ್ಯೆ ಸಂಚು: ವಿಚಾರವಾದಿ ವರವರರಾವ್ ಸೇರಿ ಆರು ಮಂದಿ ಬಂಧನ
ಏಕಕಾಲಕ್ಕೆ ದಾಳಿ
ಹೈದರಾಬಾದ್, ಮುಂಬೈ, ಫರಿದಾಬಾದ್, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಏಕಕಾಲದಲ್ಲಿ ಪೊಲಿಸರು ದಾಳಿ ನಡೆಸಿದ್ದಾರೆ. ಆದರೆ ವಿಚಾರವಾದಿಗಳ ಬಂಧನವನ್ನು ಹಲವರು ಕಟು ಶಬ್ದಗಳಿಂದ ಟೀಕಿಸಿದ್ದು, ಭಾರತದಲ್ಲಿ ಇದೀಗ ತುರ್ತುಪರಿಸ್ಥಿತಿ ಘೋಷಣೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ. ಬಂಧನಕ್ಕೆ ಸಂಬಂಧಿಸಿದ ವಿಚಾರಣೆ ಇಂದು ಸುಪ್ರೀಂ ಕೋರ್ಟಿನಲ್ಲಿ ನಡೆಯಲಿದೆ.