ಬಂದವರಿಗೆಲ್ಲ Yes... ಆಯಿತು Yes Bank ಠುಸ್!
ಮುಂಬೈ, ಮಾರ್ಚ್ 10: ದೇಶದ ಬ್ಯಾಂಕಿಂಗ್ ವಲಯದಲ್ಲಿ ಯೆಸ್ ಬ್ಯಾಂಕ್ ಬಿರುಗಾಳಿ ಎಬ್ಬಿಸಿದೆ. ಬ್ಯಾಂಕ್ ದಿವಾಳಿ ಆಗುವುದಕ್ಕೆ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮೇಲೆಯೇ ಹಣಕಾಸು ತಜ್ಞರು ಬೆರಳು ತೋರಿಸುತ್ತಿದ್ದಾರೆ.
ಯೆಸ್ ಬ್ಯಾಂಕ್ ಗೆ ಸುಮಾರು 54 ಸಾವಿರ ಕೋಟಿ ರುಪಾಯಿ ನಷ್ಟವಾಗಿರುವುದಕ್ಕೆ ರಾಣಾ ಕಪೂರ್ ಸಾಲ ಕೇಳಿಕೊಂಡು ಬಂದವರಿಗೆಲ್ಲ Yes ಎನ್ನುತ್ತಿದ್ದುದ್ದೇ ಕಾರಣ ಎಂದು ಬಹಿರಂಗಗೊಂಡಿದೆ.
ಯೆಸ್ ಬ್ಯಾಂಕ್ ಬಾಸ್ ಮತ್ತು ಪ್ರಿಯಾಂಕ ಗಾಂಧಿ ನಡುವೆ 'ಪೇಂಟಿಂಗ್ಸ್' ವ್ಯವಹಾರ
ದೊಡ್ಡ ದೊಡ್ಡ ಉದ್ಯಮಿಗಳು ಸಹಜವಾಗಿ ಖಾಸಗಿ ಬ್ಯಾಂಕ್ನಲ್ಲಿ ಬೃಹತ್ ಸಾಲಕ್ಕೆ ಮೊರೆ ಇಡುತ್ತಾರೆ. ಆದರೆ, ಬೇರೆ ಬ್ಯಾಂಕ್ನಲ್ಲಿ ನಿರಾಕರಿಸಲ್ಪಟ್ಟ ಉದ್ಯಮಿಗಳಿಗೆ ರಾಣಾ ಕಪೂರ್ ನೇತೃತ್ವದಲ್ಲಿ, ಯೆಸ್ ಬ್ಯಾಂಕ್ನಲ್ಲಿ ಭರಪೂರ ಸಾಲ ನೀಡಿದ್ದೇ ಇಂದಿನ ಯೆಸ್ ಬ್ಯಾಂಕ್ ದುಸ್ಥಿತಿಗೆ ಕಾರಣ ಎನ್ನಲಾಗಿದೆ. ಹೀಗೆ ಕೊಡಿಸಿದ ಸಾಲವೇ ವಸೂಲಾಗದ ಸಾಲಕ್ಕೆ ಸೇರಿ, ಸುಮಾರು 54 ಸಾವಿರ ಕೋಟಿ ರುಪಾಯಿ ದಾಟಿದೆ.
ಐಷಾರಾಮಿ ಹೋಟೆಲ್ಗಳಲ್ಲಿ ಪಾರ್ಟಿ
ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಯೆಸ್ ಬ್ಯಾಂಕ್ ಸ್ಥಾಪಕ ರಣಾ ಕಪೂರ್, ಬ್ಯಾಂಕ್ನಲ್ಲಿ ಉತ್ತಮ ಸಾಧನೆ ಮಾಡಿದವರಿಗೆ 'ಗೋಲ್ಡನ್ ಪಿನ್' ಪ್ರಶಸ್ತಿ ಹೆಸರಿನಲ್ಲಿ ಮುಂಬೈನಲ್ಲಿ ಐಷಾರಾಮಿ ಪಾರ್ಟಿಗಳನ್ನು ಆಯೋಜಿಸಿ ಬ್ಯಾಂಕ್ ಹಣವನ್ನು ದುಂದುವೆಚ್ಚ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಲಂಡನ್ ಬಿಟ್ಟು ಬರುತ್ತಿರಲಿಲ್ಲ
ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಲಂಡನ್ನಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಅಲ್ಲಿಯೂ ಕೂಡ ಬ್ಯಾಂಕ್ ಹಣದ ದುಂದುವೆಚ್ಚ ಹಾಗೂ ಸ್ವಜನ ಪಕ್ಷಪಾತ ಮಾಡಿ ಯೆಸ್ ಬ್ಯಾಂಕ್ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದಾರೆ. ಯೆಸ್ ಬ್ಯಾಂಕ್ ವ್ಯವಹಾರದ ಮೇಲೆ ಆರ್ಬಿಐಗೆ ಶಂಕೆ ಮೂಡತೊಡಗಿದಾಗ ಕಪೂರ್ ಲಂಡನ್ ಬಿಟ್ಟು ಬರುತ್ತಿರಲಿಲ್ಲ. ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿಗಳು ಉಪಾಯ ಹೂಡಿ ಕಪೂರ್ರನ್ನು ಭಾರತಕ್ಕೆ ಕರೆಯಿಸಿಕೊಂಡಿದ್ದಾರೆ ಎಂದು ವರದಿಗಳು ಬಂದಿವೆ.
ಪರೋಕ್ಷವಾಗಿ ಲಾಭ
ರಾಣಾ ಕಪೂರ್, ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸೇರಿದಂತೆ ಎನ್ಪಿಎ ಇರುವ ವಿವಿಧ ಸಂಸ್ಥೆಗಳಿಗೆ ಸಾಲ ನೀಡುವ ಮೂಲಕ ತಮ್ಮ ಕುಟುಂಬದವರ ಕಂಪನಿಗಳಿಗೆ ಪರೋಕ್ಷವಾಗಿ ಲಾಭ ಪಡೆದುಕೊಂಡಿದ್ದಾರೆ ಎಂದು ಇಡಿ ಹಾಗೂ ಸಿಬಿಐ ಶಂಕಿಸಿದೆ. ರಾಣಾ ಕಪೂರ್, ಪತ್ನಿ ಬಿಂದು, ಮೂವರು ಪುತ್ರಿಯರು ಹಾಗೂ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಿರ್ದೇಶಕ ಕಪಿಲ್ ವಾಧವನ್ ಸೇರಿದಂತೆ 12 ಮಂದಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ದೇಶ ಬಿಟ್ಟು ಹೊರಟಿದ್ದ ಮಗಳು
ಹಗರಣದ ಪ್ರಮುಖ ಆರೋಪಿ ರಾಣಾ ಕಪೂರ್ ಕುಟುಂಬಕ್ಕೆ ಸೇರಿದ ಮುಂಬೈನ ಏಳು ಸ್ಥಳಗಳಲ್ಲಿ ಸಿಬಿಐ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಿದೆ ಹಾಗೂ ದೇಶ ಬಿಟ್ಟು ತೆರಳುತ್ತಿದ್ದ ಕಪೂರ್ ಪುತ್ರಿಯೊಬ್ಬರಿಗೆ ಸಿಬಿಐ ಲುಕ್ಔಟ್ ನೋಟಿಸ್ ಕೂಡ ಜಾರಿಗೊಳಿಸಿದೆ.