ನಾವು ಬೆಂಗಳೂರಿಗೆ ಬರುವುದಿಲ್ಲ: ಅತೃಪ್ತರ ಅಚಲ ನಿರ್ಧಾರ
ಬೆಂಗಳೂರು, ಜುಲೈ 21: ನಾವು ಜೀವಂತವಾಗಿದ್ದೇವೆ, ಆರೋಗ್ಯದಿಂದ ಇದ್ದೇವೆ, ನಮ್ಮನ್ನು ಯಾರೂ ಹಿಡಿದಿಟ್ಟಿಲ್ಲ, ನಮ್ಮ ತಲೆಗೆ ಯಾರೂ ಬಂದೂಕು ಇಟ್ಟಿಲ್ಲವೆಂದು ಅತೃಪ್ತ ಶಾಸಕರು ಹೇಳಿದ್ದಾರೆ.
ಮುಂಬೈನ ರೆಸಾರ್ಟ್ ನಲ್ಲಿ ತಂಗಿದ್ದ ಅತೃಪ್ತ ಶಾಸಕರೂ ಇಂದು ಒಟ್ಟು ಸೇರಿ ವಿಡಿಯೋ ಒಂದನ್ನು ಮಾಡಿ ಬಿಡುಗಡೆ ಮಾಡಿದ್ದು, 'ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ' ಎಂದು ಹೇಳಿದ್ದಾರೆ.
ನಾವು ಯಾವುದೇ ಆಮೀಷಕ್ಕೆ ಬಲಿಯಾಗಿ ರಾಜೀನಾಮೆ ನೀಡಿಲ್ಲ. ದೇವರ ದಯದಿಂದ ನಾವು ಸ್ಥಿತಿವಂತರಾಗಿಯೇ ಇದ್ದೇವೆ, ಸದನದಲ್ಲಿ ಕೆಲವು ಉಲ್ಲೇಖ ಮಾಡುತ್ತಿರುವಂತೆ ನಾವು ಯಾವದೇ ಆಮೀಷಕ್ಕೆ ಬಲಿ ಆಗಿ ರಾಜೀನಾಮೆ ನೀಡಿಲ್ಲ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಎಚ್.ವಿಶ್ವನಾಥ್, ಮುನಿರತ್ನ, ಬಿಸಿ.ಪಾಟೀಲ್, ಗೋಪಾಲಯ್ಯ ಅವರುಗಳು ಮಾತನಾಡಿದರು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ನಾವು ನಾಳೆ (ಸೋಮವಾರ) ನಡೆವ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದರು.
ವಿಶ್ವನಾಥ್ ಅವರು ಮಾತನಾಡಿ, ನಾವು ಯಾವ ಆಮೀಷಕ್ಕೆ ಬಲಿಯಾಗಿ ರಾಜೀನಾಮೆ ನೀಡಲಿಲ್ಲ, ನಾವು ಸರ್ಕಾರದ ಅರಾಜಕತೆ ಸಹಿಸಲಾಗದೆ, ಸರ್ಕಾರದ ಅರಾಜಕತೆ ಅಂತ್ಯಮಾಡಲೆಂದು ನಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದೇವೆ ಎಂದು ಹೇಳಿದರು.
ಬೈರತಿ ಬಸವರಾಜು ಮಾತನಾಡಿ, ನಾವು ಮಾಡಿರುವ ಸಣ್ಣ ತಪ್ಪನ್ನು ಜನರು ಕ್ಷಮಿಸಬೇಕು ಎಂದು ಮನವಿ ಮಾಡಿದರು.