ನನ್ನ ಬಣ್ಣ 'ಕೇಸರಿ', ಅದು ಬದಲಾಗುವುದಿಲ್ಲ: ಉದ್ಧವ್ ಠಾಕ್ರೆ ತಿರುಗೇಟು
ಮುಂಬೈ, ಜನವರಿ 24: ರಾಜ್ಯದಲ್ಲಿ ಸರ್ಕಾರ ರಚಿಸಲು ಸೈದ್ಧಾಂತಿಕ ವಿರೋಧಿಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಕೈಜೋಡಿಸಿದ್ದರೂ ತಮ್ಮ 'ಕೇಸರಿ' ಬಣ್ಣವನ್ನು ಬದಲಿಸಿಕೊಂಡಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಶಿವಸೇನಾ ಆಯೋಜಿಸಿದ್ದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಹುದ್ದೆಗೆ ಏರುವ ಮೂಲಕ ಶಿವಸೇನಾ ಸಂಸ್ಥಾಪಕ ಬಾಳಠಾಕ್ರೆ ಅವರ ಕನಸನ್ನು ಈಡೇರಿಸಿದ್ದಕ್ಕಾಗಿ ಗುರುವಾರ ನಡೆದ ಬಾಳ ಠಾಕ್ರೆ ಜನ್ಮದಿನೋತ್ಸವದ ಸಂದರ್ಭದಲ್ಲಿ ಉದ್ಧವ್ ಅವರನ್ನು ಅಭಿನಂದಿಸಲಾಯಿತು.
ಶತದಿನದ ಬಳಿಕ ಅಯೋಧ್ಯೆಗೆ ಭೇಟಿ ನೀಡಲಿರುವ ಉದ್ಧವ್ ಠಾಕ್ರೆ
ನಮ್ಮ ಬಣ್ಣ ಕೇಸರಿ. ನಮ್ಮ ಅಂತರಂಗ ಕೂಡ ಕೇಸರಿ ಎಂದಿರುವ ಉದ್ಧವ್ ಠಾಕ್ರೆ, ಬಹುಕಾಲದ ವಿರೋಧಿಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ಜತೆ ಸೇರಿ ಸರ್ಕಾರ ರಚಿಸಿದ ಮಾತ್ರಕ್ಕೆ ತಮ್ಮ ನಿಲುವು ಬದಲಾಗುವುದಿಲ್ಲ ಎಂದು ತಮ್ಮ ವಿರುದ್ಧದ ಟೀಕೆಗಳಿಗೆ ತೀಕ್ಷ್ಣ ಉತ್ತರ ನೀಡಿದರು.
ನಾವು ಬಹಿರಂಗವಾಗಿ ಮಾಡಿದ್ದೇವೆ
'ನಾವು 25, 30, 50 ವರ್ಷಗಳಿಂದ ವಿರೋಧಿಸಿಕೊಂಡು ಬಂದವರೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ ಎನ್ನುವುದು ಸತ್ಯ. ಆದರೆ ನಾವೇನು ಮಾಡಿದ್ದೇವೆಯೋ ಅದನ್ನು ಬಹಿರಂಗವಾಗಿಯೇ ಮಾಡಿದ್ದೇವೆ' ಎಂದು ರಾತ್ರೋರಾತ್ರಿ ಎನ್ಸಿಪಿ ಜತೆ ಸೇರಿ ಸರ್ಕಾರ ರಚನೆಯ ವಿಫಲ ಯತ್ನ ನಡೆಸಿದ್ದ ಬಿಜೆಪಿಯನ್ನು ಲೇವಡಿ ಮಾಡಿದರು.
ಅಂತರಂಗದ ಬಣ್ಣ ಬದಲಾಗಿಲ್ಲ
'ನಮ್ಮ ಹಳೆಯ ರಾಜಕೀಯ ವಿರೋಧಿಗಳನ್ನು ಮಿತ್ರಪಕ್ಷಗಳೆಂದು ತೆಗೆದುಕೊಳ್ಳುವ ಮೂಲಕ ಹೊಸ ರಾಜಕೀಯ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹಾಗೆಂದು ನಾನು ನನ್ನ ಅಂತರಂಗದ ಬಣ್ಣವನ್ನು ಬದಲಿಸಿಕೊಂಡಿಲ್ಲ. ಅದು ಕೇಸರಿಯಾಗಿಯೇ ಮುಂದುವರಿಯುತ್ತದೆ' ಎಂದು, ಅಧಿಕಾರಕ್ಕಾಗಿ ತಮ್ಮ ಹಿಂದುತ್ವದ ನಂಬಿಕೆಯನ್ನು ಕೈಬಿಟ್ಟಿದ್ದಾರೆ ಎಂಬ ಟೀಕೆಗಳಿಗೆ ತಿರುಗೇಟು ನೀಡಿದರು.
ಸುಳ್ಳುಗಾರ ಹಣೆಪಟ್ಟಿ
ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವುದಾಗಿ ಚುನಾವಣೆಗೂ ಮುನ್ನ ಭರವಸೆ ನೀಡಿದ್ದ ಮಾಜಿ ಮಿತ್ರಪಕ್ಷವು ಕೊಟ್ಟ ಮಾತನ್ನು ಮುರಿದು, ತಮಗೆ ಸುಳ್ಳುಗಾರ ಎಂಬ ಹಣೆಪಟ್ಟಿ ಕಟ್ಟಲು ಪ್ರಯತ್ನಿಸಿದೆ ಎಂದು ಆರೋಪಿಸಿದರು.
'ಸುಮ್ಮನಿರಿ, ಇಲ್ಲವಾದ್ರೆ ಉದ್ಧವ್ ಠಾಕ್ರೆ ರಾಜೀನಾಮೆ ಕೊಡ್ತಾರೆ'
ಅಗೋಚರ ಬೆಂಬಲ
'ಬಿಜೆಪಿಯು 2014ರಲ್ಲಿ ಶಿವಸೇನಾದೊಂದಿಗಿನ ಸಂಬಂಧ ಮುರಿದುಕೊಂಡು ಅಗೋಚರ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಆಗಲೇ ಬಿಜೆಪಿಯ ಮುಖ ಅನಾವರಣಗೊಂಡಿತ್ತು' ಎಂದು ಟೀಕಿಸಿದರು. 'ಶಿವಸೈನಿಕನೊಬ್ಬ ಮುಖ್ಯಮಂತ್ರಿಯಾಗುತ್ತಾನೆ ಎಂದು ಬಾಳ ಠಾಕ್ರೆ ಅವರಿಗೆ ಮಾತು ನೀಡಿದ್ದೆ. ಆದರೆ ಆ ಜವಾಬ್ದಾರಿ ನನಗೇ ಸಿಕ್ಕಿದೆ' ಎಂದರು.