ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು
ಮುಂಬೈ, ಜುಲೈ 18: ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಅತೃಪ್ತ ಶಾಸಕರು, 'ನಾವು ಯಾವುದೇ ಕಾರಣಕ್ಕೂ ರಾಮಲಿಂಗಾ ರೆಡ್ಡಿ ಅವರಂತೆ ರಾಜೀನಾಮೆ ವಾಪಸ್ ಪಡೆಯುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್.ಟಿ.ಸೋಮಶೇಖರ್, ಮುನಿರತ್ನ ಮತ್ತು ಭೈರತಿ ಬಸವರಾಜು ಅವರು ಒಟ್ಟಾಗಿ ವಿಡಿಯೋ ಸಂದೇಶ ರವಾನಿಸಿದ್ದು, ವಿಡಿಯೋದಲ್ಲಿ ಮಾತನಾಡಿರುವ ಶಾಸಕ ಎಸ್.ಟಿ.ಸೋಮಶೇಖರ್ ಅವರು, ನಾವು ರಾಮಲಿಂಗಾ ರೆಡ್ಡಿ ಅವರನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ.
ವಿಶ್ವಾಸಮತ ಯಾಚನೆ LIVE: ವಿಧಾನಸಭೆ ಕಲಾಪ ಆರಂಭ, ಚರ್ಚೆ ಪ್ರಾರಂಭ
ಈ ಮೊದಲು ರಾಜೀನಾಮೆ ನಿರ್ಣಯ ತೆಗೆದುಕೊಂಡಾಗ ನಾವು ನಾಲ್ಕೂ ಜನ (ರಾಮಲಿಂಗಾ ರೆಡ್ಡಿ, ಮುನಿರತ್ನ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು) 'ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಬಾರದು ಎಂದು ನಿರ್ಣಯಿಸಿಕೊಂಡಿದ್ದೆವು, ಆದರೆ ಈಗ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದಿದ್ದಾರೆ' ಎಂದು ಸೋಮಶೇಖರ್ ಹೇಳಿದ್ದಾರೆ.
ರಾಜೀನಾಮೆ ನೀಡಿದ ಮೇಲೂ ಸಹ ರಾಮಲಿಂಗಾ ರೆಡ್ಡಿ ಅವರು ನಮ್ಮೊಂದಿಗೆ ಮಾತನಾಡುವ ಸಂದರ್ಭದಲ್ಲೂ ಸಹ ರಾಜೀನಾಮೆ ಹಿಂಪಡೆಯುವುದಿಲ್ಲವೆಂದೇ ಹೇಳಿದ್ದರು, ಆದರೆ ಅವರು ಒತ್ತಡಕ್ಕೆ ಒಳಗಾಗಿ ರಾಜೀನಾಮೆ ಹಿಂಪಡೆವ ನಿರ್ಣಯ ಕೈಗೊಂಡಿದ್ದಾರೆ ಮತ್ತು ಸರ್ಕಾರಕ್ಕೆ ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.
ವಿಶ್ವಾಸಮತಯಾಚನೆ : ಸದನದಲ್ಲಿ ಏನೆಲ್ಲ ಘಟನೆಗಳು ನಡೆಯಲಿವೆ?
ರಾಮಲಿಂಗಾ ರೆಡ್ಡಿ ಅವರಂತಲ್ಲದೆ ನಾವು ನಮ್ಮ ನಿರ್ಣಯಕ್ಕೆ ಬದ್ಧರಾಗಿದ್ದು, ನಾವು ಯಾರೂ ಸಹ ರಾಜೀನಾಮೆ ಹಿಂಪಡೆಯುವುದಿಲ್ಲವೆಂದು ಸೋಮಶೇಖರ್ ಹೇಳಿದ್ದಾರೆ.
ಮುಂಬೈನಲ್ಲಿ ತಂಗಿದ್ದ ಅತೃಪ್ತ ಶಾಸಕರು ಈಗ ಸ್ಥಳ ಬದಲಾಯಿಸಿದ್ದಾರೆ ಎನ್ನಲಾಗಿದ್ದು, ಶಾಸಕರು ಎಲ್ಲಿಗೆ ತೆರಳಿದ್ದಾರೆ, ಎಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಇಲ್ಲ.