ದಾವೂದ್ ಗೆ ರಾಜ ಮರ್ಯಾದೆ ಕೊಡೋಕೆ ಮನಸ್ಸಾಗಲಿಲ್ಲ
ಮುಂಬೈ, ಜುಲೈ 08: ಬಿಜೆಪಿ ಮುಖಂಡ, ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ದಾವೂದ್ ಇಬ್ರಾಹಿಂ ಶರಣಾಗತಿ ಬಗ್ಗೆ ನೀಡಿದ್ದ ಹೇಳಿಕೆಗೆ ಎನ್ ಸಿಪಿ ಮುಖಂಡ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ 90ರ ದಶಕದಲ್ಲೇ ಶರಣಾಗತನಾಗಲು ಬಯಸಿದ್ದ, ಆತ ಭಾರತಕ್ಕೆ ಬಂದು ನೆಲೆಸಲು ಬೇಕಾದ ವ್ಯವಸ್ಥೆ ಕಲ್ಪಿಸಲು ಅಂದಿನ ಸಿಎಂ ಶರದ್ ಪವಾರ್ ಅವರು ಅಡ್ಡಗಾಲು ಹಾಕಿದರು ಎಂದು ರಾಮ್ ಜೇಠ್ಮಲಾನಿ ಹೇಳಿದ್ದರು.
ಜೇಠ್ಮಲಾನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್, ದಾವೂದ್ ಶರಣಾಗತಿ ಬಗ್ಗೆ ಅಂದು ಮಹಾರಾಷ್ಟ್ರ ಸರ್ಕಾರ ಕೈಗೊಂಡ ನಿರ್ಣಯ ಸರಿಯಾಗಿತ್ತು. ದಾವೂದ್ ಹಾಗೂ ಛೋಟಾ ಶಕೀಲ್ ರನ್ನು ಕರೆಸಿಕೊಂಡು ಫೈವ್ ಸ್ಟಾರ್ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಒಮ್ಮತ ಮೂಡಲಿಲ್ಲ. [ದಾವೂದ್ ಶರಣಾಗತಿ ತಪ್ಪಿಸಿದ್ದು ಪವಾರ್: ಜೇಠ್ಮಲಾನಿ]
ಮುಂಬೈ ಸರಣಿ ಸ್ಫೋಟದಲ್ಲಿ ನೂರಾರು ಮಂದಿಯ ಪ್ರಾಣ ತೆಗೆದ ಪಾತಕಿಗೆ ರಾಜ ಮರ್ಯಾದೆ ನೀಡುವುದು ಯಾರಿಗೂ ಬೇಕಿರಲಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ನಿರೂಪಿಸಬೇಕಿತ್ತು ಹೀಗಾಗಿ ಮಹಾರಾಷ್ಟ್ರ ಸರ್ಕಾರ ಆ ರೀತಿ ನಿರ್ಣಯ ಕೈಗೊಂಡಿತು ಎಂದು ಶರದ್ ಪವಾರ್ ಹೇಳಿದ್ದಾರೆ.
ವಿಚಾರಣೆ ವೇಳೆ ಇಬ್ಬರನ್ನು ಗೃಹಬಂಧನದಲ್ಲಿರಿಸಲು ಬೇಕಾದ ವ್ಯವಸ್ಥೆ ಕಲ್ಪಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕೇಳಿಕೊಳ್ಳಲಾಗಿತ್ತು. ಆದರೆ, ಅಂದಿನ ಪವಾರ್ ಸರ್ಕಾರ ಒಪ್ಪಿಕೊಳ್ಳಲಿಲ್ಲ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ದಾವೂದ್ ಇಬ್ರಾಹಿಂ ದೂರವಾಣಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದ ಎಂದು ರಾಮ್ ಜೇಠ್ಮಲಾನಿ ಹೇಳಿದ್ದರು
ಯುಪಿಎ ಮತ್ತು ಪವಾರ್ ನೇತೃತ್ವದ ಸರ್ಕಾರ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾದ ಕಾರಣ ದಾವೂದ್ ಶರಣಾಗತಿ ಸಾಧ್ಯವಾಗಲಿಲ್ಲ ಎಂದು ರಾಮ್ ಜೇಠ್ಮಲಾನಿ ವಿಷಾದ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)