ಸರ್ಕಾರವಾಯ್ತು, ಮೊದಲು ನಮ್ಮ ಜೇಬು ತುಂಬಿಸಿಕೊಳ್ಳಬೇಕು ಎಂದ ಸಚಿವರು!
ಮುಂಬೈ, ಜನವರಿ.06: ರಾಜಕಾರಣ ಮಾಡುವುದೇ ರೊಕ್ಕ ಮಾಡಿಕೊಳ್ಳುವುದಕ್ಕೆ ಎನ್ನುವಂತಾ ಮನಸ್ಥಿತಿ ಜನಪ್ರತಿನಿಧಿಗಳಲ್ಲೇ ಹುಟ್ಟಿಕೊಳ್ಳುತ್ತಿದೆ. ಇತ್ತೀಚಿನ ಚುನಾವಣಾ ವ್ಯವಸ್ಥೆಯಲ್ಲಿ ಅಂಥ ನಾಯಕರ ಪ್ರಮಾಣ ಮಿತಿ ಮೀರಿ ಹೋಗಿದೆ. ಈ ಮಾತಿಗೆ ಮಹಾರಾಷ್ಟ್ರದ ಸಚಿವರೇ ಬೆಸ್ಟ್ ಎಕ್ಸಾಂಪಲ್.
ಮಹಾರಾಷ್ಟ್ರದಲ್ಲಿ ಈಗಷ್ಟೇ ನಮ್ಮ ಸರ್ಕಾರ ರಚನೆಯಾಗಿದೆ. ಮೊದಲು ನಾವು ಜೇಬು ತುಂಬಿಸಿಕೊಳ್ಳುವುದನ್ನು ನೋಡಬೇಕು ಎಂದು ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಯಶೋಮತಿ ಠಾಕೂರ್ ಬಹಿರಂಗವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
"ಮಹಾ ಸಚಿವರ ರಾಜೀನಾಮೆ, ಇದೇ ಸರ್ಕಾರ ಪತನಕ್ಕೆ ನಾಂದಿ"
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಶಾಸಕ ತಿವಾಸ್ ಅವರಿಗೆ ಸೇರಿದ ಅಮರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವೆ ಯಶೋಮತಿ ಠಾಕೂರ್ ಪ್ರಚಾರ ನಡೆಸಿದರು. ಈ ವೇಳೆ ನೀಡಿದ ಒಂದೇ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
"ಹಣ ಮಾಡಿಕೊಳ್ಳುವುದನ್ನು ಮೊದಲು ಕಲಿಯಬೇಕು"
ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ಮೈತ್ರಿಕೂಟದ ಸರ್ಕಾರ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ಇತ್ತೀಚಿಗಷ್ಟೇ ನಾವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದೇವೆ. ಇಂಥ ಸಂದರ್ಭದಲ್ಲಿ ನಾವು ಹಣ ಮಾಡಿಕೊಳ್ಳುವುದನ್ನು ನೋಡಬೇಕು ಎಂದು ಸಚಿವರೇ ಹೇಳಿಕೆ ನೀಡಿದ್ದಾರೆ.
|
ಕಾಸು ಕೊಟ್ಟರೆ ಸುಮ್ಮನೆ ತೆಗೆದುಕೊಳ್ಳಿರಿ ಎಂದ ಯಶೋಮತಿ
ಇನ್ನು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರಚಾರ ನಡೆಸಿದ ಸಚಿವೆ ಯಶೋಮತಿ ಠಾಕೂರ್, ಬಿಜೆಪಿ ವಿರುದ್ಧ ಕಿಡಿ ಕಾರಿದರು. ಬಿಜೆಪಿ ನಾಯಕರು ಮತ ಹಾಕಲು ಹಣವನ್ನು ನೀಡಿದರೆ ಸುಮ್ಮನೆ ತೆಗೆದುಕೊಳ್ಳಿರಿ. ಮನೆ ಬಾಗಿಲಿಗೆ ಲಕ್ಷ್ಮಿ ಬಂದಾಗ ವಾಪಸ್ ಕಳುಹಿಸಬಾರದು. ಅವರದ ಬಳಿಯೇ ದುಡ್ಡು ತೆಗೆದುಕೊಳ್ಳಿ, ಆದರೆ ನಮಗೆ ಮತ ನೀಡಿ ಎಂದು ಸಚಿವೆಯ ಮನವಿ ಮಾಡಿಕೊಂಡಿದ್ದಾರೆ.
"ಬಿಜೆಪಿಯದ್ದು ತುಂಬಿದ ಜೇಬು ಎಂದ ಸಚಿವೆ"
ಮಹಾರಾಷ್ಟ್ರದಲ್ಲಿ ಈ ಮೊದಲು ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿತ್ತು. ಅವರು ತಮ್ಮ ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಸಾಕಷ್ಟು ದುಡ್ಡು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ಬಿಜೆಪಿಗರದ್ದು ತುಂಬಿದ ಜೇಬು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎನ್ನಲಾದ ಸಚಿವೆ ಯಶೋಮತಿ ಠಾಕೂರ್, ಇದೀಗ ಕೇಸರಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಚುನಾವಣಾ ಆಯೋಗಕ್ಕೆ ಸಚಿವೆಯ ವಿರುದ್ಧ ದೂರು
ನಾವಿನ್ನೂ ನಮ್ಮ ಜೇಬುಗಳನ್ನು ತುಂಬಿಸಿಕೊಳ್ಳಬೇಕು ಎಂಬರ್ಥದಲ್ಲಿ ಮಾತನಾಡಿರುವ ಸಚಿವರ ವಿಡಿಯೋ ಹೊರ ಬೀಳುತ್ತಿದ್ದಂತೆ ಕೇಸರಿ ಪಡೆ ಕೆಂಡಾಮಂಡಲವಾಗಿದೆ. ಸಚಿವೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ದೂರು ನೀಡಿದ್ದಾರೆ. ಮತದಾರರನ್ನು ಸೆಳೆಯಲು ಸಚಿವರು ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸುತ್ತಿದ್ದಾರೆ.