'ನಮ್ಮ ತನಿಖೆ ಸಚಿನ್ ಅಥವಾ ಲತಾ ವಿರುದ್ಧ ಅಲ್ಲ, ಬಿಜೆಪಿ ಐಟಿ ಸೆಲ್ ವಿರುದ್ಧ'
ಮುಂಬೈ, ಮಾರ್ಚ್ 2: ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿಭಾಯಿಸಿದ ರೀತಿಯನ್ನು ಬೆಂಬಲಿಸಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಗಾಯಕಿ ಲತಾ ಮಂಗೇಷ್ಕರ್ ಮಾಡಿದ್ದ ಟ್ವೀಟ್ಗಳ ಕುರಿತು ರಾಜಕೀಯ ತಿಕ್ಕಾಟ ಮುಂದುವರಿದಿದ್ದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಗೃಹ ಸಚಿವ ಅನಿಲ್ ದೇಶ್ಮುಖ್ ನಡುವೆ ಮಾತಿನ ಸಮರ ನಡೆದಿದೆ.
ಅಲಿಗಢ ವಿಶ್ವ ವಿದ್ಯಾಲಯದ ಮಾಜಿ ವಿದ್ಯಾರ್ಥಿ ಶರ್ಜೀಲ್ ಉಸ್ಮಾನ್ಗಿಂತಲೂ ಮುಖ್ಯವಾಗಿ ಇಬ್ಬರು ಭಾರತ ರತ್ನ ಪುರಸ್ಕೃತರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಡಳಿತಾರೂಢ ಶಿವಸೇನಾ ಆಸಕ್ತಿವಹಿಸುತ್ತಿದೆ ಎಂಬ ಫಡ್ನವೀಸ್ ಆರೋಪಕ್ಕೆ ಎದಿರೇಟು ನೀಡಿರುವ ಅನಿಲ್ ದೇಶ್ಮುಖ್, 'ನಾವು ಲತಾ ಮಂಗೇಷ್ಕರ್ ಅಥವಾ ಸಚಿನ್ ತೆಂಡೂಲ್ಕರ್ ವಿರುದ್ಧ ವಿಚಾರಣೆ ನಡೆಸುತ್ತಿಲ್ಲ. ಆದರೆ ತನಿಖೆ ಮಾಡುತ್ತಿರುವುದು ಬಿಜೆಪಿ ಐಟಿ ಘಟಕದ ವಿರುದ್ಧ' ಎಂದಿದ್ದಾರೆ.
ಕೇಂದ್ರದಿಂದ ಒತ್ತಡವಿತ್ತೇ?: ಸೆಲೆಬ್ರಿಟಿಗಳ ಟ್ವೀಟ್ ವಿರುದ್ಧ ತನಿಖೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ
ಎಲ್ಗಾರ್ ಪರಿಷದ್ ಸಮಾವೇಶದಲ್ಲಿನ ಭಾಷಣದಲ್ಲಿ ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದಿಸುವ ಶರ್ಜೀಲ್ ಉಸ್ಮಾನ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ಸಾಕಷ್ಟು ಧೈರ್ಯದ ಕೊರತೆ ಕಾಣಿಸುತ್ತಿದೆ ಎಂದು ಫಡ್ನವೀಸ್ ಟೀಕಿಸಿದ್ದರು.
ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಧೈರ್ಯವಿಲ್ಲ
'ಅವರು ಹಿಂದೂಗಳನ್ನು ಅವಮಾನಿಸಿದ್ದರು. ಆದರೆ ಅವರ ವಿರುದ್ಧ ನೀವು ಕ್ರಮ ತೆಗೆದುಕೊಂಡಿಲ್ಲ. ಎಲ್ಗರ್ ಪರಿಷದ್ನ ಸದಸ್ಯರೂ ಅವರ ಹೇಳಿಕೆಗಳನ್ನು ಬೆಂಬಲಿಸಿದ್ದರು. ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿಮಗೆ ತಾಕತ್ತಿಲ್ಲ. ಆದರೆ ಭಾರತರತ್ನ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಷ್ಕರ್ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಬಹುದು' ಎಂದು ವಿಧಾನಸಭೆಯಲ್ಲಿ ಅವರು ಆರೋಪಿಸಿದ್ದರು.
ಕೇಂದ್ರವೇ ಸಚಿನ್ ಅವರನ್ನು ಕಣಕ್ಕಿಳಿಸಿದೆ; ಆರ್ಜೆಡಿ ಮುಖಂಡನ ಆರೋಪ
ಹಾಗೆ ಕೋರಿದ್ದರೆ ಹೆಮ್ಮೆ ಪಡುತ್ತೇವೆ
'ಅವರು ಅಂತಹದ್ದೇನನ್ನು ಟ್ವೀಟ್ ಮಾಡಿದ್ದರು? ನಾನೇ ಆ ರೀತಿ ಟ್ವೀಟ್ ಮಾಡುವಂತೆ ಅವರಿಗೆ ಕೇಳಿದ್ದೆ ಎಂದುಕೊಳ್ಳೋಣ. ಹಾಗಾದರೆ ಇಲ್ಲಿ ನನ್ನ ವಿರುದ್ಧದ ಆರೋಪವೇನು? ನನ್ನ ಪಕ್ಷವು ಭಾರತವನ್ನು ಬೆಂಬಲಿಸುವಂತೆ ಕೋರಿದ್ದರೆ, ನಾವು ಅದರ ಬಗ್ಗೆ ಹೆಮ್ಮೆ ಪಡುತ್ತೇವೆ. ನಾವು ನಿಮ್ಮ ತನಿಖೆಗೆ ಹೆದರುವುದಿಲ್ಲ' ಎಂದಿದ್ದರು.
ಬಿಜೆಪಿ ಐಟಿ ವಿರುದ್ಧ ತನಿಖೆ
'ನಾವು ಬಿಜೆಪಿ ಐಟಿ ಘಟಕದ ವಿರುದ್ಧ ತನಿಖೆ ನಡೆಸುತ್ತಿದ್ದೇವೆ. ನಾವು ಸಚಿನ್ ತೆಂಡೂಲ್ಕರ್ ಅಥವಾ ಲತಾ ಮಂಗೇಷ್ಕರ್ ವಿರುದ್ಧ ವಿಚಾರಣೆ ನಡೆಸುತ್ತಿಲ್ಲ' ಎಂದು ಅನಿಲ್ ದೇಶ್ಮುಖ್ ಪ್ರತಿಕ್ರಿಯಿಸಿದ್ದರು.
'ದೇಶವನ್ನು ಬೆಂಬಲಿಸುವ ಜನರ ವಿರುದ್ಧ ನೀವು ತನಿಖೆ ನಡೆಸುತ್ತಿರುವುದನ್ನು ಕೇಳಿ ನಮಗೆ ಬಹಳ ಸಂತೋಷವಾಯಿತು' ಎಂದು ಫಡ್ನವೀಸ್ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ
'ಸಚಿನ್ ಮತ್ತು ನಟಿ ರೇಖಾ ಅವರನ್ನು ರಾಜ್ಯಸಭೆಗೆ ಕಾಂಗ್ರೆಸ್ ಕಳುಹಿಸಿತ್ತು. ಆದರೆ ಅವರನ್ನು ರಾಜಕೀಯಕ್ಕೆ ಎಂದಿಗೂ ನಾವು ಬಳಸಿಕೊಳ್ಳಲಿಲ್ಲ. ಬಿಜೆಪಿಯು ಸೆಲೆಬ್ರಿಟಿಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಇಂದು ಸ್ವತಃ ದೇವೇಂದ್ರ ಫಡ್ನವೀಸ್ ಒಪ್ಪುಕೊಂಡಿದ್ದಾರೆ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಟೀಕಿಸಿದ್ದಾರೆ.