"ನಾವೆಲ್ಲ ಸಂಘ್ ಸ್ತಾನ್ ನಿಂದ ಬಂದವರು" ಎಂದ ಮಹಾರಾಷ್ಟ್ರ ರಾಜ್ಯಪಾಲ
ಮುಂಬೈ, ಫೆಬ್ರವರಿ 6: ಮಹಾರಾಷ್ಟ್ರ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರು ರಾಷ್ಟ್ರೀಯ ಸ್ವಯಂಸೇವಕ್ ಸಂಘ್ ಗೆ 'ಸಂಘ್ ಸ್ತಾನ್' ಎಂಬ ಹೊಸ ಪದವೊಂದನ್ನು ಹುಟ್ಟು ಹಾಕಿದ್ದು, ನಾನು ಇದರ ಭಾಗವಾಗಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಎಂದು ಹೇಳಿದ್ದಾರೆ. ಆರೆಸ್ಸೆಸ್ ಜಾತ್ಯತೀತ ಸಂಸ್ಥೆ ಎಂದು ಹೇಳಿರುವ ಅವರು, ಜನರು ತಮ್ಮ ನಂಬಿಕೆಗಳನ್ನು ಅನುಸರಿಸುವುದನ್ನು ಗೌರವಿಸುತ್ತದೆ ಎಂದಿದ್ದಾರೆ.
ನಾಗ್ ಪುರ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಸಂಘ್ ಸ್ತಾನ್... ನಾವೆಲ್ಲ ಬಂದಿದ್ದು ಅಲ್ಲಿಂದಲೇ. ನಾವು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ" ಎಂದು ಘೋಷಿಸಿದ್ದಾರೆ. ಸ್ಥಳೀಯ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ಜಾತ್ಯತೀತ ಅಲ್ಲ ಎಂಬ ತಪ್ಪು ಭಾವನೆ ಜನರಲ್ಲಿ ಇದೆ ಎಂದು ಕೂಡ ಹೇಳಿದ್ದಾರೆ.
ಹಿಂದೂಗಳ ಭಾವನೆ ಪರಿಗಣಿಸದ ಕೋರ್ಟ್: ಆರೆಸ್ಸೆಸ್ ಆಕ್ರೋಶ
ದೀರ್ಘ ಕಾಲ ಬಿಜೆಪಿ ಸದಸ್ಯರಾಗಿದ್ದ ವಿದ್ಯಾಸಾಗರ್ ರಾವ್, ಆರೆಸ್ಸೆಸ್ ನಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ವಿದ್ಯಾಸಾಗರ್ ಸಚಿವರಾಗಿದ್ದರು. 2013ರ ಆಗಸ್ಟ್ ನಲ್ಲಿ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ತಾತ್ಕಾಲಿಕವಾಗಿ ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರಾಗಿ ಕೂಡ ಇದ್ದರು.
ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್. ಅದು ಎಲ್ಲ ಸಂಸ್ಥೆಗಳನ್ನು ಹತೋಟಿಗೆ ತೆಗೆದುಕೊಳ್ಳಲು ಬಯಸುತ್ತದೆ. ನ್ಯಾಯಾಂಗ ಹಾಗೂ ಶಿಕ್ಷಣದಲ್ಲೂ ತನ್ನ ಸಿದ್ಧಾಂತ ತರಲು ಯತ್ನಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.