"ಇನ್ನೊಂದು ಕೆನ್ನೆ ತಿರುಗಿಸಲು ಧೈರ್ಯ ಬೇಕು: ಕಂಗನಾ ವಿರುದ್ಧ ತುಷಾರ್ ಗಾಂಧಿ ವಾಗ್ದಾಳಿ
ಮುಂಬೈ, ನವೆಂಬರ್ 18: ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಯಿಂದ ಚರ್ಚೆಯಲ್ಲಿರುವ ಬಾಲಿವುಡ್ ನಟ ಕಂಗನಾ ರಣಾವತ್ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಕೆಲವು ದಿನಗಳಿಂದ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ನಿನ್ನೆಯಷ್ಟೇ ಮಹಾತ್ಮ ಗಾಂಧಿ ಅವರ ಅಹಿಂಸಾ ಮಂತ್ರವನ್ನು ಲೇವಡಿ ಮಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಪ್ರತ್ಯುತ್ತರವಾಗಿ ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ತಿರುಗೇಟು ಕೊಟ್ಟಿದ್ದಾರೆ. "ಇನ್ನೊಂದು ಕೆನ್ನೆಯನ್ನು ತಿರುಗಿಸಲು ಗಾಂಧಿ ದ್ವೇಷಿಗಳು ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಧೈರ್ಯದ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.
"1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಭಿಕ್ಷೆ [ಭಿಕ್]' ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ ನಟಿ ಕಂಗನಾ ರನೌತ್ ಇನ್ಸ್ಟಾಗ್ರಾಂನಲ್ಲಿನ ಪೋಸ್ಟ್ನಲ್ಲಿ ಸರಣಿಯಲ್ಲಿ ಮಹಾತ್ಮ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದವರಿಂದ ಸ್ವಾತಂತ್ರ್ಯ ಬಂದಿರಲು ಸಾಧ್ಯವಿಲ್ಲ. ಅಂಥವರಿಂದ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ" ಎಂದು ಕಂಗನಾ ತಮ್ಮ ಸರಣಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದಾರೆ. ಮಹಾತ್ಮಾ ಗಾಂಧಿ ಅವರ ಬಗ್ಗೆ ಹೇಳಿಕೆಗೆ ಕಂಗನಾ ರಣಾವತ್ ವಿರುದ್ಧ ವಾಗ್ದಾಳಿ ನಡೆಸಿದ ತುಷಾರ್ ಗಾಂಧಿ, 'ಇನ್ನೊಂದು ಕೆನ್ನೆಯನ್ನು ತಿರುಗಿಸಲು ಗಾಂಧಿ ದ್ವೇಷಿಗಳು ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಧೈರ್ಯ ಬೇಕು' ಎಂಬ ಶೀರ್ಷಿಕೆಯ ಲೇಖನವನ್ನು ಬರೆದಿದ್ದಾರೆ.
ಕಂಗನಾ ಅವರನ್ನು ಗುರಿಯಾಗಿಸಿಕೊಂಡು ಬರೆದ ಲೇಖನದಲ್ಲಿ, "ಗಾಂಧಿವಾದಿಗಳು ಕೇವಲ ಇನ್ನೊಂದು ಕೆನ್ನೆಯನ್ನು ತಿರುಗಿಸುತ್ತಾರೆ. ಇದನ್ನು ಹೇಡಿಗಳು ಎಂದು ಆರೋಪಿಸುವವರು ಧೈರ್ಯಶಾಲಿಯಾಗಲು ಬೇಕಾದ ಧೈರ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಅಂತಹ ವೀರತೆಯನ್ನು ಅರ್ಥಮಾಡಿಕೊಳ್ಳಲು ಅವರು ಅಸಮರ್ಥರಾಗಿರುತ್ತಾರೆ ಎಂದು ನಾವು ಮರೆಯಬಾರದು" ಎಂದು ವಾಗ್ದಾಳಿ ಮಾಡಿದ್ದಾರೆ.
"ಇನ್ನೊಂದು ಕೆನ್ನೆಯನ್ನು ತಿರುಗಿಸುವುದು ಹೇಡಿಗಳ ಕೃತ್ಯವಲ್ಲ. ಅದಕ್ಕೆ ಸಾಕಷ್ಟು ಧೈರ್ಯ ಬೇಕು. ಆ ಕಾಲದ ಭಾರತೀಯರು ಅದನ್ನು ಹೇರಳವಾಗಿ ಪ್ರದರ್ಶಿಸಿದರು. ಅವರೆಲ್ಲರೂ ವೀರರು. ಹೇಡಿಗಳು ತಮ್ಮ ಯಜಮಾನರ ಕೋಟ್ಗಳಿಗೆ ನೇತಾಡುತ್ತಿದ್ದರು. ಹೇಡಿಗಳು ತಮ್ಮ ಯಜಮಾನರನ್ನು ಹೊಗಳುತ್ತಿದ್ದವರು. ಹೇಡಿಗಳು ತಮ್ಮ ಸ್ವಂತ ಲಾಭಕ್ಕಾಗಿ ಬ್ರಿಟಿಷ್ ರಾಜ್ ಮುಂದೆ ಕ್ಷಮೆಯಾಚಿಸುವ ಅರ್ಜಿಯನ್ನು ಸಲ್ಲಿಸುತ್ತಾರೆ. ಭಿಕ್ಷುಕನೆಂಬ ಹಣೆಪಟ್ಟಿಯನ್ನು ಬಾಪು ಸ್ವಾಗತಿಸುತ್ತಾರೆ. ತನ್ನ ರಾಷ್ಟ್ರ ಮತ್ತು ರಾಷ್ಟ್ರದ ಜನರ ಸಲುವಾಗಿ ಅವರು ಭಿಕ್ಷಾಟನೆಗೆ ತಲೆಕೆಡಿಸಿಕೊಳ್ಳಲಿಲ್ಲ. ಬ್ರಿಟನ್ ಪ್ರಧಾನಿ ಅವರನ್ನು 'ಅರ್ಧ ನಂಗ್ ಫಕೀರ್' ಎಂದು ಕರೆದಾಗ ಬಾಪು ಅವರಿಗೂ ತಲೆಕೆಡಿಸಿಕೊಳ್ಳಲಿಲ್ಲ. ಬ್ರಿಟೀಷ್ ಸಾಮ್ರಾಜ್ಯವು ಅದೇ ಫಕೀರನ ಮುಂದೆ ಮಂಡಿಯೂರಿತು. ಅಂತಿಮವಾಗಿ ಬ್ರಿಟಿಷ್ರು ಶರಣಾದರು. ಈ ಫಕೀರನನ್ನು ಭಾರತ ಈಗ ಭಿಕ್ಷುಕ ಎಂದು ತಳ್ಳಿಹಾಕಿದೆ.
'ಸತ್ಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ' ಎಂದು ತುಷಾರ್ ಗಾಂಧಿ ಬರೆದಿದ್ದಾರೆ, 'ಸುಳ್ಳನ್ನು ಎಷ್ಟು ಜೋರಾಗಿ ಹೇಳಿದರೂ ಮತ್ತು ಸತ್ಯದ ಧ್ವನಿ ಎಷ್ಟು ನಿಧಾನವಾಗಿದ್ದರೂ ಪರವಾಗಿಲ್ಲ, ಸತ್ಯವು ಯಾವಾಗಲೂ ಮೇಲುಗೈ ಸಾಧಿಸುತ್ತದೆ, ಆದರೆ ಸುಳ್ಳನ್ನು ಜೀವಂತವಾಗಿಡಲು ಇನ್ನೂ ಅನೇಕ ಸುಳ್ಳುಗಳನ್ನು ಆಶ್ರಯಿಸಬೇಕಾಗುತ್ತದೆ. ಇಂದು ಹೇಳುತ್ತಿರುವ ಸುಳ್ಳುಗಳಿಗೆ ಉತ್ತರ ಸಿಗಬೇಕಿದೆ ಎಂದು ತುಷಾರ್ ಗಾಂಧಿ ಹೇಳಿದರು.
1947 ರಲ್ಲಿ ಭಾರತದ ಸ್ವಾತಂತ್ರ್ಯದ ಕುರಿತಾದ ಟೀಕೆಗಳಿಗಾಗಿ ತುಷಾರ್ ಗಾಂಧಿ ಕಂಗನಾ ರಣಾವತ್ರ ವಿರುದ್ಧ ವಾಘ್ದಾಳಿ ಮಾಡಿದ ಅವರು. "1947 ರಲ್ಲಿ ಸಾಧಿಸಿದ ಸ್ವಾತಂತ್ರ್ಯವು ಭಿಕ್" ಮತ್ತು ಭಾರತವು 2014 ರಲ್ಲಿ ತನ್ನ ಸ್ವಾತಂತ್ರ್ಯವನ್ನು ಪಡೆದುಕೊಂಡಿತು ಎಂದು ಕಂಗನಾ ಹೇಳುತ್ತಾರೆ. ಇದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ ಮತ್ತು ತ್ಯಾಗವನ್ನು ಅವಮಾನಿಸುತ್ತದೆ ಎಂದು ತುಷಾರ್ ಗಾಂಧಿ ಹೇಳಿದ್ದಾರೆ.