ಅಸಭ್ಯ ಟ್ವೀಟ್ : ಕ್ಷಮೆ ಕೇಳಿ 'ವಿವೇಕ' ಮೆರೆದ ಓಬೇರಾಯ್
ಮುಂಬೈ, ಮೇ 21 : "ಮೀಮ್ಸ್ ಗೆ ನಾನು ಮಾಡಿದ್ದ ಹೇಳಿಕೆಯಿಂದ ಒಬ್ಬೇಒಬ್ಬ ಮಹಿಳೆಗೆ ನೋವಾದರೂ, ಅದಕ್ಕೆ ಕ್ರಮ ತೆಗೆದುಕೊಳ್ಳಲೇಬೇಕು. ದಯವಿಟ್ಟು ಕ್ಷಮಿಸಿ. ನಾನು ಹಿಂದಿನ ಟ್ವಿಟ್ ಅನ್ನು ಡಿಲೀಟ್ ಮಾಡಿದ್ದೇನೆ" ಎಂದು ಚಿತ್ರನಟ ವಿವೇಕ್ ಅಲಿಯಾಸ್ ವಿವೇಕಾನಂದ್ ಓಬೇರಾಯ್ ಅಸಭ್ಯ ಟ್ವೀಟ್ ಗೆ ಕ್ಷಮೆ ಯಾಚಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಡೆಯುವ ಸಮೀಕ್ಷೆಗಳಿಗೂ, ತಮ್ಮ ಮಾಜಿ ಪ್ರೇಯಸಿ ಐಶ್ವರ್ಯ ರೈ ಬಚ್ಚನ್ ಅವರ ಜೀವನದಲ್ಲಿ ಬಂದು ಹೋದ ಪ್ರೇಮಿಗಳಿಗೂ ಹೋಲಿಕೆ ಮಾಡಿದ್ದ ಮೀಮ್ಸ್ ಅನ್ನು ವಿವೇಕ್ ಓಬೇರಾಯ್ ಅವರು ರಿಟ್ವೀಟ್ ಮಾಡಿ, ಹಾಸ್ಯಪ್ರಜ್ಞೆ ತೋರಲು ಹೋಗಿ ಅಪಹಾಸ್ಯಕ್ಕೀಡಾಗಿದ್ದರು.
ಐಶ್ವರ್ಯ ರೈಯನ್ನು ಅನಗತ್ಯವಾಗಿ ಎಳೆತಂದ ಅ'ವಿವೇಕ' ಓಬೇರಾಯ್
'ಓಪಿನಿಯನ್ ಪೋಲ್' ಅಡಿಬರಹವಿರುವ ಚಿತ್ರದಲ್ಲಿ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಇದ್ದಾರೆ, ಅದರ ಕೆಳಗಡೆ, ಎಕ್ಸಿಟ್ ಪೋಲ್ ಚಿತ್ರಕ್ಕೆ 'ಎಕ್ಸಿಟ್ ಪೋಲ್' ಅಂತ ಶೀರ್ಷಿಕೆಯಿದೆ ಮತ್ತು ಕಡೆಯದಾಗಿ, 'ರಿಸಲ್ಟ್' ಶೀರ್ಷಿಕೆಯ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಇರುವ ಚಿತ್ರವನ್ನು ವಿವೇಕ್ ಟ್ವೀಟ್ ಮಾಡಿದ್ದರು.
Even if one woman is offended by my reply to the meme, it calls for remedial action. Apologies🙏🏻 tweet deleted.
— Vivek Anand Oberoi (@vivekoberoi) May 21, 2019
ಇದರ ಬೆನ್ನಲ್ಲೇ, ಬೇಜವಾಬ್ದಾರಿತನದಿಂದ ಟ್ವೀಟ್ ಮಾಡಿದ್ದಕ್ಕೆ ಚಿತ್ರರಂಗದ ಕೆಲವರು ಸೇರಿ ಹಲವಾರು ಜನರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಕೇಂದ್ರ ಮಹಿಳಾ ಆಯೋಗ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಅವರಿಗೆ ನೀಡಿತ್ತು ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗ ಕೂಡ ಅವರಿಗೆ ನೋಟೀಸ್ ಜಾರಿ ಮಾಡಿತ್ತು.
ಕ್ಷಮೆ ಕೇಳಿದ ನಂತರ ವಿವೇಕ್ ಅವರು ಮತ್ತೊಂದು ಟ್ವೀಟ್ ಮಾಡಿದ್ದು, ಅದರಲ್ಲಿ "ಕೆಲವೊಂದು ಬಾರಿ ನಮಗೆ ಯಾವುದು ತಮಾಷೆ ಅಂತ ಅನ್ನಿಸುತ್ತದೆಯೋ ಅದು ಇತರರಿಗೆ ತಮಾಷೆಯೆಂದು ಅನ್ನಿಸದಿರಬಹುದು. ಕಳೆದ 10 ವರ್ಷಗಳಲ್ಲಿ 2000ಕ್ಕೂ ಹೆಚ್ಚು ನಿರ್ಗತಿಕ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸಿದ್ದೇನೆ. ಮಹಿಳೆಯರನ್ನು ಅಗೌರವದಿಂದ ಕಾಣುವುದನ್ನು ನನ್ನಿಂದ ಊಹಿಸಿಕೊಳ್ಳಲೂ ಸಾಧ್ಯವಿಲ್ಲ" ಎಂದು ಅವರು ನೋವಿನಿಂದ ನುಡಿದಿದ್ದಾರೆ.
ವಿವೇಕ್ ಓಬೇರಾಯ್ ಅವರು 'ಪಿಎಂ ನರೇಂದ್ರ ಮೋದಿ' ಎಂಬ ಶೀರ್ಷಿಕೆಯಿರುವ ನರೇಂದ್ರ ಮೋದಿಯವರ ಬಯೋಪಿಕ್ ನಲ್ಲಿ ಮೋದಿ ಪಾತ್ರ ನಿಭಾಯಿಸುತ್ತಿದ್ದು, ಮೇ 24ರಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಅವರ ಈ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಹಿಂದಿ ಚಿತ್ರನಟ ಸುರೇಶ್ ಓಬೇರಾಯ್ ಅವರ ಮಗ ಮತ್ತು ಕರ್ನಾಟಕದ ಮಾಜಿ ರಾಜಕಾರಣಿ ಜೀವರಾಜ್ ಆಳ್ವಾ ಅವರ ಅಳಿಯ (ಪ್ರಿಯಾಂಕಾ ಆಳ್ವಾ ಗಂಡ) ಆಗಿರುವ ವಿವೇಕ್ ಓಬೇರಾಯ್, ಸುನಾಮಿಯಿಂದ ತತ್ತರಿಸಿದ್ದ ತಮಿಳುನಾಡಿನ ಗ್ರಾಮವೊಂದನ್ನು ದತ್ತುಪಡೆದಿದ್ದರು. 'ಯಶೋಧರ ಓಬೇರಾಯ್ ಫೌಂಡೇಷನ್' ಮೂಲಕ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಅವರು ನಿರತರಾಗಿದ್ದಾರೆ.