ವಿಜಯ್ ಮಲ್ಯರನ್ನು ಸ್ವಾಗತಿಸಲು ಅರ್ಥರ್ ರೋಡ್ ಜೈಲ್ ಕಾದಿದೆ
ಮುಂಬೈ, ಫೆಬ್ರವರಿ 6 : ವಿವಿಧ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರು.ನಷ್ಟು ಮೋಸ ಮಾಡಿ ದೇಶಭ್ರಷ್ಟನಾಗಿರುವ ಕರ್ನಾಟಕದ ಉದ್ಯಮಿ ಡಾ. ವಿಜಯ್ ಮಲ್ಯ ಅವರನ್ನು ಇರಿಸಲು ಮುಂಬೈನಲ್ಲಿರುವ ಅರ್ಥರ್ ರೋಡ್ ಜೈಲನ್ನು ಸಿದ್ಧಗೊಳಿಸಲಾಗುತ್ತಿದೆ.
ಯುಕೆಯಿಂದ ಭಾರತಕ್ಕೆ ಗಡಿಪಾರಾಗಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರುತ್ತಿದ್ದಂತೆ ವಿಚಾರಣೆಯನ್ನು ತ್ವರಿತಗೊಳಿಸಲಾಗುವುದು ಎಂದು ಮಲ್ಯ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಹೇಳಿದೆ.
ಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ
ವೆಸ್ಟ್ ಮಿನಿಸ್ಟರ್ ಕೋರ್ಟ್ ನಲ್ಲಿ ಸುದೀರ್ಘ ವಿಚಾರಣೆ ನಡೆಸಿದ ನಂತರ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಯುಕೆ ಗೃಹ ಸಚಿವಾಲಯ ಸೋಮವಾರ ಫೆಬ್ರವರಿ 4ರಂದು ಒಪ್ಪಿಗೆ ನೀಡಿದೆ. ಇದರಿಂದ ಭಾರತ ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಅವರ ಬಳಿಯಿರುವ ಆಸ್ತಿಯ ವಿವರ, ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಅವರು ಪಡೆದ ಸಾಲಗಳ ವಿವರ ಮತ್ತಿತರ ಹಣಕಾಸು ವ್ಯವಹಾರದ ವಿವರಗಳನ್ನು ಅವರಿಂದ ಪಡೆಯಲಾಗುವುದು. ಆರ್ಥಿಕ ಅಪರಾಧ ಎಸಗಿ ದೇಶ ಬಿಟ್ಟು ಪರಾರಿಯಾಗುವ ಇತರರಿಗೆ ಈ ಪ್ರಕರಣ ಪಾಠ ಕಲಿಸಲಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುನೈಟೆಡ್ ಕಿಂಗಡಂನ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ದೇಶಭ್ರಷ್ಟ ಆರ್ಥಿಕ ಸುಸ್ತಿದಾರ ಎಂದು ಹಣೆಪಟ್ಟಿ ಕಟ್ಟಿಸಿಕೊಂಡಿರುವ ವಿಜಯ್ ಮಲ್ಯ ಅವರಿಗೆ ಎರಡು ವಾರಗಳ ಕಾಲಾವಕಾಶವಿದೆ. ತಾವು ಮೇಲ್ಮನವಿ ಸಲ್ಲಿಸಿ ಈ ತೀರ್ಮಾನದ ವಿರುದ್ಧ ಹೋರಾಟ ನಡೆಸುವುದಾಗಿ ಸವಾಲು ಹಾಕಿದ್ದಾರೆ. ಎಲ್ಲ ಬಾಕಿಯನ್ನು ತೀರಿಸಲು ಸಿದ್ಧರಿರುವುದಾಗಿ ಅವರು ಹೇಳಿದ್ದಾರೆ.
ಭಾರತಕ್ಕೆ ಗಡಿ ಪಾರು: ನ್ಯಾಯಾಲಯದ ಮೊರೆ ಹೋಗುತ್ತೇನೆಂದ ಮಲ್ಯ
ಭಾರತ ಒಪ್ಪಿಸಿದ ದಾಖಲೆಗಳ ಆಧಾರದ ಮೇರೆಗೆ ವಿಜಯ್ ಮಲ್ಯ ಅವರು ಮೋಸ, ವಂಚನೆ, ಹಣದ ದುರ್ವ್ಯವಹಾರ ಮಾಡಿದ್ದು ಸಾಬೀತಾಗಿದೆ ಎಂದು ವೆಸ್ಟ್ ಮಿನಿಸ್ಟರ್ ಕೋರ್ಟ್, ಗಡಿಪಾರಿನ ಪ್ರಕ್ರಿಯೆ ನಿಯಮದ ಅನುಗುಣವಾಗಿ ಪ್ರಕರಣವನ್ನು ಯುಕೆ ಗೃಹ ಸಚಿವಾಲಯಕ್ಕೆ ಒಪ್ಪಿಸಿತ್ತು. ಭಾರತದ ಮನವಿಯನ್ನು ಯುಕೆ ಗೃಹ ಸಚಿವಾಲಯ ಅಂಗೀಕರಿಸಿ ಮಲ್ಯರನ್ನು ಗಡಿಪಾರು ಮಾಡಲು ಒಪ್ಪಿಗೆ ನೀಡಿತು.
ಉದ್ಯಮಿ ವಿಜಯ ಮಲ್ಯ ಇನ್ನು ಮೇಲೆ ದೇಶಭ್ರಷ್ಟ ಆರ್ಥಿಕ ಅಪರಾಧಿ!
ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಸುಸ್ತಿದಾರ ಎಂದು ಮುಂಬೈ ಕೋರ್ಟ್ ಘೋಷಿಸಿದ ಮೇಲೆ ಮಲ್ಯರ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ. ಅವರು ಯುಕೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರೂ, ಅವರಿಗೆ ಅಂಟಿಕೊಂಡಿರುವ ಕಳಂಕವನ್ನು ಕೋರ್ಟಿಗೆ ಮನವರಿಕೆ ಮಾಡಲಿದ್ದೇವೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.