ಕ್ರಿಮಿನಲ್ ಕೇಸ್ ಇರುವ ಸಾವರ್ಕರ್ ಗೆ ಭಾರತ ರತ್ನ: 'ಗಾಡ್ ಸೇವ್ ದಿಸ್ ಕಂಟ್ರಿ'
ಮುಂಬೈ, ಅ 15: ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಗೆ ಮರಣೋತ್ತರ 'ಭಾರತ ರತ್ನ' ನೀಡುವುದಾಗಿ ಬಿಜೆಪಿ, ತನ್ನ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ.
ಬಿಜೆಪಿಯ ಪ್ರಣಾಳಿಕೆಯ ವಿರುದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡಾ ಕಿಡಿಕಾರಿದ್ದಾರೆ. "ಶಿವಾಜಿಯನ್ನು ಟೀಕಿಸಿದ್ದ ಸಾರ್ವಕರ್' ಎಂದು ಓವೈಸಿ, ಬಿಜೆಪಿ ವಿರುದ್ದ ತಿರುಗಿಬಿದ್ದಿದ್ದಾರೆ.
ಸಾವರ್ಕರ್ಗೆ ಭಾರತ ರತ್ನ: ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ
ಬಿಜೆಪಿ ಪ್ರಣಾಳಿಕೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, "ಮಹಾತ್ಮ ಗಾಂಧಿಯ ಹತ್ಯೆಯ ವಿಚಾರದಲ್ಲಿ ಸಾವರ್ಕರ್ ವಿಚಾರಣೆಯನ್ನು ಎದುರಿಸಿದ್ದರು".
"ಕಪೂರ್ ಆಯೋಗ ಇದರ ವಿಚಾರಣೆಯನ್ನೂ ನಡೆಸಿತ್ತು. ಇತ್ತೀಚಿನ ಲೇಖನವೊಂದರಲ್ಲಿ ಸಾವರ್ಕರ್ ಹೆಸರೂ ಪ್ರಸ್ತಾಪವಾಗಿತ್ತು. ಗಾಡ್ ಸೇವ್ ದಿಸ್ ಕಂಟ್ರಿ" ಎಂದು ಮನೀಶ್ ತಿವಾರಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಓವೈಸಿ, "ಸಾವರ್ಕರ್, ಅತ್ಯಾಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಬೇಕೆಂದು ಪ್ರತಿಪಾದಿಸಿದ್ದವರು. ಶಿವಾಜಿ ಮಹಾರಾಜ್ ಇದನ್ನು ಒಪ್ಪದಿದ್ದಾಗ, ಅವರ ವಿರುದ್ದವೇ ತಿರುಗಿಬಿದ್ದವರು. ಸ್ವತಃ ಬ್ರಿಟಿಷರ ಅತ್ಯಂತ ವಿಧೇಯ ಸೇವಕ ಎಂದು ಸಾವರ್ಕರ್ ತಮ್ಮನ್ನು ತಾವು ಕರೆದುಕೊಂಡಿದ್ದರು" ಎಂದು ಓವೈಸಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ವಿನಾಯಕ ದಾಮೋದರ ಸಾವರ್ಕರ್ ಅಲ್ಲದೆ ಸಮಾಜ ಸುಧಾರಕರಾದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರಿಗೂ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡುವುದಾಗಿ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.
ಚುನಾವಣಾ ಪ್ರಚಾರದ ವೇಳೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, "ಭಾರತ ವಿಭಜನೆಯ ಸಮಯದಲ್ಲಿ ಸಾವರ್ಕರ್ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಸೃಷ್ಟಿಯೇ ಆಗುತ್ತಿರಲಿಲ್ಲ" ಎಂದಿದ್ದರು.