"ಅವರು ಮನಸ್ಸು ಮಾಡಿದರೆ 2 ತಾಸಿನಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗತ್ತೆ"
ಮುಂಬೈ, ನವೆಂಬರ್ 05: "ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮತ್ತಷ್ಟು ವಿಳಂಬವಾಗುತ್ತಿದ್ದು, ಈ ಎಲ್ಲ ಸಮಸ್ಯೆಯನ್ನು ಪರಿಹರಿಸುವ ತಾಕತ್ತಿರುವುದು ಒಬ್ಬರಿಗೆ ಮಾತ್ರ. ಅವರು ಮನಸ್ಸು ಮಾಡಿದರೆ ಎರಡು ಗಂತೆಯಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗುತ್ತದೆ" ಎಂದು ಶಿವಸೇನಾ ಮುಖಂಡರೊಬ್ಬರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ನಡುವೆ ಸರ್ಕಾರ ರಚನೆ ಕುರಿತಂತೆ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾತ್ರ ಸಾಧ್ಯ ಎಂದು ಶಿವಸೇನೆ ಮುಖಂಡ ಕಿಶೋರ್ ತಿವಾರಿ ಹೇಳಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ಶಿವಸೇನೆ ಪತ್ರ
ಈ ಕುರಿತು ಆರೆಸ್ಸೆಸ್ ಮುಖಂಡರು ನಿರ್ಧರಿಸಿ, ನಿತಿನ್ ಗಡ್ಕರಿ ಅವರನ್ನು ಸಂಧಾನಕ್ಕೆ ಕಳಿಸಬೇಕು ಎಂದು ಅವರು ಹೇಳಿದ್ದಾರೆ.
ಎರಡು ತಾಸಿನಲ್ಲಿ ಸರ್ಕಾರ ರಚನೆ
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎದ್ದಿರುವ ಭಿನ್ನಾಭಿಪ್ರಾಯದ ಕುರಿತು ಮಾತನಾಡುತ್ತಿದ್ದ ಕಿಶೋರ್ ತಿವಾರಿ, "ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಧಾನಕ್ಕೆ ಹೋಗುವಂತೆ ಒತ್ತಾಯಿಸಬೇಕು. ಅವರು ಮನಸ್ಸು ಮಾಡಿದರೆ ಮಹಾರಾಷ್ಟ್ರದಲ್ಲಿ ಎರಡೇ ಎರಡು ತಾಸಿನಲ್ಲಿ ಸರ್ಕಾರ ರಚನೆಯಾಗುತ್ತದೆ" ಎಂದು ತಿವಾರಿ ಹೇಳಿದರು.
ಭಾಗವತ್ ಗೆ ತಿವಾರಿ ಪತ್ರ
ಈ ಕುರಿತು ಆರೆಸ್ಸೆಸ್ ಮುಖಂಡ ಭಾಗವತ್ ಅವರಿಗೆ ತಿವಾರಿ ಪತ್ರ ಬರೆದಿದ್ದು, "ಅಕ್ಟೋಬರ್ 24 ರಂದೇ ಚುನಾವಣಾ ಫಲಿತಾಂಶ ಹೊರಬಂದಿದ್ದರೂ ಇನ್ನೂ ಸರ್ಕಾರ ರಚನೆಯಾಗಿಲ್ಲ. ಈ ಸನ್ನಿವೇಶವನ್ನು ಬದಲಿಸುವಂತ್ತ ಆರೆಸ್ಸೆಸ್ ಗಂಭೀರವಾಗಿ ಯೋಚಿಸಬೇಕು, ಇಲ್ಲವೆಂದರೆ ಜನರಿಗೂ ಸಮಸ್ಯೆಯಾಗುತ್ತದೆ" ಎಂದಿದ್ದಾರೆ.
ಶಿವಸೇನೆ ಜೊತೆ ಕಾಂಗ್ರೆಸ್ ಮೈತ್ರಿ: ಸೋನಿಯಾ ಗಾಂಧಿ ಹೇಳಿದ್ದೇನು?
ಬಿಜೆಪಿಯಲ್ಲಿ ಗಡ್ಕರಿ ಮೂಲೆಗುಂಪು
ಬಿಜೆಪಿಯಲ್ಲಿ ಗಡ್ಕರಿಯನ್ನು ಮೂಲೆಗಂಪು ಮಾಡಲಾಗುತ್ತಿದೆ ಎಂದಿರುವ ತಿವಾರಿ,ಅ ವರಿಂದ ಮಾತ್ರವೇ ಈ ಸಮಸ್ಯೆ ಪರಿಹಾರವಾಗಬಲ್ಲದು ಎಂದಿದ್ದಾರೆ. ವಿದರ್ಭ ಜನ ಆಂದೋಲನ ಸಮಿತಿ ಎಂಬ ಎನ್ ಜಿಒ ಸ್ಥಾಪಿಸಿದ್ದ ತಿವಾರಿ ಅಕ್ಟೋಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿಯಿಂದ ಶಿವಸೇನೆಗೆ ಸೇರ್ಪಡೆಯಾಗಿದ್ದರು.
ನಿತಿನ್ ಗಡ್ಕರಿಯಿಂದ ಸಮಸ್ಯೆ ಪರಿಹಾರ?
ಮಹಾರಾಷ್ಟ್ರ ರಾಜಕೀಯದಲ್ಲಿ ಎಂಥ ಸಮಸ್ಯೆ ಎದುರಾದರೂ ಕೇಮದ್ರ ಸಚಿವ ನಿತಿನ್ ಗಡ್ಕರಿ ಅವರೇ ಸಂಧಾನಕಾರರಾಗಿ ಸಮಸ್ಯೆ ಪರಿಹರಿಸಿದ ಉದಾಹರಣೆಗಳು ಸಾಕಷ್ಟಿವೆ. ಈ ಬಾರಿಯ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ಮೈತ್ರಿಗೆ ಸಿದ್ಧವಿರದ ಶಿವಸೇನೆ ಜೊತೆ 'ಚೌಕಾಸಿ' ಮಾಡಿ, ಮೈತ್ರಿಗೆ ಒಪ್ಪಿಸಿದ ಕೀರ್ತಿ ಗಡ್ಕರಿ ಅವರಿಗೆ ಸಲ್ಲುತ್ತದೆ!